ಡೀಸೆಲ್, ಸೀಮೆಎಣ್ಣೆ ಬೆಲೆ ಏರಿಕೆ ಶಾಕ್ !
ಡೀಸೆಲ್ ಬೆಲೆಯನ್ನು ಲೀಟರ್ ಗೆ 10 ರು.ಗಳಷ್ಟು ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಮುಂದಿನ 10 ತಿಂಗಳಲ್ಲಿ ನೂತನ ದರ ಜಾರಿಗೆ ಬರಲಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರ ಲೀಟರ್ ಗೆ 5 ರು ನಷ್ಟು ಡೀಸೆಲ್ ಬೆಲೆ ಏರಿಕೆ ಮಾಡಿತ್ತು.
ನಂತರ ಡೀಸೆಲ್ ಬೆಲೆಯನ್ನು ಲೀಟರಿಗೆ 4 ರು. ಮತ್ತು 14.2 ಕಿ.ಗ್ರಾಂ. ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರು.ನಷ್ಟು ಏರಿಸಬೇಕೆಂದು ಶಿಫಾರಸು ಮಾಡಲಾಗಿತ್ತು.
2013ರಲ್ಲಿ ಆರ್ಥಿಕ ಸುಧಾರಣೆ ಕಾರಣ ಹೇಳಿ ಡೀಸೆಲ್ ಮೇಲಿನ ರಿಯಾಯಿತಿ ಮೊಟಕುಗೊಳಿಸಲು ಯುಪಿಎ ಸರ್ಕಾರ ಮುಂದಾಗಿದೆ.
12ನೇ ಪಂಚವಾರ್ಷಿಕ ಯೋಜನೆಯಲ್ಲಿ ದೇಶದ ಆರ್ಥಿಕಾಭಿವೃದ್ಧಿಯನ್ನು ಶೇ8ಕ್ಕೆ ಏರಿಸುವ ಗುರಿ ಹೊಂದಲಾಗಿದೆ.
ಈ ಹಿನ್ನೆಲೆಯಲ್ಲಿ ಇಂಥ ತೀರ್ಮಾನಗಳು ಕಠಿಣವಾದರೂ ಅನಿವಾರ್ಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಮಾವೇಶದಲ್ಲಿ ಹೇಳಿದ್ದಾರೆ.
ಪ್ರತಿ ಲೀಟರ್ ಡೀಸೆಲ್ ಮೇಲೆ ಕೇಂದ್ರ ಸರ್ಕಾರ 14 ರು ರಿಯಾಯಿತಿ ನೀಡುತ್ತಿದೆ. ಇದು ವಾರ್ಷಿಕ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ.
ಜಿಡಿಪಿ ಗುರಿ ಸಾಧನೆಗಾಗಿ ಡೀಸೆಲ್ ಹಾಗೂ ಸೀಮೆಎಣ್ಣೆ ಬೆಲೆ ಏರಿಕೆ ಅನಿವಾರ್ಯ ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ.
ಈ ಬೆಲೆ ಏರಿಕೆ ಮೂಲಕ ಸರ್ಕಾರ ಸುಮಾರು 1,60,000 ಕೋಟಿ ರು ನಷ್ಟವನ್ನು ಸರಿದೂಗಿಸಲು ಯೋಜಿಸಿದೆ. ಡೀಸೆಲ್, ಎಲ್ ಪಿಜಿ ಹಾಗೂ ಸೀಮೆಎಣ್ಣೆಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ಸರ್ಕಾರ ಭಾರಿ ನಷ್ಟ ಅನುಭವಿಸುತ್ತಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ 47.15 ರು ನಷ್ಟಿದ್ದರೆ, ಬೆಂಗಳೂರಿನಲ್ಲಿ 51.95 ರು ನಷ್ಟಿದೆ. ಸೆಪ್ಟೆಂಬರ್ 14 ರಲ್ಲಿ ಡೀಸೆಲ್ ದರದಲ್ಲಿ 5.63 ರು ನಷ್ಟು ಏರಿಕೆಯಾಗಿತ್ತು. ಸೀಮೆಎಣ್ಣೆ ಪ್ರತಿ ಲೀಟರ್ ಗೆ 14.79 ರಷ್ಟಿದೆ.
ಭಾರತ ಎದುರಿಸುತ್ತಿರುವ ವಿತ್ತೀಯ ಕೊರೆಯನ್ನು ನೀಗಿಸಿಕೊಳ್ಳಲು ಇಂಥ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗಲೇಬೇಕಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಅಮೂಲಾಗ್ರವಾಗಿ ಮೇಲೆತ್ತಲು ತ್ವರಿತ ಸುಧಾರಣೆಗೆ ಕೇಂದ್ರ ಕೈಹಾಕಬೇಕು. ಇಲ್ಲದಿದ್ದರೆ, ಮುಂದೆ ಭಾರೀ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ಎಂದು ತಜ್ಞರ ಸಮಿತಿ ಕಳೆದ ಸೆಪ್ಟೆಂಬರ್ ನಲ್ಲಿ ಮುನ್ನೆಚ್ಚರಿಕೆ ನೀಡಿತ್ತು.
ಕಡಿಮೆ ದರದಲ್ಲಿ ಇಂಧನ ಮಾರಾಟ ಮಾಡಿದ್ದರಿಂದ ಭಾರತ್ ಪೆಟ್ರೋಲಿಯಂ ಕಾರ್ಪ್, ಇಂಡಿಯನ್ ಆಯಿಲ್ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಕಂಪನಿಗಳನ್ನು ಒಟ್ಟುಗೂಡಿಸಿದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 85,586 ಕೋಟಿ ರು ನಷ್ಟ ಅನುಭವಿಸಿದೆ. (ಪಿಟಿಐ)