ಸೂರ್ಯಕುಮಾರ್ ಯಾದವ್ ಹಳೆಯ ಫೋಟೋ ವೈರಲ್: ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದ ಆ ಹುಡುಗ ಇಂದು ವಿಶ್ವಕಪ್ ವಿಜೇತ ನಾಯಕ!
Suryakumar Yadav: 2026ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಸಂಭ್ರಮದ ನಡುವೆ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ವೃತ್ತಿಜೀವನದ ಆರಂಭಿಕ ದಿನಗಳ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ವಿಶೇಷವಾಗಿ ಪೆಟ್ರೋಲ್ ಬಂಕ್ವೊಂದರ ಮುಂದೆ ನಿಂತಿರುವ ಅವರ ಹಳೆಯ ಫೋಟೋ ನೆಟ್ಟಿಗರ ಗಮನ ಸೆಳೆದಿದ್ದು, ಇದರ ಹಿಂದಿನ ಅಸಲಿ ಕಥೆಯನ್ನು ಸ್ವತಃ ಸೂರ್ಯಕುಮಾರ್ ಬಿಚ್ಚಿಟ್ಟಿದ್ದಾರೆ.
ವೈರಲ್ ಆಗಿರುವ ಪೆಟ್ರೋಲ್ ಬಂಕ್ ಫೋಟೋದ ಬಗ್ಗೆ ಸ್ಪಷ್ಟನೆ ನೀಡಿದ ಸೂರ್ಯಕುಮಾರ್, "ಅದು ನಾನು ಕ್ರಿಕೆಟ್ ಜೀವನ ಆರಂಭಿಸಿದ ಹೊಸತರಲ್ಲಿ, ಅಂದರೆ ಸುಮಾರು 2010 ಅಥವಾ 2011ರಲ್ಲಿ ತೆಗೆಸಿಕೊಂಡ ಫೋಟೋ. ನನ್ನ ಆಪ್ತ ಸ್ನೇಹಿತನೊಬ್ಬ ಪೆಟ್ರೋಲ್ ಬಂಕ್ ಉದ್ಘಾಟನೆ ಮಾಡಿದ್ದ. ಆ ಸಮಾರಂಭಕ್ಕೆ ನಾನು ಅತಿಥಿಯಾಗಿ ಹೋಗಿದ್ದಾಗ ತೆಗೆದ ಚಿತ್ರವದು," ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಭಾರತ ತಂಡ ಮುನ್ನಡೆಸಿದ ಸೂರ್ಯ
ಮತ್ತೊಂದು ವಿಶೇಷ ಅಂದ್ರೆ, 2013ರಲ್ಲಿ ಸೂರ್ಯಕುಮಾರ್ ಅವರು "ಅಹಮದಾಬಾದ್ ಕಾಲಿಂಗ್" ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದರು. ಕಾಕತಾಳೀಯ ಎಂಬಂತೆ, 13 ವರ್ಷಗಳ ನಂತರ ಅದೇ ಅಹಮದಾಬಾದ್ನ ಮೈದಾನದಲ್ಲಿ ಭಾರತ ತಂಡವನ್ನು ಮುನ್ನಡೆಸಿ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿದ್ದಾರೆ.
ಈ ಬಗ್ಗೆ ಭಾವುಕರಾಗಿ ಮಾತನಾಡಿದ ಅವರು, "ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ನನಗೆ ಕಳುಹಿಸಿದಾಗ ಅಚ್ಚರಿಯಾಯಿತು. 2013ರ ಆ ಪೋಸ್ಟ್ ಮತ್ತು ಇಂದಿನ ಯಶಸ್ಸನ್ನು ನೋಡಿದಾಗ ಜೀವನದ ಒಂದು ವೃತ್ತ ಪೂರ್ಣಗೊಂಡಂತೆ ಭಾಸವಾಗುತ್ತಿದೆ. ಇಲ್ಲಿಗೆ ತಲುಪಲು 15 ವರ್ಷಗಳ ಸುದೀರ್ಘ ಪಯಣ ಬೇಕಾಯಿತು. ಈ ಹಾದಿ ಅತ್ಯಂತ ಸುಂದರವಾಗಿತ್ತು," ಎಂದು ಹೇಳಿದ್ದಾರೆ.
Ahmedabad calling pic.twitter.com/5ClZlCVhcY
— Surya Kumar Yadav (@surya_14kumar) March 15, 2013
ವೈರಲ್ ಪೋಸ್ಟ್ ಬಗ್ಗೆ ಸೂರ್ಯ ಹೇಳಿದ್ದೇನು?
"ನನ್ನ ಹಳೆಯ ಫೋಟೋಗಳು ಟ್ರೆಂಡ್ ಆಗುತ್ತಿರುವುದು ಮೊದಲು ನನಗೆ ತಿಳಿದಿರಲಿಲ್ಲ. ತಂಡದ ಸದಸ್ಯರು ವಾಟ್ಸಾಪ್ ಮೂಲಕ ಕಳುಹಿಸಿದಾಗ ಹಳೆಯ ದಿನಗಳು ಕಣ್ಣಮುಂದೆ ಬಂದವು. ಹಂತ ಹಂತವಾಗಿ ಬೆಳೆದು ಬಂದ ಈ ಹಾದಿ ನನಗೆ ಹೆಮ್ಮೆ ತಂದಿದೆ," ಎಂದು ಹೇಳಿದರು. ಒಟ್ಟಿನಲ್ಲಿ ಹೇಳುವುದಾದ್ರೆ, ಸಾಮಾನ್ಯ ಹುಡುಗನೊಬ್ಬ ತನ್ನ ಕಠಿಣ ಪರಿಶ್ರಮದಿಂದ ಇಂದು ವಿಶ್ವದ ಶ್ರೇಷ್ಠ ಟಿ20 ಬ್ಯಾಟರ್ ಹಾಗೂ ವಿಶ್ವವಿಜೇತ ನಾಯಕನಾಗಿ ಬೆಳೆದಿರುವುದು ಕೋಟ್ಯಂತರ ಯುವಕರಿಗೆ ಸ್ಪೂರ್ತಿಯಾಗಿದೆ.












Click it and Unblock the Notifications