ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಅವಮಾನ ಮಾಡಿದ ಐಸ್ಲ್ಯಾಂಡ್ ಕ್ರಿಕೆಟ್ ಸಂಸ್ಥೆ
India vs Ireland T20I: ಐರ್ಲೆಂಡ್ ವಿರುದ್ಧ ನಡೆದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವು ಹೀನಾಯ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅದರಲ್ಲೂ ಐಸ್ಲ್ಯಾಂಡ್ ಮಾಡಿರುವ ಟ್ವಿಟ್ವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವು ಸರಣಿಯಲ್ಲಿ ತೋರಿದ ಕಳಪೆ ಪ್ರದರ್ಶನವು ಭಾರಿ ಚರ್ಚೆಗೆ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಅಯ್ಯರ್ ಅವರಿಗೆ ನಾಯಕತ್ವದ ಪಟ್ಟ ನೀಡಿದ್ದರಿಂದ ಹಿಡಿದು, ಮುಖ್ಯ ತರಬೇತುದಾರ ಗಂಭೀರ್ ಅವರು ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಐಸ್ಲ್ಯಾಂಡ್ ಮಾಡಿದ ಟ್ವಿಟ್ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಗಂಭೀರ್ ಕಾಲೆಳೆದ ಐಸ್ಲ್ಯಾಂಡ್ ಕ್ರಿಕೆಟ್ ಸಂಸ್ಥೆ
ಹಾಲಿ ಟಿ20 ವಿಶ್ವ ಚಾಂಪಿಯನ್ ಆಗಿರುವ ಭಾರತವು ಇಂತಹ ಸಣ್ಣ ರಾಷ್ಟ್ರದ ತಂಡದ ಎದುರು ಮಂಡಿಯೂರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಯಿತು. ಇದೀಗ 'ಐಸ್ಲ್ಯಾಂಡ್ ಕ್ರಿಕೆಟ್ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಭಾರತದ ಮುಖ್ಯ ತರಬೇತುದಾರರನ್ನು ಲೇವಡಿ ಮಾಡಿದೆ.
ಐಸ್ಲ್ಯಾಂಡ್ ಕ್ರಿಕೆಟ್ ಸಂಸ್ಥೆ ಟ್ವಿಟ್ನಲ್ಲೇನಿದೆ?
'ಗೌತಮ್ ಗಂಭೀರ್ ಅವರನ್ನು ನಮ್ಮ ತರಬೇತುದಾರರ ಸಿಬ್ಬಂದಿಗೆ ಸೇರಿಸಿಕೊಳ್ಳಲು ನಾವು ಬಯಸುವುದಿಲ್ಲ. ಆದರೆ ಅವರಲ್ಲಿ ಪ್ರತಿಭೆಯಂತೂ ಇದೆ. ಆ ಮಟ್ಟದ ಭಾರತೀಯ ಆಟಗಾರರನ್ನು ಕರೆದುಕೊಂಡು ಹೋಗಿ, ಐರ್ಲೆಂಡ್ನಲ್ಲಿ ಇಂತಹ ಕಳಪೆ ಫಲಿತಾಂಶಗಳನ್ನು ತಂದುಕೊಡುವುದು ನಿಜಕ್ಕೂ ಅಸಾಮಾನ್ಯವಾದ ಪ್ರತಿಭೆಯಾಗಿಯೇ ಇರಬೇಕು,' ಎಂದು ಐಸ್ಲ್ಯಾಂಡ್ ಕ್ರಿಕೆಟ್ ವ್ಯಂಗ್ಯವಾಗಿ ಪೋಸ್ಟ್ ಮಾಡಿದೆ.
ಸಂಜಯ್ ಮಂಜ್ರೇಕರ್ ಹೇಳಿದ್ದೇನು?
ಮತ್ತೊಂದೆಡೆ ಭಾರತ ತಂಡದ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಅವರು ಗಂಭೀರ್ ಅವರ ಕಾರ್ಯತಂತ್ರದಲ್ಲಿನ ಲೋಪದೋಷಗಳ ಬಗ್ಗೆ ವಿವರಿಸಿದ್ದಾರೆ. ತಂಡದಲ್ಲಿ ಆಲ್-ರೌಂಡರ್ಗಳನ್ನು ತುಂಬಿಸುವ ಬದಲು, ಒಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ನ ಅಗತ್ಯವಿದೆ,' ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ರ್ ಖಾತೆಯಲ್ಲಿ ಬರೆದಕೊಂಡಿದ್ದಾರೆ.
