ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಪರ ಆಡ್ತಾರಾ ಸ್ಟಾರ್ ಆಟಗಾರ ಫಿಲ್ ಸಾಲ್ಟ್? ಇಲ್ಲಿದೆ ಬಿಗ್ ಅಪ್ಡೇಟ್
RCB Phil Salt: ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ಸಂಜೆ 7:30ಕ್ಕೆ ಐಪಿಎಲ್ 2026ರ ಫೈನಲ್ ಪಂದ್ಯ ನಡೆಯಲಿದೆ. ಈ ರೋಚಕ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ ಆರ್ಸಿಬಿ ಪರ ಸ್ಟಾರ್ ಆಟಗಾರ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2026ರ ಫೈನಲ್ ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆಯೇ ಸದ್ಯ ಎಲ್ಲೆಡೆ ಕೇಳಿಬರುತ್ತಿರುವ ಅತಿ ದೊಡ್ಡ ಚರ್ಚೆಯ ವಿಷಯವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಲಭ್ಯತೆ ಕುರಿತು.

ಆರ್ಸಿಬಿ-ಜಿಟಿ ನಡುವೆ ರೋಚಕ ಸಮರ
ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡಕ್ಕೆ ಇದು ತವರು ಮೈದಾನವಾಗಿದ್ದು, ಆರ್ಸಿಬಿ ತಂಡವನ್ನು ಕಟ್ಟಿಹಾಕಲು ಅವರು ಯಾವುದೇ ಅವಕಾಶವನ್ನು ಕೈಚೆಲ್ಲುವಂತೆ ಕಾಣುತ್ತಿಲ್ಲ. ಮತ್ತೊಂದೆಡೆ ಬೆಂಗಳೂರು ತಂಡ ಕೂಡ ಈ ಬಾರಿ ಮತ್ತೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಎರಡು ತಂಡಗಳಿಗೂ ತಮ್ಮ ಎರಡನೇ ಐಪಿಎಲ್ ಟ್ರೋಫಿ ಗೆಲ್ಲಲು ಅವಕಾಶ ಇದಾಗಿದ್ದು, ಈ ಪಂದ್ಯವು ರೋಚಕ ಸಮರಕ್ಕೆ ಸಾಕ್ಷಿಯಾಗಲಿದೆ.
ಫಿಲ್ ಸಾಲ್ಟ್ ಲಭ್ಯತೆ ಬಗ್ಗೆ ಪಾಟಿದಾರ್ ಹೇಳಿದ್ದೇನು?
ಫಿಲ್ ಸಾಲ್ಟ್ ಈಗಾಗಲೇ ತಮ್ಮ ತರಬೇತಿಯನ್ನು ಪುನರಾರಂಭಿಸಿದ್ದು, ತಂಡದ ಅಭ್ಯಾಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಿದೆ. ಈ ಮಹಾ ಸಮರಕ್ಕೆ ಸಾಲ್ಟ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂಬುದನ್ನು ಆರ್ಸಿಬಿ ನಾಯಕ ರಜತ್ ಪಾಟೀದಾರ್ ಸುದ್ದಿಗಾರರ ಮುಂದೆ ಖಚಿತಪಡಿಸಿದ್ದರು. ಆದರೂ ಪಿಚ್ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಗಮನಿಸಿದ ನಂತರವಷ್ಟೇ ಅಂತಿಮ ಆರಂಭಿಕ ಜೋಡಿಯನ್ನು ನಿರ್ಧರಿಸಲಾಗುವುದು ಅಂತಲೂ ಅವರು ತಿಳಿಸಿದ್ದರು.
'ಫಿಲ್ ಸಾಲ್ಟ್ ತಂಡದೊಂದಿಗಿದ್ದಾರೆ ಮತ್ತು ತಂಡದ ಅಭ್ಯಾಸ ಪಂದ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ತಂಡದ ವೈದ್ಯರು ಅವರ ಫಿಟ್ನೆಸ್ ಕಡೆ ಗಮನಹರಿಸಿದ್ದಾರೆ. ನಾವು ಪಿಚ್ ಅನ್ನು ಪರಿಶೀಲಿಸಿ ನಮ್ಮ ಆರಂಭಿಕ ಜೋಡಿಯನ್ನು ನಿರ್ಧರಿಸುತ್ತೇವೆ,' ಎಂದು ಪಾಟಿದಾರ್ ಪಂದ್ಯದ ಮುನ್ನಾದಿನ ಅಂದರೆ ಮೇ 30ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಿಸಿ ವಿರುದ್ಧದ ಪಂದ್ಯದಲ್ಲಿ ಸಾಲ್ಟ್ಗೆ ಗಾಯ
ಏಪ್ರಿಲ್ 18ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಫಿಲ್ ಸಾಲ್ಟ್ ಅವರ ಕೈಬೆರಳಿಗೆ ಗಾಯವಾಗಿತ್ತು. ಗಾಯದ ಸಮಸ್ಯೆ ಗಂಭೀರವಾಗಿದ್ದರಿಂದ ಅವರು ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಹಾಗೂ ಸ್ಕ್ಯಾನಿಂಗ್ಗಾಗಿ ತಮ್ಮ ದೇಶ ಇಂಗ್ಲೆಂಡ್ಗೆ ಹಿಂತಿರುಗಿದ್ದರು. ಲೀಗ್ ಹಂತದ ಅಂತಿಮ ಅವಧಿಯಲ್ಲಿ ಆರ್ಸಿಬಿ ತಂಡವನ್ನು ಮತ್ತೆ ಸೇರಿಕೊಂಡರು. ಆದರೂ ಮ್ಯಾನೇಜ್ಮೆಂಟ್ ಅವರಿಗೆ ಯಾವುದೇ ಒತ್ತಡ ನೀಡದೆ ನಿಧಾನವಾಗಿ ಚೇತರಿಸಿಕೊಂಡು ಮರಳಲು ಅವಕಾಶ ನೀಡಲು ನಿರ್ಧರಿಸಿತು. ಈ ಕಾರಣದಿಂದಾಗಿ ಅವರು ತಂಡದ ಇತ್ತೀಚಿನ ಯಾವುದೇ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.
ಟೂರ್ನಿಯಿಂದ ಹೊರಗುಳಿದ ಬೆಥೆಲ್
ಫಿಲ್ ಸಾಲ್ಟ್ ತಂಡದಿಂದ ನಿರ್ಗಮಿಸಿದ ನಂತರ ಆರಂಭಿಕ ಸ್ಥಾನವನ್ನು ತುಂಬಲು ಆರ್ಸಿಬಿ ಮೊದಲು ಜೇಕಬ್ ಬೆಥೆಲ್ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರಿಂದ ಲೀಗ್ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಬಳಿಕ ಅವರು ಕೂಡ ಕೈಬೆರಳಿನ ಗಾಯದ ಸಮಸ್ಯೆಗೆ ಒಳಗಾಗಿ ಟೂರ್ನಿಯಿಂದಲೇ ಹೊರಗುಳಿದರು. ಇದಾದ ನಂತರ ಮುಂದಿನ ಪಂದ್ಯಗಳಲ್ಲಿ ವೆಂಕಟೇಶ್ ಅಯ್ಯರ್ ಅವರಿಗೆ ಆರಂಭಿಕರಾಗಿ ಕಣಕ್ಕಿಳಿಸಲಾಯಿತು. ಅವರು ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಪಂದ್ಯಗಳಿಂದ ಹೊರಗುಳಿದಿದ್ದರೂ ಈ ಸೀಸನ್ನಲ್ಲಿ ಸಾಲ್ಟ್ ನೀಡಿದ ಒಟ್ಟಾರೆ ಕೊಡುಗೆ ಉತ್ತಮವಾಗಿದೆ. ಅವರು ಆಡಿದ ಕೇವಲ ಆರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳೂ ಸೇರಿದಂತೆ 202 ರನ್ ಚಚ್ಚಿದ್ದಾರೆ. ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುವಲ್ಲಿ ಅವರು ಹಲವು ಬಾರಿ ಪ್ರಮುಖ ಪಾತ್ರ ವಹಿಸಿರುವ ಉದಾಹರಣೆಗಳಿವೆ. ಒಟ್ಟಿನಲ್ಲಿ ಫೈನಲ್ ಪಂದ್ಯದಲ್ಲೂ ಸಾಲ್ಟ್ ಆಡುವ ಸಾಧ್ಯತೆ ಕಡಿಮೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಅವರು ಆಡಲೇಬೇಕು ಎನ್ನುವುದು ಅಭಿಮಾನಿಗಳ ಆಶಯವಾಗಿದೆ.












Click it and Unblock the Notifications