ಐರ್ಲೆಂಡ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟು ಯುವ ಆಟಗಾರರ ಪರ ನಿಂತ ನಾಯಕ ಶ್ರೇಯಸ್ ಅಯ್ಯರ್
Shreyas Iyer: ಐರ್ಲೆಂಡ್ ವಿರುದ್ಧ ನಡೆದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವು ಹೀನಾಯ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ತಾವು ಎಲ್ಲಿ ತಪ್ಪು ಮಾಡಿದೆವು ಎಂದು ಒಪ್ಪಿಕೊಂಡು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭಾರತ ತಂಡವು ಭಾನುವಾರ ಸ್ಟೋರ್ಮಾಂಟ್ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕೇವಲ 1 ರನ್ನಿಂದ ಸೋಲು ಕಂಡಿತು. ಈ ಸೋಲಿನೊಂದಿಗೆ 2023ರಿಂದ ಸತತ 16 ಟಿ20 ಸರಣಿಗಳನ್ನು ಗೆದ್ದಿದ್ದ ಟೀಮ್ ಇಂಡಿಯಾದ ಗೆಲುವಿವ ಓಟಕ್ಕೆ ಬ್ರೇಕ್ ಬಿದ್ದಿದೆ. ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, 'ನಮ್ಮ ಬೌಲರ್ಗಳು ಅತ್ಯುತ್ತಮವಾಗಿ ಬೌಲಿಂಗ್ ಪ್ರದರ್ಶನ ಮಾಡಿದರು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ನಾವು ಹಿನ್ನಡೆ ಅನುಭವಿಸಿದೆವು,' ಎಂದು ಸತ್ಯ ಒಪ್ಪಿಕೊಂಡರು.

ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
ಮುಂದುವರೆದು ಮಾತನಾಡಿದ ಅವರು, 'ಪಿಚ್ ಹೇಗಿರಲಿದೆ ಎಂಬುದನ್ನು ಸರಿಯಾಗಿ ವಿಶ್ಲೇಷಿಸುವಲ್ಲಿ ನಮ್ಮ ಬ್ಯಾಟರ್ಗಳು ವಿಫಲರಾದರು. ಸಿಂಗಲ್ಸ್ಗಳನ್ನು ಡಬಲ್ಸ್ಗಳಾಗಿ ಪರಿವರ್ತಿಸುವಲ್ಲಿಯೂ ಎಡವಿದೆವು. ಈ ಎಲ್ಲ ಪ್ರಮುಖ ವಿಷಯಗಳಲ್ಲಿ ಐರ್ಲೆಂಡ್ ತಂಡವು ನಮಗಿಂತ ಅತ್ಯುತ್ತಮ ಪ್ರದರ್ಶನ ನೀಡಿತು. ಇದೊಂದು ಕಳಪೆ ಪ್ರದರ್ಶನ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಐರ್ಲೆಂಡ್ ಆಡಿದ ರೀತಿಗೆ ಅವರಿಗೆ ಕ್ರೆಡಿಟ್ ಸಲ್ಲಲೇಬೇಕು. ಅವರು ಅದ್ಭುತವಾಗಿ ಆಟ ಆಡಿದರು. ಪಿಚ್ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆ ಇತ್ತು ಹಾಗೂ ಅವರ ಫೀಲ್ಡಿಂಗ್ ಕೂಡ ಅದ್ಭುತವಾಗಿತ್ತು,' ಎಂದು ಎದುರಾಳಿ ತಂಡವನ್ನು ಶ್ಲಾಘಿಸಿದರು.
ಯುವ ಆಟಗಾರರ ಪರ ನಿಂತ ಅಯ್ಯರ್
ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯುವ ಆಟಗಾರರಾದ ವೇಗಿ ಪ್ರಿನ್ಸ್ ಯಾದವ್ (3 ವಿಕೆಟ್) ಬೌಲಿಂಗ್ ಅತ್ಯುತ್ತಮ ಬೌಲಿಂಗ್ ದಾಳಿ ಮತ್ತು ಆಲ್ ರೌಂಡರ್ ಸೂರ್ಯಂಶ್ ಶೆಡ್ಗೆ ಅವರ ಪ್ರದರ್ಶನವನ್ನು ನಾಯಕ ಅಯ್ಯರ್ ಹೊಗಳಿದ್ದಾರೆ. 'ಪ್ರಿನ್ಸ್ ಯಾದವ್ ಅವರಿಗೆ ಐಪಿಎಲ್ನಲ್ಲಿ ಆಡಿದ ಉತ್ತಮ ಅನುಭವವಿದೆ ಮತ್ತು ಅವರು ಅದೇ ಲಯವನ್ನು ಇಲ್ಲೂ ಮುಂದುವರೆಸಿದ್ದಾರೆ. ಬೌಲಿಂಗ್ ಮಾಡುವಾಗ ಅವರದ್ದೇ ಆದ ಆಲೋಚನೆಗಳು ಮತ್ತು ಯೋಜನೆಗಳನ್ನು ಹೊಂದಿದ್ದಾರೆ. ಇನ್ನೂ ಮೊದಲ ಪಂದ್ಯ ಆಡಿದ ಸೂರ್ಯಂಶ್ ಸಹ ಸಾಕಷ್ಟು ಕಲಿಯಲಿದ್ದಾರೆ,' ಎಂದು ಹೇಳಿ ಯುವ ಪ್ರತಿಭೆಗಳ ಬೆಂಬಲಕ್ಕೆ ನಿಂತರು.
ಟೀಮ್ ಇಂಡಿಯಾದ ಮುಂದಿನ ಹಾದಿ ಹೀಗಿದೆ
ಐರ್ಲೆಂಡ್ ಪ್ರವಾಸದ ಕಹಿ ನೆನಪನ್ನು ಮರೆತು ಭಾರತ ತಂಡವು ಈಗ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಬೇಕಿದೆ. ಜುಲೈ 1ರಂದು ಡರ್ಹಾಮ್ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಆರಂಭ ಆಗಲಿದೆ. ಆ ನಂತರ ಮ್ಯಾಂಚೆಸ್ಟರ್ (ಜುಲೈ 4), ನಾಟಿಂಗ್ಹ್ಯಾಮ್ (ಜುಲೈ 7), ಬ್ರಿಸ್ಟಲ್ (ಜುಲೈ 9), ಮತ್ತು ಸೌತಾಂಪ್ಟನ್ (ಜುಲೈ 11) ನಗರಗಳಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್ ಸರಣಿಯಲ್ಲಾದರೂ ಭಾರತ ತಂಡವು ತನ್ನ ತಪ್ಪುಗಳನ್ನು ತಿದ್ದಿಕೊಂಡು ಹಳಿಗೆ ಮರಳಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಮತ್ತೊಂದೆಡೆ ಈ ಪಂದ್ಯದಲ್ಲಾದರೂ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಬೇಕು ಎನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ. ಆದರೆ, ಈ ನಿರ್ಧಾರ ಇದೀಗ ಟೀಮ್ ಮ್ಯಾನೇಜ್ಮೆಂಟ್, ಕೋಚ್ ಮೇಲೆ ನಿಂತಿದೆ. ಒಟ್ಟಿನಲ್ಲಿ ಐರ್ಲೆಂಡ್ ವಿರುದ್ಧದ ಸರಣಿ ಸೋಲು ಬರೀ ಸೋಲಲ್ಲ ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಅವಮಾನ ಅಂತಲೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಲಿದ್ದಾರೆ.












Click it and Unblock the Notifications