ಹೂಮಳೆ..ಡೊಳ್ಳು ಕುಣಿತ..ಬೆಳ್ಳಿ ರಥದ ಮೆರವಣೆಗೆ: ಸರ್ಕಾರಿ ಶಾಲೆ ಶಿಕ್ಷಕಿಗೆ ಅದ್ಧೂರಿ ಬೀಳ್ಕೊಡುಗೆ
ಬಳ್ಳಾರಿ, ಆಗಸ್ಟ್ 19: ಇತ್ತೀಚಿನ ದಿನಗಳಲ್ಲಿ ಶಾಲಾ ಶಿಕ್ಷಕರನ್ನು ಬೀಳ್ಕೊಡಲು ಮಕ್ಕಳು ಹಿಂದೇಟು ಹಾಕಿ ಅತ್ತು ಕಳುಹಿಸುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಆದರೆ ಈ ಸರ್ಕಾರಿ ಶಾಲೆಯ ಶಿಕ್ಷಕಿಗೆ ಸಿಕ್ಕ ಅದ್ಧೂರಿ ಬೀಳ್ಕೊಡಿಗೆ ಈವರೆಗೂ ಯಾವುದೇ ಅಧಿಕಾರಿಗೆ ಸಿಕ್ಕಿರಲಿಲ್ಲ ಎನ್ನಬಹುದಾಗಿದೆ.ಅಷ್ಟರಮಟ್ಟಿಗೆ ಶಿಕ್ಷಕಿಯನ್ನು ಗೌರವಪೂರ್ಣವಾಗಿ ಶಾಲೆಯಿಂದ ಬೀಳ್ಕೊಡಲಾಗಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುರುವಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಸರ್ಕಾರಿ ಶಾಲೆಯ ಶಿಕ್ಷಕಿ ಜ್ಯೋತಿ ಎನ್ನುವವರು ಇತ್ತೀಚಿಗೆ ಬೇರೆ ಶಾಲೆಗೆ ವರ್ಗಾವಣೆ ಆಗಿದ್ದಾರೆ. ಜ್ಯೋತಿ ಕಳೆದ ಹದಿನೈದು ವರ್ಷದಿಂದ ಕುರುವಳ್ಳಿ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಜ್ಯೋತಿ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಬರೀ ಶಿಕ್ಷಕಿಯಾಗಿರದೇ ಮಕ್ಕಳಿಗೆ ಗೆಳತಿಯಾಗಿ, ಮಾರ್ಗದರ್ಶಕಿಯಾಗಿ ಮಕ್ಕಳೊಂದಿದೆ, ಮಕ್ಕಳಾಗಿ ಬೆರೆಯುತ್ತಿದ್ದರು. ಹೀಗಾಗಿ ಜ್ಯೋತಿ ಟೀಚರ್ ಮಕ್ಕಳಿಗೆ ಅಚ್ಚುಮೆಚ್ಚು.

ಆದರೆ ಈಗ ಜ್ಯೋತಿ ಟೀಚರ್ ಬೇರೆ ಶಾಲೆಗೆ ವರ್ಗಾವಣೆಯಾಗಿರುವುದಕ್ಕೆ ಮಕ್ಕಳು ಕಣ್ಣೀರಿಟ್ಟಿದ್ದಾರೆ. ಕುರುವಳ್ಳಿ ಗ್ರಾಮಸ್ಥರು ಸಹ ಜ್ಯೋತಿ ಅವರ ಮೇಲೆ ಅಪಾರ ಅಭಿಮಾನ ಹೊಂದಿದ್ದರು. ಹೀಗಾಗಿ ಜ್ಯೋತಿ ಅವರ ಬೀಳ್ಕೊಡಿಗೆ ಸಮಾರಂಭದ ದಿನ ಶಿಕ್ಷಕಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಜೊತೆಗೆ ಮಹಿಳೆಯರು ಹಾಗೂ ಮಕ್ಕಳಿಂದ ಪೂರ್ಣ ಕುಂಭ ಹೊತ್ತು ಗೌರವಪೂರ್ಣ ಬೀಳ್ಕೊಡಿಗೆ ನೀಡಿದ್ದಾರೆ. ಅಲ್ಲದೆ ದಾರಿಯುದಕ್ಕೂ ಡೊಳ್ಳು ಕುಣಿತ, ಹೂಮಳೆಗೈದಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳ ಪ್ರೀತಿ ಹಾಗೂ ಕುರುವಳ್ಳಿ ಗ್ರಾಮಸ್ಥರ ತಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಜ್ಯೋತಿ ಭಾವುಕರಾಗಿದ್ದಾರೆ. ಕಳೆದ ಹದಿನೈದು ವರ್ಷದಲ್ಲಿ ಶಿಕ್ಷಕಿ ಜ್ಯೋತಿ ಮಕ್ಕಳ ಪ್ರೀತಿಯ ಜೊತೆಗೆ ಗ್ರಾಮಸ್ಥರ ಪ್ರೀತಿ ಸಹ ಗಳಿಸಿದ್ದು, ಭಾರದ ಮನಸ್ಸಿನಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಜ್ಯೋತಿ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಈ ಭಾವುಕ ಕ್ಷಣಕ್ಕೆ ಕುರುವಳ್ಳಿ ಗ್ರಾಮ ಸಾಕ್ಷಿಯಾಗಿದೆ.












Click it and Unblock the Notifications