ಜನಾ ಸೇವೆಗೆ ನಿಂತ ಕೆಎಂಎಫ್ ರೆಡ್ಡಿ ಸ್ಪರ್ಧಿಸುತ್ತಿಲ್ಲ
ಬಳ್ಳಾರಿ ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಸೋಮಶೇಖರ ರೆಡ್ಡಿ ನಿನ್ನೆ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಅವರು ಯಾವುದೇ ನಾಮಪತ್ರ ಸಲ್ಲಿಸಿಲ್ಲ. ಇದರಿಂದ ಪಕ್ಷಕ್ಕೆ ಒಂದು ಸೀಟ್ ಗ್ಯಾರಂಟಿ ಎಂಬ ಭರವಸೆಯಿದ್ದಾಗ ಕೆಎಂಎಫ್ ರೆಡ್ಡಿ ಕಣದಿಂದ ದೂರವಾಗಿರುವುದು ಕುತೂಹಲ ಮತ್ತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನಿನ್ನೆ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಬಳ್ಳಾರಿ ನಗರ ಕ್ಷೇತ್ರಕ್ಕೆ ಮುರಳಿ ಎಂಬುವರು ಕೊನೆಯ ಕ್ಷಣದಲ್ಲಿ ಬಿಎಸ್ಸಾರ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದ್ದಾರೆ! ಗಮನಾರ್ಹವೆಂದರೆ, ನಿನ್ನೆ ಮಧ್ಯಾಹ್ನದವರೆಗೂ ಸೋಮಶೇಖರ ರೆಡ್ಡಿ ಅವರೇ ಬಿಎಸ್ಆರ್ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು.
ಆದರೆ ಕೊನೆಯ ಗಳಿಗೆಯಲ್ಲಿ ಅವರು ಕಣದಿಂದ ಹಿಂದೆ ಸರಿದುಬಿಟ್ಟರು. ಶ್ರೀರಾಮುಲು ಹಾಗೂ ಪಕ್ಷದ ಇತರ ಪ್ರಮುಖರು ನಾಮಪತ್ರ ಸಲ್ಲಿಸುವಂತೆ ಸೋಮಶೇಖರ ರೆಡ್ಡಿಯವರನ್ನು ಪರಿಪರಿಯಾಗಿ ಬೇಡಿಕೊಂಡರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಸಂಚರಿಸುವ ಉದ್ದೇಶದಿಂದ ಸೋಮಶೇಖರ ರೆಡ್ಡಿ ಸ್ಪರ್ಧಿಸುತ್ತಿಲ್ಲ ಎಂದು ಶ್ರೀರಾಮುಲು ಸಮಜಾಯಿಷಿ ನೀಡಿದ್ದಾರಾರೂ, ಇಡೀ ಬೆಳವಣಿಗೆಯನ್ನು ಕಣ್ಣಂಚಿನಲ್ಲಿ ಗಮನಿಸಿದ ಬಳ್ಳಾರಿಗರು ರೆಡ್ಡಿ ಬದರ್ಸ್ ಮತ್ತು ರಾಮುಲು ಮಧ್ಯೆ ಸರಿ ಬರುತ್ತಿಲ್ಲ ಎಂದು ಸ್ವಗತದಲ್ಲಿ ಹೇಳಿಕೊಂಡಿದ್ದಾರೆ.
ಲಾಡ್ ನಾಮಪತ್ರ ಸಲ್ಲಿಕೆ: ಹಲವು ಗೊಂದಗಳ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಿಲ್ ಲಾಡ್ ಅವರು ಇದೇ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಬಂಡಾಯಗಾರದ ಕೆಸಿ ಕೊಂಡಯ್ಯ, ಎಂ ದಿವಾಕರಬಾಬು, ಅಲ್ಲಂ ವೀರಭದ್ರಪ್ಪ ಅವರುಗಳು ನಿನ್ನೆ ಅಪ್ಪಿತಪ್ಪಿಯೂ ಬಳ್ಳಾರಿಗರ ಕಣ್ಣಿಗೆ ಕಾಣಲಿಲ್ಲ.
ಬಂಡಾಯವೋ ಬಂಡಾಯ: ಬಿಜೆಪಿಯಿಂದ ವಿರೂಪಾಕ್ಷಗೌಡ, ಜೆಡಿಎಸ್ನಿಂದ ಮುನ್ನಾ ಭಾಯಿ, ಕೆಜೆಪಿ ಅಭ್ಯರ್ಥಿಯಾಗಿ ಪಾರ್ಥಸಾರಥಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ಕೋನಂಕಿ ರಾಮಪ್ಪ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹಂಪಿ ರಮಣ, ಕೆಜೆಪಿ ಬಂಡಾಯ ಅಭ್ಯರ್ಥಿಯಾಗಿ ಬಂಡೇಗೌಡ ನಾಮಪತ್ರ ಸಲ್ಲಿಸಿದರು.