ಎಟಿಎಂ ಹಲ್ಲೆ ಪ್ರಕರಣ : ತುಮಕೂರಿನಲ್ಲಿ ಶಂಕಿತನ ಬಂಧನ
ತುಮಕೂರು, ನ.22 : ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ಜ್ಯೋತಿ ಉದಯ್ ಅವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ ತುಮಕೂರು ಪೊಲೀಸರು ತಿಪಟೂರಿನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಹೋಲುವ ಸತೀಶ್ (33) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ತುಮಕೂರು ಪೊಲೀಸರ ಆತನ ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.

ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆದು ಮೂರುದಿನ ಕಳೆದಿದ್ದು, ಗುರುವಾರ ಜ್ಯೋತಿ ಅವರ ಮೊಬೈಲ್ ಅನ್ನು ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಿದ್ದ ವಿಷಯ ಬೆಳಕಿಗೆ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಅಬುಜಾರ್ ಎಂಬ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಸಮಯದಲ್ಲಿ ಆರೋಪಿ ಮಂಗಳವಾರ ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿ ಮೊಬೈಲ್ ಅನ್ನು ಕೇವಲ 500 ರೂ.ಗೆ ಮಾರಾಟ ಮಾಡಿರುವ ವಿಷಯ ತಿಳಿದು ಬಂದಿತ್ತು. (ಕೇವಲ 500 ರೂ.ಗೆ ಮೊಬೈಲ್ ಮಾರಾಟ)
ಗುರುವಾರ ಆರೋಪಿಯ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದರು, ಆರೋಪಿ ಸುಳಿವು ನೀಡಿದವರಿಗೆ 1 ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಸದ್ಯ ತಿಪಟೂರಿನಲ್ಲಿ ಬಂಧಿಸಲಾಗಿರುವ ವ್ಯಕ್ತಿ ಹಲ್ಲೆ ಮಾಡಿದವನೇ? ಎಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.
ಹುಟ್ಟು ಹಬ್ಬದ ಸಂಭ್ರಮವಿಲ್ಲ : ಶುಕ್ರವಾರ ನ.22ರಂದು ಜ್ಯೋತಿ ಉದಯ್ ಅವರ ಮಗಳ ಹುಟ್ಟುಹಬ್ಬವಿತ್ತು. ಮಗಳ ಹುಟ್ಟುಹಬ್ಬಕ್ಕೆ ಅಗತ್ಯ ವಸ್ತು ಖರೀದಿಸಲು ಹಣ ತರಲು ಜ್ಯೋತಿ ಅವರು ಮಂಗಳವಾರ ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಆ ಸಂದರ್ಭದಲ್ಲಿಯೇ ದುಷ್ಕರ್ಮಿ ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಿದ್ದಾನೆ.












Click it and Unblock the Notifications