ಹಣ್ಣು-ತರಕಾರಿಯನ್ನು ತಾಜಾ ಇಡೋ ಮಣ್ಣಿನ ಫ್ರಿಡ್ಜ್ ಇದು, ಕರೆಂಟ್ ಬಿಲ್ಲೂ ಇಲ್ಲ, ಆರೋಗ್ಯಕ್ಕೂ ಒಳ್ಳೇದು
ನಾವು ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳನ್ನು ಬೇರೆ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ನಮ್ಮ ಮನೆ ಅಡುಗೆ ಮನೆ ತಲುಪುವ ಮುನ್ನ ಈ ಹಣ್ಣು ತರಕಾರಿಗಳು ಜಗತ್ತಿನ ಅನೇಕ ಪ್ರದೇಶಗಳನ್ನು ಸುತ್ತಿಕೊಂಡು ಬರುತ್ತವೆ. ಹೀಗೆ ದೂರದ ಊರುಗಳಿಂದ ಹಣ್ಣು ಅಥವಾ ತರಕಾರಿಗಳನ್ನು ಸಾಗಿಸಿಕೊಂಡು ಬರುವಾಗ ಪ್ರತಿ ವರ್ಷ ಟನ್ ಗಟ್ಟಲೆ ಹಣ್ಣು ತರಕಾರಿಗಳು ಮಾರುಕಟ್ಟೆ ತಲುಪುವ ಮುನ್ನವೇ ಕೊಳೆತು ನಾರುತ್ತವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸುತ್ತದೆ.
ಆದರೆ ಇದೀಗ ಈ ಸಮಸ್ಯೆಗೆ ವಿಜ್ಞಾನಿಗಳು ಪರಿಹಾರ ಕಂಡು ಹಿಡಿದಿದ್ದಾರೆ. ಇದರ ಪ್ರಕಾರ ಹಣ್ಣು ತರಕಾರಿಗಳನ್ನು ಬಹಳಷ್ಟು ದಿನ ನ್ಯಸರ್ಗಿಕವಾಗಿ ತಾಜಾವಾಗಿಡುವುದು ಸಾಧ್ಯವಾಗುತ್ತದೆ. ಸಾಗಾಟ ಮತ್ತು ಸಂಗ್ರಹಣೆಯ ಅವಧಿಯಲ್ಲಿ ಲಕ್ಷಾಂತರ ಟನ್ ಹಣ್ಣು ಹಾಗೂ ತರಕಾರಿಗಳು ಕೊಳೆತು ನಾಶವಾಗುವ ಆತಂಕ ಇರುವುದಿಲ್ಲ. ಇನ್ನು ವಿಜ್ಞಾನಿಗಳು ಕಂಡುಕೊಂಡಿರುವ ಈ ಪರಿಹಾರ ಪರಿಸರಸ್ನೇಹಿ ಮಾತ್ರವಲ್ಲದೆ ಇದಕ್ಕೆ ತಗಲುವ ವೆಚ್ಚ ಕೂಡಾ ಅತ್ಯಂತ ಕಡಿಮೆ.

ಹಣ್ಣು, ತರಕಾರಿ ಕೊಳೆಯುವುದನ್ನು ತಡೆಯಬಹುದು:
ಹೌದು, ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ ಸಾಮಾನ್ಯ ಜೇಡಿಮಣ್ಣನ್ನು ಬಳಸಿಕೊಂಡು ಹಣ್ಣುಗಳು ಬೇಗನೆ ಕೊಳೆಯುವುದನ್ನು ತಡೆಯಬಹುದು ಎಂದು ಕೋಪನ್ಹೇಗನ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆಹಚ್ಚಿದ್ದಾರೆ. ಲಾರೆನ್ಸ್ ಬರ್ಕ್ಲಿ ನ್ಯಾಷನಲ್ ಲ್ಯಾಬೊರೇಟರಿ (LBNL) ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಹೆಲೋಯಿಸಾ ಬೋರ್ಡಲ್ಲೊ ಅವರ ನೇತೃತ್ವದ ತಂಡವು ಈ ಮಹತ್ವದ ಸಂಶೋಧನೆ ನಡೆಸಿದೆ.
