ಮಳೆಗಾಲದಲ್ಲಿ ಈ ತರಕಾರಿ ತಿನ್ನುವ ಮುನ್ನ ಎಚ್ಚರ:ಗಂಭೀರ ಕಾಯಿಲೆಗೆ ಕಾರಣವಾಗಬಹುದು ಕಣ್ಣಿಗೆ ಕಾಣದ ಹುಳಗಳು
ಮಳೆಗಾಲ ಆರಂಭವಾಗುತ್ತಿದ್ದಂತೆ ತರಕಾರಿಗಳಲ್ಲಿ ಬ್ಯಾಕ್ಟೀರಿಯಾ, ಹುಳಗಳು ಮತ್ತು ಪರಾವಲಂಬಿ ಜೀವಿಗಳ ಕಾಟ ಹೆಚ್ಚಾಗುತ್ತದೆ. ಸರಿಯಾಗಿ ಬೇಯಿಸದೆ ಮಾಂಸ, ಮೀನು ಅಥವಾ ತರಕಾರಿಗಳನ್ನು ಸೇವಿಸಲೇಬಾರದು. ಅದರಲ್ಲಿರುವ 'ಟೇಪ್ವರ್ಮ್' ಮೊಟ್ಟೆಗಳು ನೇರವಾಗಿ ಮಾನವನ ದೇಹವನ್ನು ಸೇರುವ ಅಪಾಯವಿರುತ್ತದೆ. ಈ ಟೇಪ್ ವರ್ಮ್ಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗುವುದು.
ಹಿರಿಯ ನರರೋಗ ತಜ್ಞರ ಪ್ರಕಾರ, ಮಳೆಗಾಲದಲ್ಲಿ ವಿಶೇಷವಾಗಿ ಏಳು ಬಗೆಯ ತರಕಾರಿಗಳಲ್ಲಿ ಈ ಟೇಪ್ ವರ್ಮ್ ಅಡಗಿರುತ್ತವೆ. ಇವು ಸಾಮಾನ್ಯವಾಗಿ ಕಣ್ಣಿಗೆ ಕಾಣದಷ್ಟು ತೆಳ್ಳಗೆ ಇರುತ್ತವೆ. ಇನ್ನು ಇವುಗಳ ಮೊಟ್ಟೆ ತರಕಾರಿ ಬೀಜಗಳಂತೆ ಕಾಣುವುದರಿಂದ ಬಹುತೇಕ ಮಂದಿ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಆದರೆ ಇಲ್ಲಿ ನಾವು ತೋರುವ ನಿರ್ಲಕ್ಷ್ಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದು.

ಅಪಾಯಕಾರಿ ತರಕಾರಿಗಳು ಮತ್ತು ಅವುಗಳನ್ನು ಸ್ವಚ್ಛಗೊಳಿಸುವ ವಿಧಾನ:
ಹೀರೆಕಾಯಿ: ಇವುಗಳಲ್ಲಿ ಹುಳಗಳು ಅತಿ ವೇಗವಾಗಿ ಬೆಳೆಯುತ್ತವೆ. ಆಹಾರದ ಮೂಲಕ ಇವು ಹೊಟ್ಟೆ ಸೇರಿ, ಮೆದುಳಿನವರೆಗೂ ತಲುಪುವ ಸಾಧ್ಯತೆ ಇರುತ್ತದೆ.
ತೊಂಡೆಕಾಯಿ: ಕೃತಕ ಗೊಬ್ಬರ ಮತ್ತು ರಾಸಾಯನಿಕ ಬಳಸಿ ಬೆಳೆಸಿದ ತೊಂಡೆಕಾಯಿಯ ಬೀಜಗಳಲ್ಲಿ ಟೇಪ್ವರ್ಮ್ ಮೊಟ್ಟೆಗಳಿರುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ. ಇವುಗಳನ್ನು ಚೆನ್ನಾಗಿ ತೊಳೆಯದೆ ಸೇವಿಸಿದರೆ ನರಸಂಬಂಧಿ ಸಮಸ್ಯೆಗಳು ಉಂಟಾಗಬಹುದು.
ಕೆಸುವಿನ ಎಲೆ: ಈ ಎಲೆಗಳ ಮೇಲೆ ನೂರಾರು ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಪರಾವಲಂಬಿಗಳಿಗೆ ಇರುತ್ತದೆ. ಈ ಎಲೆಯನ್ನು ಪಲ್ಯ, ಸಾಂಬಾರ್, ಚಟ್ನಿ ತಯಾರಿಸಲು ಬಳಸಲಾಗುತ್ತದೆ. ಅಲ್ಲದೆ ಕರಾವಳಿ ಭಾಗಗಳಲ್ಲಿ ಈ ಎಲೆಯನ್ನು ಬಳಸಿ ಪತ್ರೊಡೆಗಳನ್ನು ಕೂಡಾ ತಯಾರಿಸಲಾಗುತ್ತದೆ. ಆದರೆ, ಈ ಎಲೆಯನ್ನು ಅಜಾಗರೂಕತೆಯಿಂದ ಸೇವಿಸಿದರೆ ವಾಂತಿ, ಭೇದಿ ಮತ್ತು ಜೀರ್ಣಕ್ರಿಯೆ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಕ್ಯಾಪ್ಸಿಕಂ: ಇದರ ಬೀಜಗಳ ಮಧ್ಯೆ ಪರಾವಲಂಬಿಗಳು ಮೊಟ್ಟೆ ಇಟ್ಟಿರುತ್ತವೆ. ಹೀಗಾಗಿ ಅಡುಗೆ ಮಾಡುವ ಮುನ್ನ ಬೀಜಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ಕಡ್ಡಾಯ.
ಬದನೆಕಾಯಿ: ಬದನೆಕಾಯಿಯನ್ನು ಕತ್ತರಿಸಿದಾಗ ಹುಳುಗಳು ಕಂಡುಬಂದರೆ ಅಂತಹ ಬದನೆಕಾಯಿಯನ್ನು ಸಂಪೂರ್ಣವಾಗಿ ಎಸೆದುಬಿಡಿ. ಸ್ವಲ್ಪ ಕತ್ತರಿಸಿ ಮಿಕ್ಕಿರುವ ಬದನೆಯನ್ನು ಬಳಸಬಹುದು ಅಂದುಕೊಂಡರೆ ಅದು ಬಹಳ ಅಪಾಯಕಾರಿ. ಇದರಲ್ಲಿ ಅಡಗಿರುವ ಹುಳ ಮತ್ತು ಮೊಟ್ಟೆ ಬೇಯಿಸಿದ ನಂತರವೂ ಬದುಕಿ ಉಳಿಯುವ ಅಪಾಯವಿರುತ್ತದೆ.
ಹೂಕೋಸು : ಇದರಲ್ಲಿ ಕಣ್ಣಿಗೆ ಕಾಣದ ಸಣ್ಣ ಹುಳುಗಳು ಇರಬಹುದು. ಇವು ನೇರವಾಗಿ ಯಕೃತ್ತು ಮತ್ತು ಮೆದುಳಿಗೆ ಹಾನಿ ಮಾಡಬಲ್ಲವು. ಆದ್ದರಿಂದ, ಹೂಕೋಸನ್ನು ಬಿಸಿ ನೀರಿನಲ್ಲಿ ಬೇಯಿಸಿ, ಆ ನೀರನ್ನು ಚೆನ್ನಾಗಿ ಬಸಿದು ಬಿಸಾಡಬೇಕು.
ಎಲೆಕೋಸು (Cabbage): ಇದರ ಎಲೆಗಳ ಪದರಗಳಲ್ಲಿ ಟೇಪ್ವರ್ಮ್ಗಳು ಅಡಗಿರುತ್ತವೆ. ಇವು ಮಾನವನ ದೇಹದಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.ಹಾಗಾಗಿ ಎಲೆ ಕೋಸನ್ನು ಬೇಯಿಸದೆ ಅಥವಾ ಅರ್ಧ ಬೇಯಿಸಿ ತಿನ್ನಲೇ ಬಾರದು. ಹಸಿ ಎಲೆಕೋಸನ್ನು ಸೇವಿಸುವುದು ಅತ್ಯಂತ ಅಪಾಯಕಾರಿ.
ತಜ್ಞರು ಹೇಳುವುದೇನು?:
ಮಳೆಗಾಲದಲ್ಲಿ 'ನ್ಯೂರೋಸಿಸ್ಟಿಸೆರ್ಕೋಸಿಸ್' (Neurocysticercosis) ಎಂಬ ಗಂಭೀರ ಮೆದುಳಿನ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು 'ಟೇನಿಯಾ ಸೋಲಿಯಂ' ಎಂಬ ಟೇಪ್ವರ್ಮ್ ಲಾರ್ವಾಗಳಿಂದ ಉಂಟಾಗುತ್ತದೆ. ಇದು ದೇಹ ಸೇರಿಕೊಂಡರೆ ಅನೇಕ ಸಮಸ್ಯೆಗಳನ್ನು ಹುಟ್ಟಿ ಹಾಕುತ್ತದೆ. ದೇಹದಲ್ಲಿ ಅಲ್ಲಲ್ಲಿ ಊತ ಕಾಣಿಸಿಕೊಳ್ಳಬಹುದು. ಫಿಟ್ಸ್ ಮತ್ತು ದೀರ್ಘಕಾಲದ ತಲೆನೋವಿಗೆ ಕಾರಣವಾಗಬಹುದು.
ಮಳೆಗಾಲದಲ್ಲಿ ಈ ತರಕಾರಿಗಳನ್ನು ಮಾರುಕಟ್ಟೆಯಿಂದ ತಂದ ತಕ್ಷಣ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಅಡುಗೆ ಮಾಡುವಾಗ ಯಾವುದೇ ಕಾರಣಕ್ಕೂ ಈ ತರಕಾರಿಯನ್ನು ಅರ್ಧ ಬೇಯಿಸಬೇಡಿ. ಅಥವಾ ಹಸಿ ಬಳಸಲು ಹೋಗಬೇಡಿ. ಆರೋಗ್ಯದ ವಿಷಯದಲ್ಲಿ ತೋರುವ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications