ಶ್ರೀರಾಮುಲು ಬಿಜೆಪಿಗೆ ಮರಳುವುದು ಎಲ್ಲಿಗೆ ಬಂತು?

ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿಗೆ ವಾಪಸಾಗುವ ಬಗ್ಗೆ ಬಿಎಸ್ಸಾರ್ ಕಾಂಗ್ರೆಸ್ಸಿನ ಸಂಸ್ಥಾಪಕ ಶ್ರೀರಾಮುಲು ಉತ್ಸುಕರಾಗಿದ್ದು, ತತ್ಸಂಬಂಧ ಬಿಜೆಪಿ ವರಿಷ್ಠರ ಜತೆ ದೆಹಲಿಗೆ ತೆರಳಿದ್ದಾರೆ.
ಈ ಮಧ್ಯೆ, ಸುಪ್ರೀಂಕೋರ್ಟ್ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಜನಾರ್ದನ ರೆಡ್ಡಿ ಚುನಾವಣೆ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಶ್ರೀರಾಮುಲು ಅವರಲ್ಲಿ ಉತ್ಸಾಹ ಪುಟಿದೆದ್ದಿದೆ. ಹಾಗಾಗಿ ಚುನಾವಣಾ ತಾಲೀಮು ಜೋರಾಗಿಯೇ ನಡೆಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರೂ ಸಹ ರಾಮುಲು ಅವರನ್ನು ಪಕ್ಷದ ತೆಕ್ಕೆಗೆ ಸೆಳೆದುಕೊಳ್ಳಲು ಉತ್ಸುಕರಾಗಿರುವುದು ವಾಸ್ತವ. ಆದರೆ ಒಂದು ಕಾಲದಲ್ಲಿ ರೆಡ್ಡಿ ಬ್ರದರ್ಸ್ ಪಾಲಿನ ಅಮ್ಮ ಸುಷ್ಮಾ ಸ್ವರಾಜ್ ತೊಡರುಗಾಲು ಹಾಕಿದ್ದಾರೆ ಎನ್ನಲಾಗಿದೆ.
ಇದನ್ನು ಅರಿತ ರಾಮುಲು ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಹೇಗಾದರೂ ಮಾಡಿ ಸುಷ್ಮಾರ ಮನವೊಲಿಸಿ ಎಂದು ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.
ರಾಮುಲು- ಗಡ್ಕರಿ ಭೇಟಿಯನ್ನು ಖಚಿತಪಡಿಸಿರುವ ಪಕ್ಷದ ಹಿರಿಯ ನಾಯಕರೊಬ್ಬರು ಬಿಎಸ್ಸಾರ್ ಕಾಂಗ್ರೆಸ್ ಮತ್ತು ಬಿಜೆಪಿ ವಿಲೀನದ ಜವಾಬ್ದಾರಿಯನ್ನು ಗಡ್ಕರಿ ಅವರಿಗೆ ವಹಿಸಲಾಗಿದೆ. ರಾಮುಲು ಶೀಘ್ರವೇ ಬಿಜೆಪಿಗೆ ಮರಳುವುದು ಖಚಿತ ಎಂದು ತಿಳಿಸಿದ್ದಾರೆ.












Click it and Unblock the Notifications