ಏನಿದು ಎಥಿಲಿನ್ ಸಮಸ್ಯೆ?
ನಾವು ತಿನ್ನುವ ಬಹುಪಾಲು ಹಣ್ಣು ಮತ್ತು ತರಕಾರಿಗಳು ಜಗತ್ತಿನ ಬೇರೆ ಬೇರೆ ದೇಶಗಳಿಂದ ಹಡಗು ಅಥವಾ ಕಂಟೈನರ್ಗಳ ಮೂಲಕ ಬರುತ್ತವೆ. ಈ ಹಣ್ಣುಗಳು ಸ್ವಾಭಾವಿಕವಾಗಿ 'ಎಥಿಲಿನ್' ಎಂಬ ಅನಿಲವನ್ನು ಬಿಡುಗಡೆ ಮಾಡುತ್ತವೆ. ಈ ಅನಿಲವೇ ಕಾಯಿ ಹಣ್ಣಾಗಲು ಪ್ರಮುಖ ಕಾರಣ. ಆದರೆ, ಕಂಟೈನರನ್ನು ಭದ್ರವಾಗಿ ಮುಚ್ಚಿ ಅದರಲ್ಲಿ ಹಣ್ಣುಗಳನ್ನು ಇರಿಸಿದಾಗ ಇಲ್ಲಿ ಬಿಡುಗಡೆಯಾಗುವ ಎಥಿಲಿನ್ ಅನಿಲದ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಗನೆ ಅಗತ್ಯಕ್ಕಿಂತ ಜಾಸ್ತಿಯೇ ಹಣ್ಣಾಗತ್ತದೆ. ಪರಿಣಾಮವಾಗಿ ಮಾರುಕಟ್ಟೆ ತಲುಪುವ ಮೊದಲೇ ಕೊಳೆತು ಹೋಗುತ್ತವೆ. ಇದು ಜಾಗತಿಕವಾಗಿ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಕಾರಣವಾಗುತ್ತಿದೆ.
ಜೇಡಿಮಣ್ಣಿನಿಂದ ಸಿಕ್ಕಿತು ಪರಿಹಾರ:
ಈ ಸಮಸ್ಯೆಗೆ ಜೇಡಿಮಣ್ಣು ಸೂಕ್ತ ಪರಿಹಾರ ನೀಡಬಲ್ಲದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಜೇಡಿಮಣ್ಣು ನೈಸರ್ಗಿಕ, ವಿಷಕಾರಿಯಲ್ಲದ ಮತ್ತು ಅಗ್ಗವಾಗಿ ಸಿಗುವ ವಸ್ತು. ವಿಜ್ಞಾನಿಗಳು ಜೇಡಿಮಣ್ಣಿಗೆ ಸೌಮ್ಯವಾದ ರಾಸಾಯನಿಕ ಸಂಸ್ಕರಣೆ ನೀಡುವ ಮೂಲಕ, ಅದರಲ್ಲಿನ ಸೂಕ್ಷ್ಮ ರಂಧ್ರಗಳ ಗಾತ್ರವನ್ನು ಹೆಚ್ಚಿಸಿದ್ದಾರೆ. ಈ ಮಾರ್ಪಡಿಸಿದ ಜೇಡಿಮಣ್ಣು ಪರಿಸರದಲ್ಲಿರುವ ಎಥಿಲಿನ್ ಅನಿಲವನ್ನು ಸಂಪೂರ್ಣವಾಗಿ ಹೀರಿಕೊಂಡು, ಹಣ್ಣುಗಳು ಬೇಗನೆ ಹಣ್ಣಾಗದಂತೆ ತಡೆಯುತ್ತದೆ. ಇದಕ್ಕಾಗಿ ಸಂಶೋಧಕರು ಪ್ರಕೃತಿಯಲ್ಲಿ ವ್ಯಾಪಕವಾಗಿ ಸಿಗುವ 'ಮಾಂಟ್ಮೊರಿಲೊನೈಟ್'ಎಂಬ ಜೇಡಿಮಣ್ಣಿನ ಖನಿಜವನ್ನು ಬಳಸಿದ್ದಾರೆ. ನ್ಯೂಟ್ರಾನ್ ಮತ್ತು ಎಕ್ಸ್-ರೇ ತಂತ್ರಜ್ಞಾನ ಬಳಸಿ ಈ ಸಂಶೋಧನೆ ನಡೆಸಲಾಗಿದೆ.
