ಸುಡು ಬಿಸಿಲಿನಂತೆ ರಂಗೇರುತ್ತಿದೆ ಲೋಕ ಸಮರ: ಚಾಮರಾಜನಗರ ಕ್ಷೇತ್ರದಲ್ಲಿ ಮಳೆಯಂತೆ ಅತಿ ಹೆಚ್ಚು ದುಡ್ಡು ಸುರಿದ ಅಭ್ಯರ್ಥಿಗಳಿವರು
ಚಾಮರಾಜನಗರ, ಏಪ್ರಿಲ್, 15: ಲೋಕಸಭಾ ಚುನಾವಣೆ 2024ರ ಸಂಬಂಧ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಏಪ್ರಿಲ್ 11ರವರೆಗಿನ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಿದ್ದು, ಏಪ್ರಿಲ್ 13ರಂದು ನಡೆದ ಮೊದಲ ವೆಚ್ಚ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗಿರುವ ವಿವರ ಇಲ್ಲಿದೆ ಗಮನಿಸಿ.
ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಅವರು 46,250 ರೂಪಾಯಿ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಎಸ್.ಬಾಲರಾಜು 13,98,165 ರೂಪಾಯಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರು 16,45,009 ರೂಪಾಯಿ, ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಸಿ.ಎಂ.ಕೃಷ್ಣ 12,500 ರೂಪಾಯಿ, ಕರ್ನಾಟಕ ಜನತಾ ಪಾರ್ಟಿ (ಕೆ.ಜಿ.ಪಿ) ಅಭ್ಯರ್ಥಿ ನಿಂಗರಾಜು.ಎಸ್ 12,500 ರೂಪಾಯಿ, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಭ್ಯರ್ಥಿ ಪ್ರಸನ್ನ ಕುಮಾರ್.ಬಿ 12,500 ರೂಪಾಯಿ, ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ ಅಭ್ಯರ್ಥಿ ಮಹೇಶ್.ಎಂ 14,375 ರೂಪಾಯಿ ವೆಚ್ಚವನ್ನು ಹೊಂದಿದ್ದಾರೆ.

ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಸುಮ.ಎಸ್.20,586 ರೂಪಾಯಿ, ಪಕ್ಷೇತರ ಅಭ್ಯರ್ಥಿಗಳಾದ ಎನ್. ಅಂಬರೀಷ್ ಅವರು 12,500 ರೂಪಾಯಿ, ನಿಂಗರಾಜು.ಜಿ 12,500 ರೂಪಾಯಿ, ಪ್ರದೀಪ್ ಕುಮಾರ್.ಎಂ 12,500 ರೂಪಾಯಿ, ಮಹದೇವಸ್ವಾಮಿ.ಬಿ.ಎಂ 12,500 ರೂಪಾಯಿ, ಜಿ.ಡಿ.ರಾಜಗೋಪಾಲ 13,680 ರೂಪಾಯಿ ಹಾಗೂ ಹೆಚ್.ಕೆ.ಸ್ವಾಮಿ 12,500 ರೂಪಾಯಿಗಳ ಚುನಾವಣಾ ವೆಚ್ಚದ ವಿವರ ಸಲ್ಲಿಸಿದ್ದಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
ಇನ್ನು, ಇವರಲ್ಲಿ ಹೆಚ್ಚು ಖರ್ಚು ಮಾಡಿರುವ ಅಭ್ಯರ್ಥಿಗಳಾಗಿ ಕಾಂಗ್ರೆಸ್ನ ಸುನೀಲ್ ಬೋಸ್ ಹಾಗೂ ಬಿಜೆಪಿಯ ಬಾಲರಾಜು ಇದ್ದಾರೆ.
