Karnataka Weather: ಮನೆಯಿಂದ ಹೊರಡುವ ಮುನ್ನ ಯೋಚಿಸಿ, ಜೂನ್ 5ರವರೆಗೆ ಈ 14 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
ಕರ್ನಾಟಕದಾದ್ಯಂತ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪ್ರಮುಖವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಜೂನ್ 5ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದೆ.
ಯಾವ ಜಿಲ್ಲೆಗಳಲ್ಲಿ ಮಳೆ?
ಭಾರಿ ಮಳೆಯ ಮುನ್ನೆಚ್ಚರಿಕೆ ಇರುವ ಪ್ರದೇಶಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ದಾವಣಗೆರೆ ಮತ್ತು ಕೊಡಗು ಜಿಲ್ಲೆಗಳು ಸೇರಿವೆ. ಈ ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಂಭವವಿದೆ. ಮತ್ತೊಂದೆಡೆ ಬಳ್ಳಾರಿ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಕಂಡುಬರಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲೂ ಮಳೆಯಾಗಬಹುದು. ಇನ್ನು ಉತ್ತರ ಒಳನಾಡಿನ ಹಾವೇರಿ, ಗದಗ್, ಕೊಪ್ಪಳ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವೇ ಮುಂದುವರಿಯಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ವಾತಾವರಣ ಸಂಪೂರ್ಣವಾಗಿ ಬದಲಾಗಲಿದೆ. ಬೆಳಗ್ಗಿನ ಅವಧಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದರೂ, ಸಂಜೆಯಾಗುತ್ತಿದ್ದಂತೆ ದಟ್ಟ ಮೋಡಗಳು ಕವಿದು ಕೆಲವು ಪ್ರದೇಶಗಳಲ್ಲಿ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆ ಅಪ್ಪಳಿಸಲಿದೆ. ನಗರದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದ್ದು, ಭಾರಿ ಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಹಳೆಯ ಕಟ್ಟಡಗಳು, ದುರ್ಬಲ ಮರಗಳು ಹಾಗೂ ವಿದ್ಯುತ್ ಕಂಬಗಳ ಬಳಿ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಸೂಚಿಸಲಾಗಿದೆ.
ಮುಂಗಾರು ಚಲನೆ ಹೇಗಿದೆ?
ನೈಋತ್ಯ ಮುಂಗಾರು ಮಾರುತಗಳು ಇಂದು ಅರೇಬಿಯನ್ ಸಮುದ್ರದ ನೈಋತ್ಯ ಮತ್ತು ಆಗ್ನೇಯ ಭಾಗಗಳು, ಲಕ್ಷದ್ವೀಪದ ದ್ವೀಪಗಳು ಹಾಗೂ ಕೊಮೊರಿನ್ ಪ್ರದೇಶಗಳಿಗೆ ಮತ್ತಷ್ಟು ವ್ಯಾಪಿಸಿವೆ. ಇದರೊಂದಿಗೆ ಬಂಗಾಳ ಕೊಲ್ಲಿಯ ನೈಋತ್ಯ, ಆಗ್ನೇಯ, ಪಶ್ಚಿಮ-ಮಧ್ಯ, ಪೂರ್ವ-ಮಧ್ಯ ಭಾಗಗಳು ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಪ್ರದೇಶಗಳಿಗೂ ಮುಂಗಾರು ಮಾರುತಗಳು ಯಶಸ್ವಿಯಾಗಿ ಪ್ರವೇಶಿಸಿವೆ.
ಮುಂಬರುವ 5 ದಿನಗಳಲ್ಲಿ ನೈಋತ್ಯ ಮುಂಗಾರು ಮತ್ತಷ್ಟು ವೇಗವಾಗಿ ಮುನ್ನಡೆಯಲು ವಾತಾವರಣವು ಅತ್ಯಂತ ಪೂರಕವಾಗಿದೆ. ಅರೇಬಿಯನ್ ಸಮುದ್ರದ ಹೆಚ್ಚಿನ ಭಾಗಗಳು, ಲಕ್ಷದ್ವೀಪ, ಬಂಗಾಳ ಕೊಲ್ಲಿಯ ಇನ್ನುಳಿದ ಆಗ್ನೇಯ ಮತ್ತು ಈಶಾನ್ಯ ಭಾಗಗಳು ಸೇರಿದಂತೆ ಪ್ರಮುಖವಾಗಿ ಕರ್ನಾಟಕದ ನೆರೆ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಿಗೆ ಮುಂಗಾರು ಮಾರುತಗಳು ಶೀಘ್ರದಲ್ಲೇ ಪ್ರವೇಶಿಸಲಿವೆ.
