ಬೆಳಗಾವಿಯಲ್ಲಿ ಸಾವಿರಾರು ಕನ್ನಡ ಬಾವುಟಗಳನ್ನು ಪ್ರದರ್ಶನ ಮಾಡುತ್ತೇವೆ: ಕರವೇ ನಾರಾಯಣ ಗೌಡ
ಧಾರವಾಡ, ಡಿಸೆಂಬರ್ 6: ಬೆಳಗಾವಿ ಮಹಾನಗರಕ್ಕೆ ಮಹಾರಾಷ್ಟ್ರ ಸಚಿವರು ಹಾಗೂ ಶಾಸಕರು ಬರುವುದನ್ನು ತಡೆಯಬೇಕು ಎಂದು ನಾವು ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.
ಮಂಗಳವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ಸಚಿವರು ಕರ್ನಾಟಕದ ಗಡಿ ಒಳಗೆ ಬರಬಾರದು. ಕರ್ನಾಟಕದೊಳಗೆ ಬಂದು ಪ್ರಚೋದನಾತ್ಮಕ ಹೇಳಿಕೆಯನ್ನು ಕೊಡಬಾರದು. ಕರ್ನಾಟಕದ ಸ್ವಾಭಿಮಾನವನ್ನು ಕೆಣುಕಬಾರದು. ಕರ್ನಾಟಕವನ್ನು, ಕರ್ನಾಟಕ ಸರ್ಕಾರವನ್ನು, ಕರ್ನಾಟಕದ ಜನರನ್ನು ಹೀನಾಮಾನವಾಗಿ ಮಾತನಾಡಬಾರದು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಮಹಾನಗರಕ್ಕೆ ಮಹಾರಾಷ್ಟ್ರ ಸಚಿವರು ಹಾಗೂ ಶಾಸಕರು ಬರುವುದನ್ನು ತಡೆಯಲೇಬೇಕು. ಅವರು ಕರ್ನಾಟಕಕ್ಕೆ ಬರುವ ಅಗತ್ಯವಿಲ್ಲ. ಆದರೂ ಒಂದೇ ಬರುತ್ತಾರೆ ಎಂದರೆ ನೋಡೋಣ. ಇದು ಆರೋಗ್ಯಕರ ಬೆಳವಣಿಗೆ ಅಲ್ಲವೇ ಅಲ್ಲ. ಅಲ್ಲಿನ ಸಚಿವರು ದುರಂಕಾರದಿಂದ ನಮ್ಮನು ತಡೆಯೋಕೆ ನೀವ್ಯಾರು ಎಂದು ಹೇಳಿಕೆ ಕೊಡುತ್ತಾರೆ. ಮಹಾರಾಷ್ಟ್ರ ಸಚಿವರು ಈ ರೀತಿ ಪ್ರಚೋದನಾಕಾರಿ ಹೇಳಿಕೆ ಕೊಡಬಾರದು ಎಂದರು.

ಇನ್ನು ಕರ್ನಾಟಕದ ಸ್ವಾಭಿಮಾನಕ್ಕೆ ಯಾರೂ ಧಕ್ಕೆ ತರಬಾರದು. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ಸುಖಾಸುಮ್ಮನೆ ಗೊಂದಲ ಸಹ ಬೇಡ ಎನ್ನುವ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ನಾವು ಎಚ್ಚರಿಕೆ ಕೊಡುತ್ತೇವೆ. ನೀವು ಮಹಾರಾಷ್ಟ್ರ ಸಚಿವರನ್ನು ತಡೆಯಲು ಆಗದಿದ್ದಲ್ಲಿ ನಾವು ಹಾಗೂ ನಮ್ಮ ಕಾರ್ಯಕರ್ತರು ತಡೆಯುವ ಕೆಲಸ ಮಾಡುತ್ತೇವೆ. ಇದು ನಮ್ಮ ಸ್ವಾಭಿಮಾನ ಎಂದು ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.
ಇನ್ನು ನಾವು ಬೆಳಗಾವಿ ಬರುತ್ತೇವೆ. ಕನ್ನಡ ಪರ ಸಂಘದ ಸಾವಿರಾರು ಕಾರ್ಯಕರ್ತರು ಬೆಳಗಾವಿಗೆ ಬರುತ್ತಾರೆ. ಕಿತ್ತೂರು ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತೇವೆ. ಅಲ್ಲಿ ಸಾವಿರಾರು ಕನ್ನಡ ಬಾವುಟಗಳನ್ನು ಪ್ರದರ್ಶನ ಮಾಡುತ್ತೇವೆ. ಅಲ್ಲಿ ಸಾರ್ವಜನಿಕವಾಗಿ ಮಾತನಾಡುತ್ತೇನೆ. ನಮ್ಮ ಮಾತನ್ನು ಮೀರಿ ಮಹಾರಾಷ್ಟ್ರ ಸಚಿವರು ಬರುವುದನ್ನು ತಡೆಯಲು ಸಹ ನಾವು ತಯಾರಿ ಮಾಡಿಕೊಂಡಿದ್ದೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಂಗಳೂರಿನಿಂದ ಸುಮಾರು ನೂರು ವಾಹನಗಳಲ್ಲಿ ನಾವು ಬೆಳಗಾವಿ ಕಡೆ ಹೊರಟಿದ್ದೇವೆ. ಮೂವತ್ತೊಂದು ಜಿಲ್ಲೆಯಿಂದ ಕಾರ್ಯಕರ್ತರು ಬೆಳಗಾವಿಗೆ ಬರುತ್ತಿದ್ದಾರೆ. ಅದೇನಾದರೂ ಚಿಂತೆ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದರೂ ತೊಂದರೆ ಇಲ್ಲ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಬಾರದು, ಅವರನ್ನು ಅಲ್ಲಿಯೇ ಗಡಿಯಲ್ಲಿ ತಡೆಯಬೇಕು. ಅಲ್ಲೇ ಬಂಧಿಸಿ ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications