ತಾತನಂತೆ ಪಾಲಿಟಿಕ್ಸ್ಗೆ ಬರಲು ರೆಡಿಯಾದ್ರಾ ನಟ ಜೂನಿಯರ್ ಎನ್ಟಿಆರ್? ಆ ಪಕ್ಷದಿಂದಲೇ ಗೆಲ್ತಾರೆ ಎಂದ ಜನ
ಟಾಲಿವುಡ್ನ ಮೇರುನಟ ದಿವಂಗತ ಎನ್.ಟಿ. ರಾಮರಾವ್ (ಎನ್ಟಿಆರ್) ಅವರು ಅಂದು ರಾಜಕೀಯಕ್ಕೆ ಕಾಲಿಟ್ಟಾಗ ಇಡೀ ದೇಶವೇ ತಿರುಗಿ ನೋಡಿತ್ತು. ಚಿತ್ರರಂಗದಂತೆಯೇ ರಾಜಕೀಯದಲ್ಲೂ ಅವರು ಇತಿಹಾಸ ಸೃಷ್ಟಿಸಿದ್ದರು. ಈಗ ಅದೇ ತಾತನ ರಕ್ತ, ಅವರದ್ದೇ ಹೋಲಿಕೆ, ಅವರದ್ದೇ ಗಡಸು ಧ್ವನಿ ಹಾಗೂ ಅದ್ಭುತ ನಟನಾ ಚಾತುರ್ಯ ಹೊಂದಿರುವ ಜೂನಿಯರ್ ಎನ್ಟಿಆರ್ (ತಾರಕ್) ಕೂಡ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿಬರ್ತಿವೆ. ತಾತನ ಹಾದಿಯಲ್ಲೇ ಸಾಗಿ ಆಂಧ್ರ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಲಿದ್ದಾರೆ ಎನ್ನುವ ಮಾತಿಗೆ ಪೂರಕವಾಗಿ ಮಹತ್ವದ ಬೆಳವಣಿಗೆಗಳು ನಡೆದಿವೆ. ತಾರಕ್ ಆ ಪಕ್ಷದಿಂದಲೇ ತಮ್ಮ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದು ಫ್ಯಾನ್ಸ್ ಕೂಡ ಭವಿಷ್ಯ ನುಡಿದಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 'ಟೀಮ್ ರಾ ಎನ್ಟಿಆರ್' (Team RAW NTR) ಎಂಬ ಸಂಘಟನೆಯೊಂದು ಪ್ರಕಟಣೆಯೊಂದನ್ನು ಹೊರಡಿಸಿತ್ತು. ಜುಲೈ 18ರಂದು ಬೆಳಗ್ಗೆ 10 ಗಂಟೆಗೆ ತಿರುಪತಿಯ ತಾಜ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿತ್ತು. ಜೂನಿಯರ್ ಎನ್ಟಿಆರ್ ಅವರ ಹೆಸರಿನಲ್ಲಿ ಜನಸೇವೆ ಮಾಡುವ ಉದ್ದೇಶದ '#OoruVaada' (ಊರು ವಾಡಾ) ಎಂಬ ವಿನೂತನ ಸಾಮಾಜಿಕ ಯೋಜನೆಯನ್ನು ಈ ಸಭೆಯಲ್ಲಿ ಘೋಷಿಸಲಾಗುವುದು ಎಂದು ಆಯೋಜಕರು ಹೇಳಿಕೊಂಡಿದ್ದರು. ಈ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಜೂನಿಯರ್ ಎನ್ಟಿಆರ್ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಚರ್ಚೆಗಳು ಆಂಧ್ರಪ್ರದೇಶದ ರಾಜಕೀಯ ವಲಯದಲ್ಲಿ ಜೋರಾಗಿ ಸದ್ದು ಮಾಡಿತ್ತು.

ಅಭಿಮಾನಿಗಳಿಗೆ ನಿರಾಸೆ
ಈ ವದಂತಿಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಜೂನಿಯರ್ ಎನ್ಟಿಆರ್ ಅವರ ಅಧಿಕೃತ ಕಚೇರಿ, ಮಾಧ್ಯಮಗಳಿಗೆ ತುರ್ತು ಪ್ರಕಟಣೆ ಬಿಡುಗಡೆ ಮಾಡಿದೆ. ತಾರಕ್ ಸದ್ಯದಲ್ಲೇ ರಾಜಕೀಯಕ್ಕೆ ಮರುಪ್ರವೇಶ ಮಾಡಲಿದ್ದಾರೆ ಎಂಬ ವದಂತಿಗಳಿಗೆ ಅವರ ಅಧಿಕೃತ ಕಚೇರಿಯೇ ಪ್ರಕಟಣೆಯೊಂದರ ಮೂಲಕ ಪೂರ್ಣವಿರಾಮ ಇಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇಂತಹ ಎಲ್ಲ ಸುದ್ದಿಗಳು ಸುಳ್ಳು ಎಂದು ನಟನ ಆಪ್ತ ವಲಯ ಸ್ಪಷ್ಟಪಡಿಸಿದೆ.
"ರಾ ಎನ್ಟಿಆರ್ (RAW NTR) ಹೆಸರಲ್ಲಿ ಚಟುವಟಿಕೆ ನಡೆಸುತ್ತಿರುವ ಸಂಸ್ಥೆಗೂ, ನಟ ಜೂನಿಯರ್ ಎನ್ಟಿಆರ್ ಅಥವಾ ಅವರ ಕಚೇರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆ ಸಂಸ್ಥೆಗೆ ಜೂನಿಯರ್ ಎನ್ಟಿಆರ್ ಅವರ ಪರವಾಗಿ ಮಾತನಾಡಲು ಅಥವಾ ಅವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಲು ಯಾವುದೇ ಅಧಿಕೃತ ಹಕ್ಕು ಅಥವಾ ಅನುಮತಿಯೂ ಇಲ್ಲ" ಎಂದು ತಿಳಿಸಿದೆ.
ಜೂನಿಯರ್ ಎನ್ಟಿಆರ್ ಅವರ ಹೆಸರಿನಲ್ಲಿ ನಡೆಯುವ ಯಾವುದೇ ಅಧಿಕೃತ ಸೇವಾ ಕಾರ್ಯಕ್ರಮ, ಜನಸೇವಾ ಯೋಜನೆ ಅಥವಾ ಪ್ರಕಟಣೆಗಳಿದ್ದಲ್ಲಿ, ಅದನ್ನು ನಟನ ಕಚೇರಿ ಅಥವಾ ಅವರ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಮಾತ್ರವೇ ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕರು ಹಾಗೂ ಅಭಿಮಾನಿಗಳು ಇಂತಹ ಅನಧಿಕೃತ ಸುದ್ದಿಗಳು ಮತ್ತು ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಜೂನಿಯರ್ ಎನ್ಟಿಆರ್ ತಂಡ ಮನವಿ ಮಾಡಿಕೊಂಡಿದೆ. ಪ್ರಸ್ತುತ ಜೂನಿಯರ್ ಎನ್ಟಿಆರ್ ಅವರು ತಮ್ಮ ಮುಂಬರುವ ಸಿನಿಮಾ ಪ್ರಾಜೆಕ್ಟ್ಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಸದ್ಯಕ್ಕೆ ರಾಜಕೀಯ ಸೇರುವ ಯಾವುದೇ ಆಲೋಚನೆ ಇಲ್ಲ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.












Click it and Unblock the Notifications