ಪೂರ್ವ-ಮಧ್ಯ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಮೇಲ್ಭಾಗದಲ್ಲಿ (ಸಮುದ್ರ ಮಟ್ಟದಿಂದ 1.5ರಿಂದ 7.6 ಕಿ.ಮೀ ಎತ್ತರದಲ್ಲಿ) ಸುಳಿ ಗಾಳಿಯ ಪರಿಣಾಮವು ಮುಂದುವರಿದಿದೆ. ಆಗ್ನೇಯ ಅರೇಬಿಯನ್ ಸಮುದ್ರದ ಮೇಲ್ಭಾಗದಲ್ಲಿ 3.1 ಕಿ.ಮೀ ಎತ್ತರದಲ್ಲಿ ಹಾಗೂ ನೈಋತ್ಯ ಅರೇಬಿಯನ್ ಸಮುದ್ರದ ಮೇಲ್ಭಾಗದಲ್ಲಿ 3.1ರಿಂದ 5.8 ಕಿ.ಮೀ ಎತ್ತರದ ವಾತಾವರಣದಲ್ಲಿ ಸುಳಿಗಾಳಿಯ ಪ್ರಭಾವವು ಸ್ಥಿರವಾಗಿ ಮುಂದುವರಿದಿದ್ದು, ಇವೆಲ್ಲವೂ ಮುಂಬರುವ ದಿನಗಳಲ್ಲಿ ವ್ಯಾಪಕ ಮಳೆಗೆ ಕಾರಣವಾಗಲಿವೆ.
ಮಳೆ ಎಲ್ಲಿ, ಎಷ್ಟು?
ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ. ಈ ಅವಧಿಯಲ್ಲಿ ತುಮಕೂರು ಜಿಲ್ಲೆಯ ತಿಪಟೂರು, ಬೆಂಗಳೂರು ನಗರದ ಹವಾಮಾನ ವೀಕ್ಷಣಾಲಯದಲ್ಲಿ ತಲಾ 5 ಸೆಂಟಿಮೀಟರ್ನಷ್ಟು ಭಾರಿ ಮಳೆ ದಾಖಲಾಗಿದೆ. ಇನ್ನು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 4 ಸೆಂಟಿಮೀಟರ್ ಮಳೆಯಾಗಿರುವುದು ವರದಿಯಾಗಿದೆ. ಚಿಕ್ಕಮಗಳೂರಿನ ಕಳಸ, ಮಂಡ್ಯದ ಮದ್ದೂರು ಮತ್ತು ಕೃಷ್ಣರಾಜಸಾಗರ, ಮೈಸೂರು ಹಾಗೂ ಉಡುಪಿಯ ಬ್ರಹ್ಮಾವರ ಈ ಪಟ್ಟಿಯಲ್ಲಿ ಸೇರಿವೆ. ತುಮಕೂರಿನ ಕುಣಿಗಲ್, ಗುಬ್ಬಿ, ಮಧುಗಿರಿ, ಬೆಂಗಳೂರಿನ ಹೆಸರಘಟ್ಟ, ನಂಜನಗೂಡು, ಎಚ್.ಡಿ. ಕೋಟೆ, ಚಾಮರಾಜನಗರ ಟೌನ್, ಮಲೆ ಮಹದೇಶ್ವರ ಬೆಟ್ಟ, ಕೊಟ್ಟಿಗೆಹಾರದಲ್ಲಿ ತಲಾ 2 ಸೆಂಟಿಮೀಟರ್ ಸಾಧಾರಣ ಮಳೆ ಬಿದ್ದಿದೆ. ಬಂಡೀಪುರ, ಗುಂಡ್ಲುಪೇಟೆ, ಕಡೂರು, ತಿಪ್ಪಗೊಂಡನಹಳ್ಳಿ, ಕೊಡಗಿನ ಮೂರ್ನಾಡು ಭಾಗಗಳಲ್ಲಿ ತಲಾ 1 ಸೆಂಟಿಮೀಟರ್ನಷ್ಟು ಮಳೆ ಸುರಿದಿದೆ.













Click it and Unblock the Notifications