ಕಾಂಗ್ರೆಸ್ನವರದ್ದು ಹಳೇ ಡೈಲಾಗ್ಗಳು: ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದವರು, ಅವರ ನಡವಳಿಕೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕುಮಾರಸ್ವಾಮಿ ಅವರ ಹೇಳಿಕೆಯನ್ನು ಕಾಂಗ್ರೆಸ್ ತಿರುಚಿದೆ. ಕಾಂಗ್ರೆಸ್ನವರದ್ದು ಎಲ್ಲಾ ಹಳೇ ಡೈಲಾಗ್ಗಳು. ಅವರಿಗೆ ಮಾತನಾಡಲು ವಿಷಯವೇ ಇಲ್ಲ ಎಂದು ಕಿಡಿಕಾರಿದರು.
ಜೆಡಿಎಸ್ ಅಸ್ತಿತ್ವ ಇಲ್ಲಾ ಎಂದು ಆಗಾಗ್ಗೆ ಡಿಕೆಶಿ ಹೇಳುತ್ತಿರುತ್ತಾರೆ. ನಾನು ಅವರಿಗೆ ಕೇಳುತ್ತೇನೆ ಕಾಂಗ್ರೆಸ್ ಅಸ್ತಿತ್ವ ಎಲ್ಲಿದೆ? ಇಡೀ ದೇಶದಲ್ಲಿ ಅವರು ಎಷ್ಟು ಸ್ಥಾನ ಗೆದ್ದಿದ್ದಾರೆ? ಉತ್ತರ ಪ್ರದೇಶದಲ್ಲಿ ಅವರ ಪಕ್ಷದ 4 ಶಾಸಕರಿದ್ದಾರೆ, ಕರ್ನಾಟಕದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ 19 ಸ್ಥಾನ ಗೆದ್ದಿದೆ. ಜನ ಆಶೀರ್ವಾದ ಮಾಡಿದ್ದಾರೆ.
ಈಗಾಗಲೇ 11 ತಿಂಗಳಲ್ಲಿ ಕಾಂಗ್ರೆಸ್ನವರ ಬಂಡವಾಳ ಗೊತ್ತಾಗಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಸರ್ಕಾರ ದಿವಾಳಿಯಾಗಿದೆ, ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಕಿಡಿಕಾರಿದರು.
ಜೆಡಿಎಸ್ ಹಾಗೂ ಬಿಜೆಪಿಯದ್ದು ಸ್ವಾಭವಿಕ ಮೈತ್ರಿ. ಇಡೀ ರಾಜ್ಯದಲ್ಲಿ ಎನ್ಡಿಎಗೆ ಉತ್ತಮ ವಾತಾವರಣ ಇದೆ. ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಸಿದ್ದು-ಪ್ರಸಾದ್ ಭೇಟಿ ವಿಶೇಷವಲ್ಲ ಅದೊಂದು ವಿಚಿತ್ರ: ಸಿದ್ದರಾಮಯ್ಯ ಹಾಗೂ ಸಂಸದ ಶ್ರೀನಿವಾಸಪ್ರಸಾದ್ ಭೇಟಿ ಮಾಡಿರುವುದು ವಿಶೇಷವಲ್ಲ. ಅದೊಂದು ವಿಚಿತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಸಿದ್ದರಾಮಯ್ಯ-ಪ್ರಸಾದ್ ಭೇಟಿ ಮಾಡಿರುವುದು ವಿಚಿತ್ರ. ಈಗಾಗಲೇ, ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಅವರ ಅಂತರಾಳದ ಮಾತುಗಳನ್ನು ಯಡಿಯೂರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಾಲರಾಜು ಅವರಿಗೆ ತಿಳಿಸಿದ್ದಾರೆ. ಇದರ ನಡುವೆ ಈ ಎಲ್ಲಾ ವಿಚಿತ್ರಗಳು ನಡೆಯುತ್ತಿದೆ ಎಂದು ಸಿಎಂ ಭೇಟಿಗೆ ವ್ಯಂಗ್ಯ ಮಾಡಿದರು.
ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಹೊಂದಿದ್ದು, ಹುಷಾರಾಗಿ ಕೆಲಸ ಮಾಡಿ, ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿ ಎಂದು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ ಎಂದರು.












Click it and Unblock the Notifications