ಮನೆಯ ಸ್ವಲ್ಪ ಜಾಗದಲ್ಲಿಯೇ ಬೆಳೆಸಿ ನಿಮಗಿಷ್ಟವಾದ ತರಕಾರಿ: ನಗರ ಕೃಷಿ ಮಾಡುವ ಸುಲಭ ಮಾರ್ಗ ಇಲ್ಲಿದೆ
ಇತ್ತೀಚೆಗೆ ನಮ್ಮ ಯುವ ಪೀಳಿಗೆ ಸಾವಯವ ಕೃಷಿಯತ್ತ ವಾಲುತ್ತಿದೆ. ಇದರ ಮುಂದುವರಿದ ಭಾಗವಾಗಿ ಜನರು ತಮ್ಮ ಅಡಿಗೆಗೆ ಅಗತ್ಯವಿರುವ ತರಕಾರಿಗಳನ್ನು ತಾವೇ ಬೆಳೆಯಲು ಮುಂದಾಗುತ್ತಿದ್ದಾರೆ. ದಿನೇ ದಿನೇ ಆರೋಗ್ಯ ಪ್ರಜ್ಞೆ ಹೆಚ್ಚಿಸಿಕೊಳ್ಳುತ್ತಿರುವ ನಗರ ಪ್ರದೇಶದ ಜನರು ಇದೀಗ ನಗರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಈ ಮೂಲಕ ರಾಸಾಯನಿಕ ರಹಿತ ಸಾವಯವ ತರಕಾರಿಗಳನ್ನೇ ಬಳಸುವ ಉದ್ದೇಶ ಹೊಂದಿದ್ದಾರೆ.
ನಗರ ಅಥವಾ ಉಪನಗರ ಪ್ರದೇಶಗಳಲ್ಲಿ ಆಹಾರ ಬೆಳೆಗಳನ್ನು ಬೆಳೆಸುವುದು, ಸಂಸ್ಕರಿಸುವುದು ಮತ್ತು ವಿತರಿಸುವ ಪ್ರಕ್ರಿಯೆಯನ್ನು ನಗರ ಕೃಷಿ ಎಂದು ಕರೆಯಲಾಗುತ್ತದೆ. ನಗರ ಕೃಷಿ ಎಂದರೆ ಮನೆ ಅಂಗಳ, ಬಾಲ್ಕನಿ, ಟೆರೇಸ್ ಮೇಲೆ ಅಥವಾ ಖಾಲಿ ಜಾಗಗಳಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆಯುವುದು ಎಂದರ್ಥ. ಈಗ ಕೃಷಿ ಎನ್ನುವುದು ಗ್ರಾಮಾಂತರದಲ್ಲಿ ವಿಸ್ತಾರವಾದ ಹೊಲಗಳಿಗೆ ಸೀಮಿತವಾಗಿಲ್ಲ, ನಮ್ಮ ನಗರಗಳ ಹೃದಯಭಾಗದಲ್ಲಿಯೂ ಹೊಲಗಳು ತಲೆ ಎತ್ತುತ್ತಿವೆ. ಟೆರೇಸ್ ಗಾರ್ಡನ್, ಸಮುದಾಯ ಪ್ಲಾಟ್ಗಳು ಮತ್ತು ಲಂಬವಾದ ತೋಟಗಳನ್ನು ಪಟ್ಟಣದಲ್ಲಿ ಹೆಚ್ಚಾಗಿ ಅಸ್ತಿತ್ವಕ್ಕೆ ತರಲಾಗುತ್ತಿದೆ.

ನಗರ ಕೃಷಿ ಮತ್ತು ಸ್ಥಳೀಯ ಉತ್ಪನ್ನಗಳು ಪ್ರಕೃತಿಯನ್ನು ನಮ್ಮ ಹತ್ತಿರಕ್ಕೆ ತರುವ ಎರಡು ಪ್ರವೃತ್ತಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ನಗರ ಕೃಷಿ ಪ್ರವೃತ್ತಿಯು ವೇಗವಾಗಿ ಬೆಳೆಯುತ್ತಿದೆ. ಬೆಳೆಯುತ್ತಿರುವ ಪ್ರವೃತ್ತಿಯಾದ ನಗರ ಕೃಷಿ, ನಗರ ಮಿತಿಯಲ್ಲಿ ಬೆಳೆಗಳನ್ನು ಬೆಳೆಸುವುದು ಮತ್ತು ಜಾನುವಾರುಗಳನ್ನು ಸಾಕುವುದನ್ನು ಒಳಗೊಂಡಿರುತ್ತದೆ. ಇದು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ. ನಗರ ಕೃಷಿಯು ಖಾಲಿ ಸ್ಥಳಗಳು, ಛಾವಣಿಗಳು ಮತ್ತು ಸಣ್ಣ ಸ್ಥಳಗಳನ್ನು ಹಸಿರು ಓಯಸಿಸ್ಗಳಾಗಿ ಪರಿವರ್ತಿಸುತ್ತದೆ.
