ಬಿಜೆಪಿ ಮೈತ್ರಿಯಷ್ಟೇ, ವಿಲೀನವಿಲ್ಲ: ರಾಮುಲು ನಿಲುವೇನು?
ಬಳ್ಳಾರಿ, ಮಾರ್ಚ್ 11: ಕಳೆದ ವಾರ 'ತಾನು ಬಿಜೆಪಿಗೆ ಬಂದಾಯ್ತು. ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ನಾನೇ ಬಿಜೆಪಿಯ ಅಭ್ಯರ್ಥಿ' ಎಂದಿದ್ದ ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ ಶ್ರೀರಾಮುಲು ಅವರನ್ನು ಬಿಜೆಪಿ ನಿರಾಶೆಗೊಳಿಸಿದೆ.
ಅಮ್ಮ ಸುಷ್ಮಾ ಸ್ವರಾಜ್ ಮತ್ತು ಎಲ್ ಕೆ ಅಡ್ವಾಣಿ ಅವರ ಕಡು ವಿರೋಧದಿಂದಾಗಿ ಶ್ರೀರಾಮುಲು ಬಿಜೆಪಿ ಮರಳುವುದು ಸಾಧ್ಯವಾಗಿಲ್ಲ. ಆದರೆ ಇದಕ್ಕೊಂದು ಉಪಾಯ ಕಂಡುಕೊಂಡಿರುವ ಬಿಜೆಪಿ ವರಿಷ್ಠರು 'ಅಳಿಯ ಅಲ್ಲ ಮಗಳ ಗಂಡ' ಎಂಬಂತೆ ಚುನಾವಣೆ ಮೈತ್ರಿಯ ರೂಪದಲ್ಲಿ ರಾಮುಲು ಜತೆ ಮರು ಸಂಬಂಧ ಸಾಧಿಸುವತ್ತ ಹೆಜ್ಜೆಯಿಟ್ಟಿದೆ.
ಅಂದರೆ 'ಮೋದಿ ಪ್ರಧಾನಿ ಆಗಬೇಕೆಂಬ ಬಯಕೆ ನಿಮ್ಮದೂ ಆಗಿದೆ. ಹಾಗಾಗಿ ನೀವು ಚುನಾವಣೆಯಲ್ಲಿ ಗೆದ್ದು ಬನ್ನಿ, ಆಗ ಮೈತ್ರಿ ಹೆಸರಿನಲ್ಲಿ ನೀವು NDA ಸೇರಬಹುದು' ಎಂದು ಬಿಜೆಪಿ ಮಂದಿ ರಾಮುಲುಗೆ ಅಫರ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಬಿಜೆಪಿ ಆಹ್ವಾನಕ್ಕೆ ರಾಮುಲು ಉತ್ತರವೇನು? ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಬಿಎಸ್ಸಾರ್ ಕಾಂಗ್ರೆಸ್ಸನ್ನು ಬರಖಾಸ್ತುಗೊಳಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಗೊತ್ತಿಲ್ಲ. ಬಿಜೆಪಿ ರಾಮುಲು ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲವಾ? ಗೊತ್ತಿಲ್ಲ. ಇನ್ನು, ರಾಮುಲುಗಾಗಿ ಮಾತ್ರ ಒಂದೇ ಒಂದು (ಬಳ್ಳಾರಿ) ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಡುತ್ತದಾ? ಅಥವಾ ಇನ್ನೂ ಮೂರ್ನಾಲ್ಕು ಕ್ಷೇತ್ರಗಳನ್ನು ರಾಮುಲುಗೆ ಧಾರೆಯೆರೆದು ಕೊಡುತ್ತದಾ? ಗೊತ್ತಿಲ್ಲಾ.
ಕೆಎಂಎಫ್ ಅಧ್ಯಕ್ಷ ಜಿ ಸೋಮಶೇಖರ ರೆಡ್ಡಿ ಅವರ ನಿಲುವೇನು? ಗೊತ್ತಿಲ್ಲ. ಹಾಲಿ ಸಂಸದೆ ಜೆ ಶಾಂತಾ ಕಣಕ್ಕಿಳಿಯುತ್ತಾರಾ? ಗೊತ್ತಿಲ್ಲ.