ಪ್ರತಿಪಕ್ಷ ನಾಯಕರಾಗಿ ಎಚ್ಡಿಕೆಯೇ ಮುಂದುವರಿಯಲಿದ್ದಾರೆ?

ಆದರೆ ಜೆಡಿಎಸ್ ಹಿರಿಯ ನಾಯಕ ಎಚ್ ಡಿ ಕುಮಾರಸ್ವಾಮಿಗೆ ಅಂತಹ ಸಾಧ್ಯತೆ ಎದುರಾಗುವುದಿಲ್ಲ. ಅವರು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.
ಹಾಗಾದರೆ ಏನಿದು ಚಮತ್ಕಾರ? ಎಂದು ನೋಡಿದಾಗ ಬಿಜೆಪಿಗೆ ಪ್ರತಿಯಾಗಿ ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತೀಕ್ಷ್ಣವಾದ ರಾಜಕೀಯ ದಾಳ ಉರುಳಿಸಲು ಮುಂದಾಗಿರುವುದು ಗೋಚರವಾಗುತ್ತದೆ.
ಬಿಜೆಪಿಗೆ ಮುಖಭಂಗವಾಗಲಿದೆ:
ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿಯನ್ನು ವಿಲೀನಗೊಳಿಸುವ ಮೂಲಕ ವಿಧಾನಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ಸ್ಥಾನದ ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ಪ್ರತಿಯಾಗಿ ದೇವೇಗೌಡರು ಮತ್ತೊಂದು ರಾಜಕೀಯ ದಾಳ ಉರುಳಿಸಲು ಸಜ್ಜಾಗಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದುರುಳಿಸುವ ದೇವೇಗೌಡರ ಈ ದಾಳ ಯಶಸ್ವಿಯಾದರೆ ವಿಧಾನಸಭೆಯಲ್ಲಿ ಅಧಿಕೃತವಾಗಿ ವಿರೋಧ ಪಕ್ಷ ಸ್ಥಾನ ಪಡೆದುಕೊಳ್ಳುವ ಬಿಜೆಪಿಯ ಕನಸು ನುಚ್ಚು ನೂರಾಗಲಿದೆ.
ದೇವೇಗೌಡರ ಈ ಆಟವೂ ಬಹುತೇಕ ಬಿಜೆಪಿ ಆಟದ ಮಾದರಿಯಲ್ಲೇ ಇದೆ. ಇಲ್ಲಿ ದೇವೇಗೌಡರು ಬಿಜೆಪಿಯ ಮಾಜಿ ಸಚಿವ ಬಿ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಪಕ್ಷದಲ್ಲಿ ವಿಲೀನಗೊಳಿಸುವ ಆಟ ನಡೆಯಲಿದೆ. ಅಂದರೆ, ರಾಮುಲು ಸೇರಿದಂತೆ ಬಿಎಸ್ಆರ್ ಕಾಂಗ್ರೆಸ್ಸಿನ 4 ಶಾಸಕರು ಜೆಡಿಎಸ್ ಶಾಸಕಾಂಗ ಪಕ್ಷದ ಸದಸ್ಯರಾಗುವುದು. ಆಗ, ಮತ್ತೂಮ್ಮೆ ಸ್ಥಾನಗಳ ಬಲಾಬಲ ತಲಾ 44ಕ್ಕೆ ಬಂದರೂ ಮತ ಗಳಿಕೆ ಪ್ರಮಾಣದಲ್ಲಿ ಜೆಡಿಎಸ್ ಮೊದಲ ಸ್ಥಾನದಲ್ಲಿ ನಿಲ್ಲುವುದರಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ. ಏಕೆಂದರೆ ಕೆಜೆಪಿಯ ನಾಲ್ವರು ಶಾಸಕರಗಿಂತ ಬಿಎಸ್ಆರ್ ಕಾಂಗ್ರೆಸ್ಸಿನ 4 ಶಾಸಕರು ಗಳಿಸಿರುವ ಮತ ಪ್ರಮಾಣ ಅಧಿಕವಾಗಿದೆ. ಇದು ಲೆಕ್ಕಾಚಾರ.
ಇದಕ್ಕೆ ಸಂಬಂಧಿಸಿದಂತೆ ದೇವೇಗೌಡರು ಇತ್ತೀಚೆಗೆ ಶ್ರೀರಾಮುಲು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆಸಿಕೊಂಡು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ತಮ್ಮ ಪ್ರಸ್ತಾವನೆಯನ್ನೂ ಮುಂದಿಟ್ಟಿದ್ದಾರೆ. ಕುಮಾರಸ್ವಾಮಿ ಅವರೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಶ್ರೀರಾಮುಲುಗೆ ಏನು?
ಅಧಿಕೃತವಾಗಿ ಪ್ರತಿಪಕ್ಷದ ಸ್ಥಾನ ಜೆಡಿಎಸ್ ನಲ್ಲೇ ಉಳಿದುಕೊಂಡಲ್ಲಿ ಶ್ರೀರಾಮುಲುಗೆ ಉಪನಾಯಕನ ಸ್ಥಾನ ನೀಡುವುದು. ಮುಂದೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಚುನಾವಣೆಯ ಜವಾಬ್ದಾರಿ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್. ಗೆದ್ದರೆ ನಂತರ ಎದುರಾಗುವ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಹೇಳಿದವರಿಗೆ ಟಿಕೆಟ್ ಹೀಗೆ ಸಾಗುತ್ತದೆ ದೇವೇಗೌಡರು ರುಷುವತ್ತುಗಳು.
ಜೆಡಿಎಸ್ ನಾಯಕರ ಈ ಪ್ರಸ್ತಾವನೆಗೆ ಶ್ರೀರಾಮುಲು ಇನ್ನೂ ಹಸಿರು ನಿಶಾನೆ ತೋರಿಲ್ಲ. ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ. ಜೈಲಿನಲ್ಲಿರುವ ತಮ್ಮ ಆಪ್ತಮಿತ್ರ ಗಾಲಿ ಜನಾರ್ದನರೆಡ್ಡಿ ಅವರೊಂದಿಗೆ ಕಳೆದ 2-3 ದಿನಗಳಿಂದ ನಿರಂತರ ಮಾತುಕತೆ ನಡೆಸಿದ್ದಾರೆ ಎಂದು ಉದಯವಾಣಿ ವರದಿ ಮಾಡಿದೆ.
ಅದ್ಸರಿ ಇದೆಲ್ಲಾ ಯಾವಾಗ?: ಇದೇ ಫೆಬ್ರವರಿ ಎರಡನೇ ವಾರದಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಅಷ್ಟರಲ್ಲಿ ಶ್ರೀರಾಮುಲು ತಮ್ಮ ನಿರ್ಧಾರ ಪ್ರಕಟಿಸಿದರೆ ಆ ಸಮಾವೇಶದಲ್ಲೇ JDS-BSR Congress ವಿಲೀನಕ್ಕೆ ಅಧಿಕೃತ ಮೊಹರು ಬೀಳಲಿದೆ.












Click it and Unblock the Notifications