ಶೂ ಬಾಕ್ಸ್ನಲ್ಲಿರುವ 'ಸಿಲಿಕಾ ಜೆಲ್' ಮಾದರಿ ಬಳಕೆ:
ನಾವು ಹೊಸ ಶೂ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿದಾಗ ತೇವಾಂಶ ತಡೆಯಲು ಸಣ್ಣ ಸಿಲಿಕಾ ಜೆಲ್ ಪ್ಯಾಕೆಟ್ಗಳನ್ನು ಇಟ್ಟಿರುವುದನ್ನು ನೋಡಿರುತ್ತೇವೆ. ಅದೇ ಮಾದರಿಯಲ್ಲಿ, ಈ ಜೇಡಿಮಣ್ಣಿನ ಪುಡಿಯನ್ನು ಸಣ್ಣ ಸಣ್ಣ ಪ್ಯಾಕೆಟ್ಗಳಲ್ಲಿ ಹಾಕಿ ಹಣ್ಣು-ತರಕಾರಿ ಸಾಗಿಸುವ ಬಾಕ್ಸ್ಗಳಲ್ಲಿ ಇಡಲಾಗುವುದು. ಈ ಮೂಲಕ ಜೇಡಿಮಣ್ಣು ಹಣ್ಣುಗಳಿಂದ ಬರುವ ಹೆಚ್ಚುವರಿ ಎಥಿಲಿನ್ ಅನಿಲವನ್ನು ಹೀರಿಕೊಳ್ಳುತ್ತದೆ.
ಗ್ರಾಹಕರಿಗೆ ಸಿಗಲಿದೆ ನೈಸರ್ಗಿಕ ರುಚಿ:
ಪ್ರಸ್ತುತ ಹಣ್ಣುಗಳು ದಾರಿಯಲ್ಲೇ ಕೊಳೆತುಹೋಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಪೂರ್ಣವಾಗಿ ಹಣ್ಣಾಗುವ ಮೊದಲೇ ಗಿಡದಿಂದ ಕೀಳಲಾಗುತ್ತದೆ. ಇದರಿಂದಾಗಿ ಹಣ್ಣುಗಳಿಗೆ ನೈಸರ್ಗಿಕ ರುಚಿ ಮತ್ತು ಘಮ ಸಿಗುತ್ತಿರಲಿಲ್ಲ. ಆದರೆ ಈ ಹೊಸ ತಂತ್ರಜ್ಞಾನದಿಂದಾಗಿ ಗ್ರಾಹಕರು ಹಣ್ಣಿನ ನೈಸರ್ಗಿಕ ರುಚಿಯನ್ನು ಸವಿಯಬಹುದು. ಅದು ಕೂಡಾ ಯಾವುದೇ ವಿಷಕಾರಿ ಕೆಮಿಕಲ್ಗಳಿಲ್ಲದೆ.
ಅಲ್ಲದೆ ಈ ತಂತ್ರಜ್ಞಾನವು ಜಾಗತಿಕವಾಗಿ ಆಹಾರ ಪೋಲಾಗುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹಣ್ಣುಗಳನ್ನು ತೋಟದಲ್ಲೇ ಪೂರ್ಣವಾಗಿ ಬೆಳೆಯಲು ಬಿಟ್ಟು, ತಡವಾಗಿ ಕಟಾವು ಮಾಡಬಹುದು. ಇದರಿಂದ ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿದ, ಅತ್ಯುತ್ತಮ ರುಚಿಯ ಹಣ್ಣುಗಳು ಸಿಗಲಿವೆ.
ಸದ್ಯ ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ತರಲು ಮತ್ತು ಪರಿಸರಕ್ಕೆ ಮತ್ತಷ್ಟು ಪೂರಕವಾಗುವಂತೆ ಮಾಡಲು ಸಂಶೋಧನಾ ತಂಡವು ಪ್ರಯೋಗಗಳನ್ನು ಮುಂದುವರಿಸಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications