ಬ್ರೇಕಿಂಗ್ ನ್ಯೂಸ್: ಹುಳಿಯಾರ್ ಶಾಲೆಯಲ್ಲಿ 3 ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವು
ವಸತಿ ಗೃಹದಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಸಾವು; ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿರುವ ಶಾಲೆ.
ತುಮಕೂರು, ಮಾರ್ಚ್ 9: ತುಮಕೂರು, ಮಾರ್ಚ್ 9: ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರಿನಲ್ಲಿರುವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ವಸತಿ ಗೃಹದಲ್ಲಿದ್ದ 3 ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಕಾಲೇಜು ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿದ್ದಾಗಿದೆ.
ಮೃತಪಟ್ಟವರನ್ನು ಶಾಂತಮೂರ್ತಿ, ಆಕಾಂಕ್ಷಾ ಪಲ್ಲಕ್ಕಿ ಹಾಗೂ ಶ್ರೇಯಸ್ ಎಂದು ಗುರುತಿಸಲಾಗಿದೆ. ಆಹಾರ ಸೇವಿಸಿದ್ದ ಮತ್ತೊಬ್ಬ ವಿದ್ಯಾರ್ಥಿ ಸುದರ್ಶನ್ ಎಂಬುವ ಮತ್ತೊಬ್ಬ ವಿದ್ಯಾರ್ಥಿ ತೀವ್ರವಾಗಿ ಅಸ್ವಸ್ಥನಾಗಿದ್ದಾನೆ.
ಈ ವಿದ್ಯಾರ್ಥಿಗಳೊಂದಿಗೆ ಊಟ ಮುಗಿಸಿದ್ದ ವಸತಿ ಗೃಹದ ಗಾರ್ಡ್ ಕೂಡ ಅಸ್ವಸ್ಥನಾಗಿದ್ದು ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲರೂ ವಿದ್ಯಾರ್ಥಿಗಳು ರಾತ್ರಿ ಸುಮಾರು 9: 30 ಗಂಟೆಗೆ ಊಟ ಮುಗಿಸಿದ್ದರು.
ಊಟ ಕಹಿಯಾಗಿತ್ತು?: ಎಲ್ಲರಿಗಿಂತ ಮೊದಲೇ ಈ ಐವರು ಊಟ ಮುಗಿಸಿದ್ದರು. ಊಟ ಮಾಡುವಾಗಲೇ ಊಟ ಕಹಿಯಾಗಿದೆ ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದರೆನ್ನಲಾಗಿದೆ. ಬುಧವಾರ ರಾತ್ರಿ ಊಟ ಮಾಡಿದ ಕೆಲವೇ ನಿಮಿಷಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ತಕ್ಷಣವೇ ಅವರನ್ನು ಸಮೀಪದ ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲಾಗಲೇ ಮಧ್ಯರಾತ್ರಿಯಾಗಿತ್ತು. ವಿದ್ಯಾರ್ಥಿಗಳು ಅಸ್ವಸ್ಥರಾದ ಹಿನ್ನೆಲೆಯಲ್ಲಿ ವಸತಿ ಗೃಹದಲ್ಲಿದ್ದ ಉಳಿದ ವಿದ್ಯಾರ್ಥಿಗಳೂ ಆಹಾರ ಸ್ವೀಕರಿಸಲು ಹಿಂದೇಟು ಹಾಕಿದರು ಎನ್ನಲಾಗಿದೆ.
ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದ ಖಾಸಗಿ ವೈದ್ಯರು ಅವರನ್ನು ಶೀಘ್ರವೇ ತುಮಕೂರಿನ ಉನ್ನತ ದರ್ಜೆಯ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ತಕ್ಷಣವೇ ಅವರನ್ನು ತುಮಕೂರಿಗೆ ಕರೆ ತರಲಾಗಿದೆ. ಆದರೆ ಅಷ್ಟರಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.
ಆರೋಗ್ಯಾಧಿಕಾರಿ ವಿವರಣೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ರಂಗಸ್ವಾಮಿ, ''ತುಮಕೂರು ಹುಳಿಯಾರಿನಿಂದ ಕರೆತರಲಾಗಿದ್ದ ವಿದ್ಯಾರ್ಥಿಗಳಲ್ಲಿ ಮೂವರು ಆಸ್ಪತ್ರೆ ಸೇರುವಷ್ಟರಲ್ಲಿ ಅಸುನೀಗಿದ್ದರು. ಸುದರ್ಶನ ಎಂಬ ವಿದ್ಯಾರ್ಥಿಯು ತೀವ್ರ ಅಸ್ವಸ್ಥನಾಗಿದ್ದಾನೆ. ಆತನನ್ನು ಐಸಿಯುನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ'' ಎಂದು ತಿಳಿಸಿದ್ದಾರೆ.
''ವಿದ್ಯಾರ್ಥಿಗಳ ಅಸ್ವಸ್ಥತೆಗೆ ಕಾರಣ ತಿಳಿದುಬಂದಿಲ್ಲ. ಕೆಲವಾರು ವೈಜ್ಞಾನಿಕ ಪರೀಕ್ಷೆಗಳ ನಂತರ ಸಾವಿಗೆ ನಿಖರ ಕಾರಣ ಸಿಗಲಿದೆ'' ಎಂದು ಅವರು ತಿಳಿಸಿದ್ದಾರೆ.
ಕಿರಣ್ ಕುಮಾರ್ ಅಳಲು: ಈ ಬಗ್ಗೆ ಶಾಲೆಯ ಮಾಲೀಕ ಕಿರಣ್ ಕುಮಾರ್ ಅವರನ್ನು ಸಂಪರ್ಕಿಸಲಾಗಿದ್ದು, ಅವರು ವಿದ್ಯಾರ್ಥಿಗಳ ಸಾವಿಗೆ ಖೇದ ವ್ಯಕ್ತಪಡಿಸಿದ್ದಾರೆ. ''ವಿದ್ಯಾರ್ಥಿಗಳ ಸಾವು ನೋವು ತಂದಿದೆ. ಆದರೆ, ಊಟ ಸೇವಿಸಿದ ನಂತರ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ'' ಎಂದು ತಿಳಿಸಿದ್ದಾರೆ.