ಇಲ್ಲಿ ಟೆರೇಸ್ಗಳಲ್ಲಿ ದೊಡ್ಡ ದೊಡ್ಡ ಕುಂಡಗಳನ್ನು ಇಟ್ಟು ಅವುಗಳಲ್ಲಿ ಸಸಿ ನೆಟ್ಟು ತರಕಾರಿ ಬೆಳೆಯಬಹುದು. ಅಥವಾ ಲಂಬ ಕೃಷಿ ಮೂಲಕವೂ ತಮಗೆ ಅಗತ್ಯವಿರುವ ಬೆಳೆಗಳನ್ನು ಬೆಳೆಯಬಹುದು. ಹೀಗೆ ಬೆಳೆದ ಬೆಳೆಗಳನ್ನು ತಮ್ಮ ಸ್ವಂತಕ್ಕೆ ಬೇಕಾದಷ್ಟು ಬಳಸಿಕೊಂಡು, ಮಾರುಕಟ್ಟೆಗೆ ಮಾಡಲೂ ಬಹುದು. ಈ ಮೂಲಕ ಇದು ಸಂಪಾದನೆಗೆ ಒಂದು ಹಾದಿಯನ್ನೂ ಮಾಡಿ ಕೊಡುತ್ತದೆ.
ನಗರ ಕೃಷಿಯಲ್ಲಿ ಯಾವ ತರಕಾರಿಗಳನ್ನು ಬೆಳೆಯಬಹುದು:
ನಗರ ಕೃಷಿ ಮೂಲಕ ಬೆಳೆಯಬಹುದಾದ ಪ್ರಮುಖ ತರಕಾರಿಗಳೆಂದರೆ ಎಲೆ ತರಕಾರಿಗಳಾದ ಪಾಲಕ್, ಕೊತ್ತಂಬರಿ, ಪುದೀನಾ, ಮೆಂತೆ, ಬಳ್ಳಿ ತರಕಾರಿಗಳಾದ ಸೋರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಹಾಗಲಕಾಯಿ, ಮತ್ತು ಅಲಸಂಡೆ. ಹಣ್ಣು-ತರಕಾರಿಗಳಾದ ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿ, ಮತ್ತು ಬೆಂಡೆಕಾಯಿ. ಬೇರು ತರಕಾರಿಗಳಾದ ಮೂಲಂಗಿ, ಕ್ಯಾರೆಟ್, ಮತ್ತು ಬೀಟ್ರೂಟ್ಗಳನ್ನು ಬೆಳೆಸಬಹುದು.
ನಗರ ಕೃಷಿಯ ಸಲಹೆಗಳು:
ಜಾಗದ ಬಳಕೆ ಹೇಗೆ ?: ಬಾಲ್ಕನಿ, ಟೆರೇಸ್, ಅಥವಾ ಕಿಟಕಿ ಬದಿಯಲ್ಲಿ ಕುಂಡಗಳನ್ನು ಇಟ್ಟು ಈ ಸಸಿಗಳನ್ನು ಬೆಳೆಸಬಹುದು. ವರ್ಷದಲ್ಲಿ ಎಷ್ಟು ಸಮಯ ಬೆಳೆ ಬೆಳೆಯಬಹುದು :ನೀರು ಆಧಾರಿತ ವ್ಯವಸ್ಥೆಯ ಮೂಲಕ ವರ್ಷವಿಡೀ ತರಕಾರಿಗಳನ್ನು ಬೆಳೆಯಬಹುದು. ಮನೆಯಲ್ಲಿನ ತ್ಯಾಜ್ಯದಿಂದ ಮಾಡಿದ ಕಾಂಪೋಸ್ಟ್ ಗೊಬ್ಬರವನ್ನು ಬಳಸಿ. ಈ ವಿಧಾನಗಳ ಮೂಲಕ ತಾಜಾ ಮತ್ತು ರಾಸಾಯನಿಕ ಮುಕ್ತ ತರಕಾರಿಗಳನ್ನು ಮನೆಯಲ್ಲೇ ಬೆಳೆಸಬಹುದು, ಬಳಸಬಹುದು.
ನಗರ ಕೃಷಿಯ ಪ್ರಯೋಜನಗಳು:
*ರಾಸಾಯನಿಕ ಮುಕ್ತ, ತಾಜಾ ತರಕಾರಿ-ಹಣ್ಣುಗಳು ನಿಮ್ಮ ಅಡುಗೆ ಮನೆ ಸೇರುತ್ತದೆ. ಮಕ್ಕಳಿಗೆ ಮನೆಮಂದಿಗೆ ತರಕಾರಿಗಳನ್ನು ನೀಡುವಾಗ ಯೋಚಿಸಬೇಕಿಲ್ಲ.ಯಾವುದೇ ಅಂಜು ಅಳಿಕಿಲ್ಲದೆ ಮಕ್ಕಳಿಗೆ ನಗರ ಕೃಷಿ ಮೂಲಕ ಬೆಳೆದ ತರಕಾರಿಗಳನ್ನು ನೀಡಬಹುದು.
*ತ್ಯಾಜ್ಯ ನಿರ್ವಹಣೆ : ಮನೆಯಲ್ಲಿನ ಸಾವಯವ ತ್ಯಾಜ್ಯವನ್ನು ಅಂದರೆ ಅಡುಗೆ ಮನೆಯ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಬಳಸಬಹುದು. ಈ ಮೂಲಕ ಅಡುಗೆ ಮನೆಯ ತ್ಯಾಜ್ಯ ನಿರ್ವಹಿಸುವುದು ಕೂಡಾ ಸುಲಭವಾಗುವುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications