ಈ ಕೆಲ್ಸ ಮಾಡದಿದ್ರೆ ಸರ್ಕಾರಿ ಸೌಲಭ್ಯಗಳು ಕಟ್: ಸಿಎಂ ಡಿಕೆಶಿ
ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಸದ್ಯ ಇವುಗಳು ಪ್ರಚಲಿತದಲ್ಲಿವೆ. ಇನ್ಮುಂದೆ ಈ ಕೆಲ್ಸ ಮಾಡದಿದ್ದರೆ ಇವುಗಳ ಜೊತೆ ಎಲ್ಲಾ ಸರ್ಕಾರದ ಎಲ್ಲಾ ಯೋಜನೆಗಳು ಬಂದ್ ಆಗುತ್ತವೆ ಎಂದು ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಮತದಾನದ ಹಕ್ಕು ಕಳೆದುಕೊಳ್ಳುವವರು ಮುಂದೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಪಡಿತರ ಹಂಚಿಕೆಯಲ್ಲಿ ಮತದಾರರಿಗೆ ಮಾತ್ರ ನೀಡಲಾಗುತ್ತಿದೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ಆದೇಶ ಹೊರಡಿಸಲಾಗಿದೆ. ನೀವು ಮುಂದಿನ ದಿನಗಳಲ್ಲಿ ಮತದಾನದ ಹಕ್ಕು ಉಳಿಸಿಕೊಳ್ಳದಿದ್ದರೆ ಗ್ಯಾರಂಟಿ ಯೋಜನೆಗಳು ಸೇರಿದಂತೆ ಪಿಂಚಣಿ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳು ಪಡೆಯಲು ತೊಂದರೆ ಆಗಲಿದೆ,' ಎಂದು ಹೇಳಿದರು.

ಸರ್ಕಾರಿ ಯೋಜನೆಗಳನ್ನು ಪಡೆಯುವವರ ಗಮನಕ್ಕೆ
'ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳ ಫಲಾನುಭವಿಗಳ ಮಾಹಿತಿ ಪಡೆಯುವ ಪ್ರಕ್ರಿಯೆ ಸದ್ಯದಲ್ಲೇ ಆರಂಭಿಸುತ್ತೇವೆ. ನಾವು ತಕ್ಷಣವೇ ಈ ಯೋಜನೆ ನಿಲ್ಲಿಸುವುದಿಲ್ಲ. ಮತದಾನದ ಹಕ್ಕು ನಿಮ್ಮ ಬದುಕಿನ ಹಕ್ಕು. ಆದ್ದರಿಂದ ಅದನ್ನು ಉಳಿಸುವುದು ನಮ್ಮ ಗುರಿ. ಈಗ 18 ವರ್ಷ ತುಂಬಿರುವವರು ಚುನಾವಣಾ ಆಯೋಗದ ನಮೂನೆ 6 ಅನ್ನು ವಯೋಮಿತಿ ದೃಢೀಕರಣ ಪತ್ರ ಜೊತೆಗೆ ತುಂಬುವ ಮೂಲಕ ತಮ್ಮ ಮತದಾನದ ಹಕ್ಕು ಪಡೆಯಬಹುದು,' ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭ
ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಆರಂಭವಾಗಲಿದೆ. ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕು. ಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ, ಬಿಎಲ್ಓಗಳು ನಿಮ್ಮ ಮನೆಗಳಿಗೆ ಬಂದು ಅರ್ಜಿ ನೀಡಲಿದ್ದಾರೆ. 30 ದಿನಗಳ ಅವಧಿಯಲ್ಲಿ ಕಡ್ಡಾಯವಾಗಿ ಈ ಎನ್ಯುಮರೇಷನ್ ಅರ್ಜಿ ತುಂಬಿ ಅಗತ್ಯ ದಾಖಲೆಗಳು ಹಾಗೂ ಹೊಸ ಫೋಟೋಗಳೊಂದಿಗೆ ಸಲ್ಲಿಕೆ ಮಾಡಬೇಕು ಎಂದು ಹೇಳಿದರು.
