ಕನಕಗಿರಿ ಕ್ಷೇತ್ರ ಪರಿಚಯ: ಹ್ಯಾಟ್ರಿಕ್ ಗೆಲುವು ಕಾಣ್ತಾರಾ ತಂಗಡಗಿ?
ಕನಕಗಿರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಒಂದು ಪಟ್ಟಣವಾಗಿದೆ. ಕನಕಗಿರಿ ಅಂದರೆ ದೇವಾಲಯಗಳ ತವರೂರು. ಕಣ್ಣಿದ್ದವರಿಗೆ ಕನಕಗಿರಿ-ಕಾಲಿದ್ದವರಿಗೆ ಹಂಪಿ ಎಂಬ ನಾಣ್ಣುಡಿ ಇದೆ. ಕನಕಗಿರಿಯಲ್ಲಿ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನ, ನರಸಿಂಹಸ್ವಾಮಿ ದೇವಸ್ಥಾನ, ವೆಂಕಟಪ್ಪನ ಬಾವಿಗಳಿದ್ದು, ಈ ಎಲ್ಲಾ ದೇವಾಲಯಗಳಲ್ಲಿನ ಶಿಲ್ಪಕಲೆ, ಚಿತ್ರಕಲೆಯನ್ನು ಆಧರಿಸಿಯೇ ಈ ನಾಣ್ಣುಡಿ ಹುಟ್ಟಿಕೊಂಡಿದೆ.
ಕನಕಗಿರಿ ಗಂಗಾವತಿಯಿಂದ 21 ಕಿಲೋಮೀಟರ್, ಕೊಪ್ಪಳದಿಂದ 40 ಕಿ.ಮೀ ಮತ್ತು ಹಂಪೆಯಿಂದ 30 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಹಂಪೆಗೆ ಬರುವ ಹೆಚ್ಚಿನ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡಿ ಶ್ರೀಕನಕಾಚಲಪತಿ ದರ್ಶನ ಪಡೆಯುತ್ತಾರೆ.
ಕ್ಷೇತ್ರ ಪರಿಚಯ:ಗಂಗಾವತಿಯಲ್ಲಿ ಅನ್ಸಾರಿ ಓಟಕ್ಕೆ ಬ್ರೇಕ್ ಹಾಕುವವರಾರು?
ಕನಕಗಿರಿಯ ರಾಜಕೀಯ ಇತಿಹಾಸಕ್ಕೆ ಮರಳುವುದಾದರೆ ಇಲ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರಬಲವಾಗಿತ್ತು. ಆದರೆ ಮುಂದೆ ಕಾಂಗ್ರೆಸ್ ಕೋಟೆ ಒಡೆದು ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಇದೀಗ ಮತ್ತೆ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು ಶಿವರಾಜ್ ತಂಗಡಗಿ ಇಲ್ಲಿನ ಶಾಸಕರಾಗಿದ್ದಾರೆ.
1983 ಮತ್ತು 85ರಲ್ಲಿ ಇಲ್ಲಿ ಶ್ರೀರಂಗದೇವರಾಯಲು ಎಂಬವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು. ಮುಂದೆ ಅವರು ಗಂಗಾವತಿಗೆ ವಲಸೆ ಹೋಗಿದ್ದರು. ನಂತರ ಇಲ್ಲಿ 1989 ಮತ್ತು 1999ರಲ್ಲಿ ಕಾಂಗ್ರೆಸ್ ನ ಎಂ. ಮಲ್ಲಿಕಾರ್ಜುನ ಜಯಗಳಿಸಿದರು. 1994ರಲ್ಲಿ ಮಾತ್ರ ಕ್ಷೇತ್ರದಲ್ಲಿ ಜೆಡಿಎಸ್ ನ ನಾಗಪ್ಪ ಸಲೋನಿ ಜಯಗಳಿಸಿದ್ದರು.
2004ರಲ್ಲಿ ಇಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಬಿಜೆಪಿಯ ವೀರಪ್ಪ ದೇವಪ್ಪ ಕೆಸರಹಟ್ಟಿ ಇಲ್ಲಿ ಜಯಗಳಿಸಿದರು. ಇಲ್ಲಿಯವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಕನಕಗಿರಿ 2008ರ ಹೊತ್ತಿಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಆಗ ಇಲ್ಲಿ ಕಣಕ್ಕಿಳಿದವರು ಶಿವರಾಜ ತಂಗಡಗಿ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
2008ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದ ಶಿವರಾಜ ತಂಗಡಗಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಯಡಿಯೂರಪ್ಪ ಸರಕಾರಕ್ಕೆ ಮೂವರು ಶಾಸಕರ ಕೊರತೆಯಾದಾಗ ಶಿವರಾಜ ತಂಗಡಗಿ ಬೆಂಬಲ ಸೂಚಿಸಿ ಸಚಿವರೂ ಆದರು.
2013ರ ಚುನಾವಣೆ ವೇಳೆ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಈ ಚುನಾವಣೆಯಲ್ಲಿ ಅವರು 49,451 ಮತಗಳನ್ನು ಪಡೆದು ಕೆಜೆಪಿ ಅಭ್ಯರ್ಥಿಯನ್ನು 5 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಬರೋಬ್ಬರಿ 28 ಸಾವಿರ ಮತಗಳಿಸಿತ್ತು. ಜತೆಗೆ ಬಿಜೆಪಿಗೂ ಮೂರು ಸಾವಿರ ಮತಗಳು ಬಿದ್ದಿದ್ದವು.
ಈ ಬಾರಿ ಕೆಜೆಪಿ ಮತ್ತು ಬಿಎಸ್ಆರ್ ಬಿಜೆಪಿಯಲ್ಲಿ ವಿಲೀನವಾಗಿರುವುದರಿಂದ ಜತೆಗೆ ಕ್ಷೇತ್ರದಲ್ಲಿ ಕಾಲೇಜು ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕಣದ ಬಗ್ಗೆ ಜನರಿಗೆ ಅಸಮಧಾನವಿರುವುದರಿಂದ ಶಿವರಾಜ್ ತಂಗಡಗಿಯವರ ಗೆಲುವಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಇಲ್ಲಿ ಬಿಜೆಪಿ ಈ ಬಾರಿ ಕಳೆದ ಬಾರಿಯ ಕೆಜೆಪಿ ಅಭ್ಯರ್ಥಿ ಬಸವರಾಜ್ ದಧೆಸಗುರು ಅವರಿಗೆ ಟಿಕೆಟ್ ನೀಡಿದೆ. ಇನ್ನು ಜೆಡಿಎಸ್ ಮಂಜುಳಾ ಡಿಎಂ ರವಿಯವರಿಗೆ ಟಿಕೆಟ್ ನೀಡಿದೆ. ಆದರೆ ಇಲ್ಲಿ ಜೆಡಿಎಸ್ ಗೆ ಯಾವುದೇ ನೆಲೆ ಇಲ್ಲ. ಬಿಜೆಪಿಯಿಂದ ಶಿವರಾಜ್ ತಂಗಡಗಿಯವರಿಗೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದ್ದು ಹೀಗಾಗಿ ಫಲಿತಾಂಶ ಊಹಿಸುವುದು ಕಷ್ಟ.