ಅಕ್ರಮ ಹಣವಲ್ಲ, ಸಕ್ರಮ ಎಂದ ಕರವೇ ಗೌಡ್ರು
ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಇಬ್ಭಾಗವಾದ ಮೇಲೆ ಕರವೇ ಎಂದರೆ ನಾರಾಯಣ ಗೌಡರು ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ. ಒಂದಾನೊಂದು ಕಾಲದಲ್ಲಿ ರಸಮಂಜರಿ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಬದಲಿಗೆ ಬೇರೆ ಭಾಷೆ ಹಾಡಿದರು ಎಂಬ ಕಾರಣಕ್ಕೆ ಸಿಟ್ಟಾಗಿ, ರೊಚ್ಚಿಗೊದ್ದಿದ್ದ ತರುಣ ಈಗ ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಸ್ಥಾನ ಮಾನದಲ್ಲಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಜಯದೇವ ಪ್ರಸನ್ನ ಹಾಗೂ ನಾರಾಯಣಗೌಡರು ಪರಸ್ಪರ ಉಚ್ಚಾಟನೆ ಮಾಡಿಕೊಂಡು ತಮ್ಮ ಸಚ್ಚಾರಿತ್ರ್ಯದ ಪ್ರಮಾಣಪತ್ರ ನೀಡುವುದರ ಬದಲಿಗೆ ಮುಖ್ಯವಾಗಿ ನಾರಾಯಣ ಗೌಡರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗ(ಅದರ ಸತ್ಯಾಸತ್ಯತೆ ಮಾತು ಆಮೇಲೆ)ಪಡಿಸಲಿ ಎಂಬ ಕೂಗು ಎದ್ದಿದ್ದು ಅಲ್ಲೇ ಸತ್ತಿ ಹೋಗಿದೆ.
ಕನ್ನಡ ಪರ ಹೋರಾಟಗಾರರಿಗೂ ಚುನಾವಣಾ ಆಕ್ರಮಕ್ಕೂ ಏನು ಸಂಬಂಧ. ಯಾವ ಪಕ್ಷಕ್ಕೆ ಸೇರಿದ್ದ ಹಣ ಎಂಬುದು ಬಹಿರಂಗವಾಗುವುದೇ? ಅನುಮಾನ. ಕರವೇ ಗೌಡ್ರು ತಮ್ಮ ಮನೆಯಲ್ಲಿ ಸಿಕ್ಕ ಹಣ ಸಾಲವಾಗಿ ತಂದಿದ್ದು ಎಂದಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುವ ಸ್ಥಿತಿಗೆ ಬಂದಿದ್ದಾರೆಯೇ?
ಪ್ರಕರಣದ ಬಗ್ಗೆ: ಕರವೇ ಅಧ್ಯಕ್ಷ ಟಿ.ಎ ನಾರಾಯಣ ಗೌಡರ ನಾಗರಭಾವಿ ಮನೆಯಲ್ಲಿ ಇದ್ದ ಸೂಕ್ತ ದಾಖಲೆಗಳಿಲ್ಲದ 42.50 ಲಕ್ಷ ರುಪಾಯಿ ನಗದು ಹಣವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಜ್ಞಾನಭಾರತಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ನಾರಾಯಣ ಗೌಡ ಅವರು ಬ್ಯಾಂಕ್ ಸಾಲ ಪಡೆದಿದ್ದಕ್ಕೆ ಸೂಕ್ತ ದಾಖಲೆಗಳು ಕಂಡು ಬಂದಿಲ್ಲ. ಈ ಬಗ್ಗೆ ಕರವೇ ಗೌಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚುನಾವಣಾ ಅಕ್ರಮ ಹಣವಾಗಿದ್ದರೆ ಯಾವ ಪಕ್ಷದ್ದು ಎಂದು ಹೇಳುವ ಧೈರ್ಯ ಯಾರೂ ಮಾಡಿಲ್ಲ.