ಗುಡ್ನ್ಯೂಸ್: ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಫುಟ್ಪಾತ್ ಒತ್ತುವರಿ ತೆರವಿಗೆ ಜಿಬಿಎ ಪ್ಲ್ಯಾನ್
ಬೆಂಗಳೂರು: ಬೆಂಗಳೂರು ನಗರ ಮೂಲಸೌಕರ್ಯ ಸಮಸ್ಯೆ, ಅಭಿವೃದ್ಧಿ ಕುರಿತು ಸಾಕಷ್ಟು ಟೀಕೆ, ಆರೋಪಗಳ ಕೇಳಿ ಬರುತ್ತಿವೆ. ಅದರಲ್ಲಿ ಪಾದಾಚಾರಿ ಮಾರ್ಗ ಒತ್ತುವರಿ ಸಮಸ್ಯೆ ಹೆಚ್ಚಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಪಾದಾಚಾರಿ ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೆ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿನ ಒತ್ತುವರಿ ಪಾದಾಚಾರಿ ಮಾರ್ಗ ತೆರವಿಗೆ ಪ್ಲ್ಯಾನ್ ಮಾಡಿಕೊಂಡಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್.ಜಿ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ ಪಾದಚಾರಿ ಮಾರ್ಗಗಳ (Footpath) ಒತ್ತುವರಿ ತೆರವು ಹಾಗೂ ನಿರ್ವಹಣೆ ಕುರಿತು ಮಹತ್ವ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರ ನಿರ್ದೇಶನದಂತೆ ಇದೇ ಜುಲೈ 1 ರಿಂದ ಬೆಂಗಳೂರು ಪಾದಚಾರಿ ಮಾರ್ಗಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು ಸಾರ್ವಜನಿಕರು ಸುಗಮವಾಗಿ ಪಾದಾಚಾರಿ ಬಳಸುವಂತಾಗಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಎಲ್ಲ ಅಧಿಕಾರಿಗಳು ಪಾದಚಾರಿ ಮಾರ್ಗ ಒತ್ತುವರಿ ತೆರವು ಹಾಗೂ ನಿರ್ವಹಣೆಗೆ ಕ್ರಮ ವಹಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರವಾರು ಪಾದಚಾರಿ ಮಾರ್ಗ ಒತ್ತುವರಿ ಪಟ್ಟಿ ಮಾಡಿ ತೆರವುಗೊಳಿಸುವಂತೆ ನಿರ್ದೇಶಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಸಮಸ್ಯೆಗಳು ಉಲ್ಬಣ
ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವೆಡೆ ಪಾದಚಾರಿ ಮಾರ್ಗಗಳ ಒತ್ತುವರಿ, ತ್ಯಾಜ್ಯ ಬ್ಲ್ಯಾಕ್ ಸ್ಪಾಟ್ ಗಳು, ಕಟ್ಟಡ ತ್ಯಾಜ್ಯ, ಇನ್ನಿತರ ಅವಶೇಷಗಳು ಪಾದಚಾರಿ ಮಾರ್ಗದಲ್ಲಿ ಹಾಕಿರುವುದರಿಂದ ಸಾರ್ವಜನಿಕರ ಬಳಕೆಗೆ ಅನಾನುಕೂಲ ಉಂಟಾಗಿದೆ. ಅಂಥಹ ಸ್ಥಳಗಳನ್ನು ಗುರುತಿಸಿ ಪಾದಚಾರಿಗಳಿಗೆ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
90 ಕಿಮೀ ಪಾದಾಚಾರಿ ನಿರ್ವಹಣೆ
ಮೊದಲ ಹಂತದಲ್ಲಿ ವಿಭಾಗವಾರು 15 ಕಿ.ಮೀ.ಉದ್ದದ ಪಾದಚಾರಿ ಮಾರ್ಗ ನಿರ್ವಹಣೆಗೆ ಪಾಲಿಕೆ ಮುಂದಾಗಿದೆ. ಅಂದರೆ ಪ್ರಾರಂಭಿಕ ಹಂತದಲ್ಲಿ ಪ್ರತಿ ವಿಭಾಗವಾರು 15 ಕಿ.ಮೀ. ನಂತೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಭಾಗಗಳಲ್ಲಿ 90 ಕಿಲೋ ಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಗುರುತಿಸಿ ಒತ್ತುವರಿ ತೆರವು ಮಾಡುವುದರ ಜೊತೆಗೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಜೊತೆಗೆ ಪ್ರತಿ ವಿಭಾಗದಿಂದ ನಿರ್ವಹಣೆ ಹಾಗೂ ಸುಧಾರಣೆ ಅಗತ್ಯವಿರುವ ಪಾದಚಾರಿ ಮಾರ್ಗಗಳ ಪಟ್ಟಿ ನೀಡುವಂತೆ ಇಂಜಿನಿಯರ್ಗಳಿಗೆ ಹೇಳಿದರು.
ಇನ್ನೂ ನಗರದ ಆರ್ಟೀರಿಯಲ್, ಸಬ್-ಆರ್ಟೀರಿಯಲ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕೇಂದ್ರ ನಗರ ಪಾಲಿಕೆ ಬದ್ಧವಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಸುಗಮ ಸಂಚಾರ ವಾತಾವರಣ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬೆಂಗಳೂರಿನ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಾಚಾರಿ ಒತ್ತುವರಿ ತೆರವು, ಹೊಸದಾಗಿ 1000 ಕಿಲೋ ಮೀಟರ್ ಪಾದಾಚಾರಿ ಮಾರ್ಗಗಳ ಸಸೂತ್ರ ನಿರ್ವಹಣೆಗೂ ಜಿಬಿಎ ಮುಂದಾಗಿದೆ. ಈ ಮೂಲಕ ಪಾದಾಚಾರಿಗಳ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿದೆ.













Click it and Unblock the Notifications