ಜಿ 20 ಶೃಂಗಸಭೆ: ಒತ್ತಡಕ್ಕೆ ಮಣಿದು ಕೃಷಿ ಸಹಾಯಧನ ನಿಲ್ಲಿಸಲ್ಲ: ಕೇಂದ್ರ ಕೃಷಿ ಸಚಿವರ ಸ್ಪಷ್ಟನೆ
ಜಿ20 ಶೃಂಗಸಭೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತಕ್ಕೆ ಒತ್ತಡ ತರುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೃಷಿ ಕುರಿತು, ಭಾರತದ ನಡೆ ಹೇಗಿರಲಿದೆ ಎಂದು ತಿಳಿಸಿದ್ದು, ಅದರ ಮಾಹಿತಿ ಇಲ್ಲಿದೆ.
ನವದೆಹಲಿ, ಜನವರಿ 30: ಭಾರತವು ಅಭಿವೃದ್ಧಿ ಶೀಲ ರಾಷ್ಟ್ರಗಳ ಒತ್ತಡಕ್ಕೆ ಮಣಿಯದೇ ದೇಶದ ಕೃಷಿಗೆ ಸಹಾಯಧನ ವಿತರಣೆ ಮುಂದುವರೆಸಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.
ಚಂಡೀಗಢದಲ್ಲಿ ಸೋಮವಾರ ಜಿ20ರ ಮೊದಲ ಅಂತಾರಾಷ್ಟ್ರೀಯ ಹಣಕಾಸು ಆರ್ಕಿಟೆಕ್ಚರ್ ವರ್ಕಿಂಗ್ ಗ್ರೂಪ್ ಸಭೆ ಉದ್ಘಾಟಿಸಿದರು. ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೃಷಿ ಉತ್ಪಾದನೆಗೆ ಸರ್ಕಾರ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವುದಾಗಲಿ, ದುರ್ಬಲಗೊಳಿಸುವುದಾಗಲಿ ಮಾಡುವುದಿಲ್ಲ. ಶೃಂಗ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತಕ್ಕೆ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಉತ್ತೇಜನವನ್ನು ಮುಂದುವರೆಸುವ ಶಕ್ತಿ ಇದೆ ಎಂದರು.
ಕೃಷಿ ಮೂಲಸೌಕರ್ಯಕ್ಕಾಗಿ ಎಐಎಫ್ನಿಂದ ₹ 30,000 ಕೋಟಿ ಕ್ರೂಢೀಕರಣ
ಕೃಷಿ ವಲಯಕ್ಕೆ ನೀಡುವ ಸಬ್ಸಿಡಿಗಳನ್ನು ಕೊನೆಗೊಳಿಸುವಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಜಿ20 ಶೃಂಗಸಭೆಯಲ್ಲಿ ಭಾರತಕ್ಕೆ ಒತ್ತಡ ನೀಡಿವೆ ಎನ್ನಲಾಗಿದೆ. ಆದರೆ ಕೇಂದ್ರವು ಇದಕ್ಕೆ ಮಣಿಯುವುದಿಲ್ಲ. ಬದಲಾಗಿ ಕೃಷಿಯ ಮೇಲೆ ಪರಿಣಾಮ ಬೀರುವ ಹವಾಮಾನ ಬದಲಾವಣೆಯ ಸಂಗತಿಗಳು, ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ, ದೇಶದ ಆರ್ಥಿಕತೆ ಬಲಪಡಿಸುವ ನಿಟ್ಟಿನಲ್ಲಿ ಅನೇಕ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುವುದು.
ಜಿ20ಸಭೆಯು ಪ್ರಪಂಚದ ಮೇಲೆ ಪರಿಣಾಮ ಬೀರುವ ವಿಷಯದ ಕುರಿತು ಚರ್ಚೆಗೆ ಸೂಕ್ತ ವೇದಿಕೆ ಆಗಿದೆ. ಭಾರತದ ಶಕ್ತಿ ಪ್ರದರ್ಶನಕ್ಕೆ ಜಿ20 ಅಧ್ಯಕ್ಷ ಸ್ಥಾನವು ದೇಶಕ್ಕೆ ಒಂದು ಅವಕಾಶ ಲಭಿಸಿದಂತಾಗಿದೆ. ಈ ಹಿಂದೆ ಜಾಗತಿಕ ಶೃಂಗಸಭೆಗಳು ನವದೆಹಲಿ, ಹೈದರಾಬಾದ್ ಇಲ್ಲವೇ ಬೆಂಗಳೂರಿನಲ್ಲಿ ನಡೆಯುತ್ತಿದ್ದವು. ಪ್ರಧಾನಮಂತ್ರಿಗಳ ದೂರದೃಷ್ಟಿಯ ಪರಿಣಾಮವಾಗಿ ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಶಕ್ತಿಯನ್ನು ಪ್ರದರ್ಶನಕ್ಕಾಗಿ ದೇಶದ 50 ಕಡೆಗಳಲ್ಲಿ 200ಕ್ಕೂ ಅಧಿಕ ಸಭೆ ನಡೆಯುತ್ತಿವೆ ಎಂದು ಅವರು ವಿವರಿಸಿದರು.
ಈ ಜಿ20 ಸಭೆಯಲ್ಲಿ ಸುಮಾರು 02 ಲಕ್ಷಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಪಾಲ್ಗೊಂಡು ಅನೇಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ದೇಶದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದು, ದುರ್ಬಲ ಆರ್ಥಿಕತೆ ಬಲಪಡಿಸುವುದೇ ಶೃಂಗಸಭೆ ಮುಖ್ಯ ಗುರಿಯಾಗಿದೆ ಕೇಂದ್ರ ಕೃಷಿ ಸಚಿವ ಥೋಮರ್ ಹೇಳಿದರು.
ವರ್ಷವೀಡಿ ನಡೆಯುವ ಜಿ20 ಶೃಂಗಸಭೆಯ ಅಧ್ಯಕ್ಷತೆ ಸ್ಥಾನ ಭಾರತವು ಅಲಂಕರಿಸಿದೆ. ಇದು ಭಾರತವನ್ನು ಜಗತ್ತಿನಲ್ಲಿಶಕ್ತಿ ಶಾಲಿ ರಾಷ್ಟ್ರವೆಂದು ತೋರ್ಪಡಿಸಲು ಸಹಾಯವಾಗಲಿದೆ. ಇದಕ್ಕೆ ಕಾರಣರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸಚಿವರು ಶ್ಲಾಘಿಸಿದರು.