KRS: ಕೆಆರ್ಎಸ್ನಿಂದ ತಮಿಳುನಾಡಿಗೆ ಸಾವಿರಾರು ಕ್ಯೂಸೆಕ್ ನೀರು; ರಾಜಕೀಯ ಕಾವೇರಿದ ಕಾವೇರಿ ವಿವಾದ
ಬೆಂಗಳೂರು: ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳ ಜೀವನಾಡಿಯಾಗಿರುವ ಕಾವೇರಿ ನೀರನ್ನು ಇಂತಹ ಬರಗಾಲ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸಿದೆ. ಕಳೆದ 6 ದಿನಗಳಿಂದ ಕೃಷ್ಣ ರಾಜ ಸಾಗರ (KRS) ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಸರ್ಕಾರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಇಂತಹ ಬರಗಾಲ ಪರಿಸ್ಥಿತಿಯಲ್ಲಿ ಇದೆಲ್ಲ ಬೇಕಾ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ವಿಪಕ್ಷ ನಾಯಕ ಆರ್.ಅಶೋಕ್ ಅವರು ನೇರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.
ರಾಜ್ಯದ ಕಾವೇರಿ ನೀರು ಕಳೆದ ಆರು ದಿನಗಳಲ್ಲಿ, ಅಂದರೆ ಇಂದು ಜೂನ್ 29ಕ್ಕೆ 989 ಕ್ಯೂಸೆಕ್ ನೀರು, ನೆನ್ನೆ ಜೂನ್ 28 ರಂದು 712 ಕ್ಯೂಸೆಕ್, ಜೂನ್ 27ಕ್ಕೆ 433 ಕ್ಯೂಸೆಕ್, ಜೂನ್ 26ರಂದು 712 ಕ್ಯೂಸೆಕ್, ಜೂನ್ 25ಕ್ಕೆ ಒಟ್ಟು 1668 ಕ್ಯೂಸೆಕ್ ಮತ್ತು ಜೂನ್ 24 ರಂದು 1886 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಕೆಆರ್ ಎಸ್ ಜೊತೆಗೆ ಕಬಿನಿ ಅಣೆಕಟ್ಟಿನ ಹೊರ ಹರಿವು ಸಹಿತ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವರ್ಷ ಮುಂಗಾರು ಮಳೆ ಕೊರತೆ ಹಿನ್ನೆಲೆ ಬೆಂಗಳೂರಿಗೆ ಕುಡಿಯುವ ನೀರಿನ ತತ್ವಾರ ಎದುರಾಗಬಹುದು. ನಿರೀಕ್ಷೆಯಂತೆ ಮಳೆ ಆಗದಿದ್ದರೆ ಮುಂದಿನ ವರ್ಷ ಬೇಸಿಗೆ ಕಳೆದು ಮತ್ತೆ ಮಳೆಗಾಲ ಆರಂಭವಾಗುವವರೆಗೂ ನೀರಿನ ನಿರ್ವಹಣೆಯದ್ದೇ ಸವಾಲು ಎದುರಾಗಲಿದೆ ಅಂತಲೂ ಹೇಳಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ರೈತರು ಸಂಕಷ್ಟ ಅನುಭವಿಸಲಿದ್ದಾರೆಂದು ಊಹಿಸಲಾಗಿದೆ. ಇದರ ನಡುವೆ ಕಾವೇರಿ ನೀರು ನೆರೆಯ ತಮಿಳುನಾಡಿಗೆ ಹರಿಸಿದ್ದಕ್ಕೆ ಸಾರ್ವಜನಿಕರಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸರ್ಕಾರದಿಂದ ಕನ್ನಡಿಗರಿಗೆ ಮಹಾದ್ರೋಹ: ಆರ್.ಅಶೋಕ್
ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ರಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿ, ರಾಜ್ಯಾದ್ಯಂತ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಎದುರಾಗಿದೆ. ಆದರೆ ಈ ಕಳ್ಳ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದೇನು?, ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದೆ ಎಂದು ಅವರು ದೂರಿದರು.
ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಜೀವನಾಡಿ ಕೃಷ್ಣ ರಾಜ ಸಾಗರ (KRS) ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಕನ್ನಡಿಗರ ಬೆನ್ನಿಗೆ ಚುಚ್ಚುತ್ತಿರುವ ಚೂರಿಯಲ್ಲದೆ ಮತ್ತಿನ್ನೇನು ಮುಖ್ಯಮಂತ್ರಿಗಳೇ? ಎಂದು ನೇರವಾಗಿ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
"ನಮ್ಮ ನೀರು ತಮಿಳುನಾಡಿನ ಹಕ್ಕು"
ಕಾಂಗ್ರೆಸ್ ಪಕ್ಷದ ಇತಿಹಾಸವೇ ಹೀಗೆ, ಅಧಿಕಾರವಿಲ್ಲದಾಗ "ನಮ್ಮ ನೀರು ನಮ್ಮ ಹಕ್ಕು" ಅಂತ ನಾಟಕದ ಬೊಬ್ಬೆ ಹಾಕುತ್ತದೆ. ಅಧಿಕಾರ ಸಿಕ್ಕ ಬಳಿಕ "ನಮ್ಮ ನೀರು ತಮಿಳುನಾಡಿನ ಹಕ್ಕು" ಅಂತ ಅಧಿಕಾರಕ್ಕಾಗಿ ತಮಿಳುನಾಡಿನ ಎದುರು ಸಂಪೂರ್ಣ ಶರಣಾಗತಿ ಆಗುವುದು. ನಾಡಿನ ಜನತೆಯ ಹಿತ ಕಾಯದೆ ಹೈಕಮಾಂಡ್ ಅಣತಿಯಂತೆ ತುಳುನಾಡಿನ ಜೊತೆ ರಾಜಿ ಮಾಡಿಕೊಳ್ಳುವುದು.
ಕೇವಲ ರಾಜಕೀಯ ಮೈತ್ರಿಗಾಗಿ, ಅಧಿಕಾರದ ಆಸೆಗಾಗಿ ಅಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಇಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಕಾಂಗ್ರೆಸ್ ಪದೇ ಪದೇ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರ ಹಿತಕ್ಕಿಂತ ಅಧಿಕಾರದ ಸ್ವಾರ್ಥವೇ ಹೆಚ್ಚಾಯಿತೇ? ಪ್ರಶ್ನಿಸಿದ್ದಾರೆ.
ನೀರಿಲ್ಲದಂತಾದ್ರೆ ಯಾವ ಯಾತ್ರೆ ಮಾಡುತ್ತೀರಿ?
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಬೀದಿನಾಟಕ ಮಾಡಿದ್ದೀರಿ. ಈಗ ಯಾವ ಯಾತ್ರೆ ಮಾಡುತ್ತೀರಿ? ನೀರಿಲ್ಲದೆ, ಬೆಳೆಯಿಲ್ಲದೆ ಕಾವೇರಿ ಕೊಳ್ಳದ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡ್ತೀರಾ? ಬೆಂಗಳೂರಿನ ಜನ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಕ್ಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ? ಎಂದು ಲೇವಡಿ ಮಾಡಿದರು.
ಕನ್ನಡ ನಾಡಿನ ಜನತೆಗೆ ಕನಿಷ್ಠ ನೀರಿನ ಭದ್ರತೆ, ನೀರಿನ ಹಕ್ಕು ನೀಡಲಾಗದ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅವರು ಹೇಳಿದರು.
KRS outflow since last 6 days.
— ರವಿ ಕೀರ್ತಿ ಗೌಡ (@ravikeerthi22) June 29, 2026
29th June : 989 cusecs
28th June : 712 cusecs
27th June : 433 cusecs
26th June : 712 cusecs
25th June : 1668 cusecs
24th June : 1886 cusecs
Outflow is more compared to inflow just to manage water level at Shiva Anicut , where water is diverted… https://t.co/J67dSsiVKC













Click it and Unblock the Notifications