ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
ಎರಡು ವರ್ಷಗಳಿಗೊಮ್ಮೆ ವಿಶ್ವ ಕನ್ನಡಿಗರನ್ನು ಒಗ್ಗೂಡಿಸುವ ಈ ಸಂಭ್ರಮದ ಕನ್ನಡ ಸಮ್ಮೇಳನ ಮೂರು ದಿನಗಳ ಕಾಲ ಜಾರ್ಜಿಯಾ ಇಂಟರ್ನ್ಯಾಷನಲ್ ಕನ್ವೆಷನ್ ಸೆಂಟರ್ ನಡೆಯಲಿದೆ. ಈ ಕನ್ನಡ ಹಬ್ಬಕ್ಕೆ ಸದಾನಂದ ಗೌಡರನ್ನು ಆಮಂತ್ರಿಸಲೆಂದು ಅಮೆರಿಕದಿಂದ ಅಕ್ಕ ಅಧ್ಯಕ್ಷ ದಯಾನಂದ ಅಡಪ, ಉಪಾಧ್ಯಕ್ಷ ಶಿವಮೂರ್ತಿ ಕೀಲಾರ, ಅಮರನಾಥ ಗೌಡ, ತಿಮ್ಮಪ್ಪ ಮುಂತಾದವರು ಆಗಮಿಸಿದ್ದರು.
ಗೌಡರ ಜೊತೆಗೆ ಗಣ್ಯ ರಾಜಕಾರಣಿಗಳ ತಂಡ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಲಿದೆ. ಅವರಲ್ಲಿ ಪ್ರಮುಖರೆಂದರೆ, ಗೃಹ ಸಚಿವ ಆರ್ ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಮುಂತಾದವರು.
ಅಕ್ಕ ಬಗ್ಗೆ : 1998ರಲ್ಲಿ ಸ್ಥಾಪಿತವಾದ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಉತ್ತರ ಅಮೆರಿಕಾದಲ್ಲಿರುವ ಒಂದೂವರೆ ಲಕ್ಷಕ್ಕೂ ಹೆಚ್ಚಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ತಂದು ಅಮೆರಿಕದಲ್ಲಿಯೂ ಕನ್ನಡತನವನ್ನು ಜೀವಂತವಾಗಿಡಲು ಶ್ರಮಿಸುತ್ತಿದೆ. 'ಅಕ್ಕ' ಸಂಸ್ಥೆ ಅಮೆರಿಕನ್ನಡಿಗರು ಮತ್ತು ಕರ್ನಾಟಕದಲ್ಲಿರುವ ಕನ್ನಡಿಗರ ನಡುವಿನ ಸಾಂಸ್ಕೃತಿಕ ಸೇತುವೆಯಾಗಿದೆ.
ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುವುದು ಮಾತ್ರವಲ್ಲದೆ, ಕರ್ನಾಟಕದಲ್ಲಿನ ಶಾಲೆಗಳಿಗೆ ಕಟ್ಟಡ ನಿರ್ಮಿಸುವ ಮುಖಾಂತರ, ನೆರೆ ಸಂತ್ರಸ್ತರಿಗೆ ಹಣ ಸಂಗ್ರಹಿಸುವ ಮುಖಾಂತರ, ಹಳ್ಳಿಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸುವ ಮುಖಾಂತರ, ಅನೇಕ ಪ್ರತಿಭಾವಂತ ಬಡವರಿಗೆ ಸ್ಕಾಲರ್ಶಿಪ್ ನೀಡುವ ಮುಖಾಂತರ ಅನೇಕ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಕೊಂಡಿದೆ.
ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಎರಡು ವರ್ಷಗಳಿಗೊಮ್ಮೆ ವಿಶ್ವ ಕನ್ನಡ ಸಮ್ಮೇಳನವನ್ನು ಅಕ್ಕ ಆಯೋಜಿಸುತ್ತ ಬಂದಿದೆ. ಈ ಬಾರಿ 5 ಸಾವಿರಕ್ಕೂ ಹೆಚ್ಚಿನ ಕನ್ನಡಿಗರು ಆಗಮಿಸುವ ಸಂಭವನೀಯತೆಯಿದೆ. ಕರ್ನಾಟಕದಿಂದಲೂ ಅನೇಕ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ನೊಂದಾವಣಿ ಈಗಾಗಲೆ ಆರಂಭವಾಗಿದ್ದು, ಏಪ್ರಿಲ್ 30ರೊಳಗೆ ನೊಂದಾವಣಿ ಮಾಡಿಕೊಳ್ಳುವವರಿಗೆ ವಿಶೇಷ ರಿಯಾಯಿತಿಯಿದೆ.