ಯಾರ ಜತೆಯೂ ಸೇರೋಲ್ಲ; ಸ್ವತಂತ್ರ ಸ್ಪರ್ಧೆ- ರಾಮುಲು

ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿಗೆ ವಾಪಸಾಗಲು ಶ್ರೀರಾಮುಲು ಉತ್ಸುಕರಾಗಿದ್ದರೂ ಒಂದು ಕಾಲದಲ್ಲಿ ತಮ್ಮ ಪಾಲಿನ ಅಮ್ಮ ಆಗಿದ್ದ ಸುಷ್ಮಾ ಸ್ವರಾಜ್ ತೊಡರುಗಾಲು ಹಾಕಿದ್ದಕ್ಕೆ ಅನಿವಾರ್ಯವಾಗಿ ಬಿಜೆಪಿಯಿಂದ ವಿಮುಖರಾಗಬೇಕಾಯಿತು.
ಅದಾದ ನಂತರ ಕಾಂಗ್ರೆಸ್ ಕೋಟೆ ಪ್ರವೇಶಿಸುವ ಸಾಹಸ ಮಾಡಿದರು. ಆದರೆ ಅದಕ್ಕೆ ತವರಿನಲ್ಲೇ ವಿರೋಧ ವ್ಯಕ್ತವಾದ್ದರಿಂದ ಆ ಆಸೆಯೂ ಕೈಗೂಡಲಿಲ್ಲ.
ವಿಲೀನವೂ ಇಲ್ಲ, ಸೇರ್ಪಡೆಯೂ ಇಲ್ಲ; ಸರ್ವಸ್ವತಂತ್ರ:
ಆದರೆ ಲೋಕಸಭಾ ಚುನಾವಣೆ ಎದುರಿಗೇ ಇರುವಾಗ ರಾಜಕೀಯವಾಗಿ ತಮ್ಮ ಅಸ್ತಿತ್ವವವನ್ನು ಎತ್ತಿಹಿಡಿಯುವುದು ರಾಮುಲಗೆ ಅನಿವಾರ್ಯವಾಗಿದೆ. ಜತೆಗೆ ಅದಕ್ಕೆ ಅಗತ್ಯವಾಗಿ ಅಂತಃಸತ್ವವೂ ಇದೆ. ಹಾಗಾಗಿ ಅದನ್ನು ಬಂಡವಾಳ ಮಾಡಿಕೊಳ್ಳಲು ನಿರ್ಧರಿಸಿರುವ ಶ್ರೀರಾಮುಲು ಅವರು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ರಾಯಚೂರಿನಿಂದ ಸ್ವತಂತ್ರವಾಗಿ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಕುರಿತಂತೆ ಪಕ್ಷದ ಶಾಸಕರ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ, ಮುಖಂಡರ ಜತೆ ಚರ್ಚಿಸಿದ ನಂತರವಷ್ಟೇ ಬಳ್ಳಾರಿಯಿಂದ ತಾವು ಸ್ಪರ್ಧಿಸಬೇಕೋ, ಬೇಡವೂ ಎಂಬುದನ್ನು ತೀರ್ಮಾನಿಸುವುದಾಗಿಯೂ ಅವರು ಸ್ಪಷ್ಪಡಿಸಿದರು.












Click it and Unblock the Notifications