ಏನ್ರಿ ಕಾಗೇರಿ, ಮಕ್ಕಳಾಯ್ತು, ಈಗ ಶಿಕ್ಷಕರಿಲ್ಲ ಅಂತೀರಾ?
ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಏಕೆ ಆಗಿಲ್ಲ ಎಂದು ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ ಅವರು ಪ್ರಶ್ನಿಸಿದರು. ಎರಡು ವರ್ಷದಿಂದ ಶಿಕ್ಷಕರ ನೇಮಕಾತಿ ಆಗಿಲ್ಲ ಎಂಬುದನ್ನು ಒಪ್ಪಿಕೊಂಡ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಹುದ್ದೆಗಳನ್ನು ಭರ್ತಿ ಮಾಡಲು ತಾಂತ್ರಿಕ ದೋಷ ಎದುರಾಗಿದೆ ಎಂದು ಸಬೂಬು ಹೇಳಿದು.
ಈ ಸಮಯದಲ್ಲಿ ಎದ್ದು ನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಒಂದು ಕಡೆ ಮಕ್ಕಳ ಕೊರತೆ ಎಂದು ಶಾಲೆ ಮುಚ್ಚುತ್ತೀರಾ, ಇನ್ನೊಂದೆಡೆ ಶಿಕ್ಷಕರ ಕೊರತೆ ಎಂದು ಹೇಳುತ್ತೀರಾ ನಿಮ್ಮ ಉದ್ದೇಶವೇನು? ಸರ್ಕಾರಿ ಶಾಲೆಗಳನ್ನು ಸಂಪೂರ್ಣ ಬಂದ್ ಮಾಡಲು ಯೋಜನೆ ಹಾಕಿಕೊಂಡಿದ್ದೀರಾ, ಹೇಗೆ? ಎಂದು ಪ್ರಶ್ನಿಸಿದರು.
ಮಾತು ಮುಂದುವರೆಸಿ, ನಾನು ಉಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಹಳ್ಳಿಗೊಂದು ಶಾಲಾ ಕಟ್ಟಡ, ಶಾಲೆಗೊಬ್ಬ ಶಿಕ್ಷಕ ನೀತಿಯನ್ನು ಕಡ್ಡಾಯಗೊಳಿಸಿದ್ದೆ. ಆದರೆ, ಈಗ ಕೊರತೆ ನೆಪವೊಡ್ಡಿ ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಹುನ್ನಾರ ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಈ ಸಮಯದಲ್ಲಿ ಬಿಜೆಪಿ ಶಾಸಕರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ಹೆಚ್ಚಾಯಿತು. ಸದನದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಹೆಚ್ಚಿನ ಅವಕಾಶ ನೀಡುವುದಾಗಿ ಸಭಾಪತಿ ಬೋಪಯ್ಯ ಅವರು ಹೇಳಿದ ನಂತರ ಶಾಸಕರು ತಣ್ಣಗಾದರು.