ಹೊಸ ತ್ರಿಭಾಷಾ ಸೂತ್ರ ಪ್ರಕಟಿಸಿದ CBSE: ರಾಜ್ಯದ ಭಾಷಾ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ KAMS
ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಶಾಲಾ ಪಠ್ಯಕ್ರಮದಲ್ಲಿ ತ್ರಿಭಾಷಾ ನೀತಿಯನ್ನು ಜಾರಿಗೊಳಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 2026-27ನೇ ಶೈಕ್ಷಣಿಕ ಸಾಲಿನಿಂದಲೇ ಸಿಬಿಎಸ್ಇ ಸಂಯೋಜಿತ ಶಾಲೆಗಳಲ್ಲಿ ಈ ನೂತನ ಭಾಷಾ ನೀತಿ ಜಾರಿಗೆ ಬರಲಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆದರೆ, ಸಿಬಿಎಸ್ಇಯ ಈ ನಡೆಯು ಕರ್ನಾಟಕದ ಪ್ರಸ್ತುತ ಭಾಷಾ ನಿಯಮಗಳಿಗೆ ತದ್ವಿರುದ್ಧವಾಗಿದೆ ಎಂದು ರಾಜ್ಯದ ಶಾಲಾ ಆಡಳಿತ ಮಂಡಳಿಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

CBSE ಹೊಸ ತ್ರಿಭಾಷಾ ನೀತಿಯ ಪ್ರಮುಖ ನಿಯಮಗಳು
ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕು ಹಾಗೂ ಅದರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಭಾಷೆಗಳೇ ಆಗಿರಬೇಕು ಎಂದು ಸಿಬಿಎಸ್ಇ ತಿಳಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ವಿದ್ಯಾರ್ಥಿಗಳು ಆಯ್ಕೆ ಮಾಡುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು 'ಭಾರತೀಯ ಭಾಷೆ' ಆಗಿರಲೇಬೇಕು. ಮೂರನೇ ಭಾಷೆಯಾಗಿ (R3) ಇಂಗ್ಲಿಷ್, ಫ್ರೆಂಚ್, ಜರ್ಮನ್ ನಂತಹ ವಿದೇಶಿ ಅಥವಾ ಸ್ಥಳೀಯವಲ್ಲದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಂದಿ, ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾರತೀಯ ಭಾಷೆಗಳ ಉದಾಹರಣೆಗಳನ್ನು ಈ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಪ್ರಸ್ತುತ 2026-27ನೇ ಸಾಲಿನ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಹೊಸ ನಿಯಮ ಅನ್ವಯವಾಗುವುದಿಲ್ಲ; ಅವರು ತಮ್ಮ ಹಳೆಯ ಎರಡು ಭಾಷಾ ಪದ್ಧತಿಯನ್ನೇ ಮುಂದುವರಿಸಲಿದ್ದಾರೆ. ಭಾಷಾ ಕಲಿಕೆಯನ್ನು ಅರ್ಥಪೂರ್ಣ ಮತ್ತು ಆಕರ್ಷಕವಾಗಿಸಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯಿತಿ
ಸದ್ಯ 7, 8 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಂಡಳಿಯು ರಿಲೀಫ್ ನೀಡಿದೆ. ಈ ವಿದ್ಯಾರ್ಥಿಗಳು 10ನೇ ತರಗತಿಗೆ ತೇರ್ಗಡೆಯಾದಾಗ ಮೂರನೇ ಭಾಷೆಯಲ್ಲಿ ಬೋರ್ಡ್ ಪರೀಕ್ಷೆಯನ್ನು ಎದುರಿಸುವ ಅಗತ್ಯ ಇರುವುದಿಲ್ಲ ಎಂದು ಸಿಬಿಎಸ್ಇ ಮಂಡಳಿ ಹೇಳಿದೆ.
ಅದೇ ರೀತಿ, ಈ ತರಗತಿಗಳಲ್ಲಿ ಈಗಾಗಲೇ ಎರಡು ವಿದೇಶಿ ಭಾಷೆಗಳನ್ನು ಓದುತ್ತಿರುವ ವಿದ್ಯಾರ್ಥಿಗಳು, ಹೆಚ್ಚುವರಿಯಾಗಿ ಒಂದು ಭಾರತೀಯ ಭಾಷೆಯನ್ನು ಸೇರಿಸಿಕೊಂಡು ತಮ್ಮ ಅಧ್ಯಯನವನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ನಿಗದಿತ ಸಮಯದೊಳಗೆ ಸೂಕ್ತವಾದ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದು ಮಂಡಳಿ ಭರವಸೆ ನೀಡಿದೆ.
ತ್ರಿಭಾಷಾ ಸೂತ್ರಕ್ಕೆ ಕರ್ನಾಟಕದ ಕ್ಯಾಮ್ಸ್ ತೀವ್ರ ವಿರೋಧ
ಸಿಬಿಎಸ್ಇಯ ಈ ಕಡ್ಡಾಯ ತ್ರಿಭಾಷಾ ಸೂತ್ರಕ್ಕೆ 'ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ' (ಕ್ಯಾಮ್ಸ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ನಿಯಮವು 2015ರ 'ಕನ್ನಡ ಭಾಷಾ ಕಲಿಕಾ ಕಾಯ್ದೆ'ಗೆ ವಿರುದ್ಧವಾಗಿದೆ ಎಂದು ಒಕ್ಕೂಟ ದೂರಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಎಸ್ಇ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಬೋಧಿಸಬೇಕು ಎಂಬುದು ಈ ಕಾಯ್ದೆಯ ನಿಯಮವಾಗಿದೆ. ಹೀಗಿರುವಾಗ ಸಿಬಿಎಸ್ಇ ಬಿಡುಗಡೆ ಮಾಡಿರುವ ಹೊಸ ಸುತ್ತೋಲೆಯು ಕಾನೂನುಬದ್ಧ ಗೊಂದಲಗಳನ್ನು ಸೃಷ್ಟಿಸುತ್ತಿದೆ ಎಂದು ಕ್ಯಾಮ್ಸ್ ಆತಂಕ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿ ಈ ನೀತಿಯ ಅನುಷ್ಠಾನದ ಬಗ್ಗೆ ಸ್ಪಷ್ಟನೆ ಸಿಗುವವರೆಗೆ ಮುಂಬರುವ ಶೈಕ್ಷಣಿಕ ವರ್ಷಕ್ಕೆ ಈ ಸುತ್ತೋಲೆಯನ್ನು ತಡೆಹಿಡಿಯುವಂತೆ ಕ್ಯಾಮ್ಸ್ ಮಂಡಳಿಯನ್ನು ಒತ್ತಾಯಿಸಿದೆ. ಈ ಸಂಬಂಧ ಸಿಬಿಎಸ್ಇ ಅಧ್ಯಕ್ಷರಿಗೆ ಅಧಿಕೃತವಾಗಿ ಕಾನೂನುಬದ್ಧ ಮನವಿಯನ್ನೂ ಸಲ್ಲಿಸಲಾಗಿದೆ.














Click it and Unblock the Notifications