ಪಂದ್ಯದ ನಂತರದ ಮಾತನಾಡಿದ ಮಂಜ್ರೇಕರ್ ಅವರು, ಬೌಲರ್ಗಳಿಗೆ ನೆರವಾಗುವಂತಹ ಪಿಚ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಭಾರತೀಯ ಬ್ಯಾಟರ್ಗಳಿಗೆ ಅಗತ್ಯವಿರುವ ಅತ್ಯುತ್ತಮ ಕೌಶಲ್ಯದ ಕೊರತೆಯಿದೆ ಎಂಬುದನ್ನು ಎತ್ತಿ ತೋರಿಸಿದರು. ಅಲ್ಲದೆ ಇದನ್ನು ಸಾಮಾನ್ಯವಾಗಿ ಭಾರತದಲ್ಲಿ ಸಿದ್ಧಪಡಿಸಲಾಗುವ ಬ್ಯಾಟಿಂಗ್ಗೆ ನೆರವಾಗುವ ಪಿಚ್ಗಳಿಗೆ ಹೋಲಿಸಿ ಅವರು ಮಾತನಾಡಿದರು. 'ಇಂತಹ ಸವಾಲಿನ ಪರಿಸ್ಥಿತಿಗಳಲ್ಲಿ ಭಾರತ ತಂಡ ಯಶಸ್ಸು ಸಾಧಿಸಬೇಕಾದರೆ ಶುಭ್ಮನ್ ಗಿಲ್ ಅವರಂತಹ ಬ್ಯಾಟರ್ನ ಅಗತ್ಯವೇ ಹೆಚ್ಚಾಗಿದೆ,' ಎಂದು ಹೇಳಿದರು.
'ಶುಭ್ಮನ್ ಗಿಲ್ ಟಿ20 ಬ್ಯಾಟರ್ ಆಗಿದ್ದು, ಐಪಿಎಲ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾನು ಇಲ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಇಂತಹ ಪರಿಸ್ಥಿತಿಗಳಲ್ಲಿ ಹೆಚ್ಚು ಕೌಶಲ್ಯ ಹೊಂದಿರುವ ಮತ್ತು ಹೊಂದಿಕೊಳ್ಳುವ ಇಂತಹ ಆಟಗಾರರನ್ನು ನೀವು ಮತ್ತೆ ಟಿ20 ಕ್ರಿಕೆಟ್ಗೆ ತರಬೇಕಾಗುತ್ತದೆ. ಗಿಲ್ ಇಂಗ್ಲೆಂಡ್ ಹಾಗೂ ವಿದೇಶಗಳಲ್ಲಿ ಆಡಿದಾಗ ನಾವು ಇದನ್ನು ನೋಡಿದ್ದೇವೆ, ಎಂದು ಹೇಳಿದರು.
'ಮುಂಬರುವ ದಿನಗಳಲ್ಲಿ ಶುಭ್ಮನ್ ಗಿಲ್ಗೆ ಇದೇ ಸರಿಯಾದ ಹಾದಿಯಾಗಿದೆ. ಇದು ತಕ್ಷಣವೇ ಆಗದಿರಬಹುದು, ಆದರೆ ನಿಧಾನವಾಗಿ ಸಂಭವಿಸಲು ಪ್ರಾರಂಭಿಸುತ್ತದೆ,' ಎಂದು ಮಂಜ್ರೇಕರ್ ಹೇಳಿದರು. ಇದೀಗ ಸದ್ಯ ಐರ್ಲೆಂಡ್ ವಿರುದ್ಧದ ಸೋಲಿನ ಗಾಯದಲ್ಲಿರುವ ಭಾರತ ತಂಡವು ಜುಲೈ 1ರಿಂದ ಆರಂಭ ಆಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆರ್ಭಟಿಸಲು ಸಜ್ಜಾಗುತ್ತಿದೆ. ಈ ನಡುವೆಯೇ ವೈಭವ್ ಸೂರ್ಯವಂಶಿ ಅವರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ನೀಡುತ್ತಾರೆಯೇ ಎಂದು ಕಾದುನೋಡಬೇಕಿದೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವುದನ್ನ ನೋಡಲು ಬರೀ ಭಾರತದ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.












Click it and Unblock the Notifications