ಇದು ಮತದಾರರ ಕರ್ತವ್ಯವಾಗಿದೆ. ಈ ಅರ್ಜಿ ಸಲ್ಲಿಕೆ ಮಾಡದಿದ್ದರೆ, ಮತದಾನದ ಹಕ್ಕು ಕಳೆದುಕೊಳ್ಳುತ್ತೀರಿ. ಆಗಸ್ಟ್ 5ರಂದು ಕರಡು ಮತಪಟ್ಟಿ ಪ್ರಕಟಿಸಲಾಗುವುದು. ಬಿಎಲ್ಓಗಳು ಮೂರು ಬಾರಿ ನಿಮ್ಮ ಮನೆಗೆ ಬಂದು ಅರ್ಜಿ ನೀಡುತ್ತಾರೆ. ನೀವು ಅರ್ಜಿ ಸ್ವೀಕರಿಸಿ ಸಲ್ಲಿಸದಿದ್ದರೆ ಹಕ್ಕು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು.
'ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳು ಕೂಡ ನಿಮಗೆ ಈ ಅರ್ಜಿ ಸಲ್ಲಿಕೆಯಲ್ಲಿ ನೆರವು ನೀಡಬಹುದು. ಸರ್ಕಾರ ಈಗಾಗಲೇ 5.50 ಕೋಟಿ ಜನರಿಗೆ ಈಗಾಗಲೇ ಜಾತಿ ಪ್ರಮಾಣಪತ್ರ ಅಧಿಕೃತವಾಗಿ ನೀಡಿರುವ ದಾಖಲೆ ನಮ್ಮ ಬಳಿ ಇದೆ. ಇದರಲ್ಲಿ 2,54,95,767 ಹಿಂದುಳಿದ ವರ್ಗದ ಪ್ರಮಾಣಪತ್ರ, 2,94,51,027 ಎಸ್ಸಿ ಹಾಗೂ ಎಸ್ಟಿ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ. ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ,' ಎಂದು ವಿವರಿಸಿದರು.
'ನಿಮ್ಮ ಎಪಿಕ್ ಕಾರ್ಡ್ ಸಂಖ್ಯೆ ಬಳಸಿ ಮಾಹಿತಿ ನೀಡಬಹುದು. ಈ ಸಂದರ್ಭದಲ್ಲಿ ಜನರು 11 ಮಾದರಿಯ ದಾಖಲೆಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ಜನನ ಪ್ರಮಾಣಪತ್ರ, ಪಾಸ್ ಪೋರ್ಟ್, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕು ಪತ್ರ, ಸರ್ಕಾರದಿಂದ ವಸತಿ ಅಥವಾ ನಿವೇಶನ ಪಡೆದಿರುವ ದಾಖಲೆ, ಕೇಂದ್ರ ಸರ್ಕಾರದ ಪಿಂಚಣಿ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಸಲ್ಲಿಕೆ ಮಾಡಬಹುದು,' ಎಂದು ಮಾಹಿತಿ ನೀಡಿದರು.
49,320 ಸಹಾಯ ಕೇಂದ್ರಗಳ ಸ್ಥಾಪನೆ
'ಸಾರ್ವಜನಿಕರಿಗೆ ಕಂದಾಯ ಇಲಾಖೆ ವತಿಯಿಂದ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ಗಳಲ್ಲಿ, ಸಹಾಯ ಕೇಂದ್ರ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಗತ್ಯ ದಾಖಲೆ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಯಾರೆಲ್ಲಾ ಜಾತಿ ಪ್ರಮಾಣಪತ್ರದಲ್ಲಿ ದೂರವಾಣಿ ಸಂಖ್ಯೆ ಸರಿಯಾಗಿ ನೀಡಿದ್ದೀರಿ ಅವರು ವಾಟ್ಸಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು,' ಎಂದು ವಿವರಿಸಿದರು.
'5.50 ಕೋಟಿ ಜನರಿಗೆ ಮನೆ ಮನೆಗೆ ಹೋಗಿ ಸಹಾಯ ಮಾಡಲು ಸರ್ಕಾರ ತೀರ್ಮಾನಿಸಿದೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ರಕ್ಷಿಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಚುನಾವಣಾ ಆಯೋಗ ಈ ಬಗ್ಗೆ ಜಾಹೀರಾತು ನೀಡುತ್ತಿದೆ. ಸರ್ಕಾರ ಕೂಡ ಜನರಿಗೆ ಅಗತ್ಯ ಮಾಹಿತಿ ನೀಡಲು ತೀರ್ಮಾನಿಸಿದೆ,' ಎಂದು ಹೇಳಿದರು.












Click it and Unblock the Notifications