ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಜೊತೆ ಜಗನ್ ಮಾತಾಡಿದ್ದೇನು?
ಅಮರಾವತಿ, ಜುಲೈ 5: ಟೀಂ ಇಂಡಿಯಾ ಮಾಜಿ ನಾಯಕ, ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಅನಿಲ್ ಕುಂಬ್ಳೆ ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
ಕುಂಬ್ಳೆ ಕ್ರಿಕೆಟರ್ ಅಷ್ಟೇ ಅಲ್ಲದೆ ಕ್ರಿಕೆಟ್ ಸಂಬಂಧಿಸಿದ ಉದ್ಯಮದಲ್ಲಿ ಹಲವು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಕ್ರಿಕೆಟ್ ಆಟಕ್ಕೆ ಸಂಬಂಧಪಟ್ಟ ಸಾಫ್ಟ್ ವೇರ್ ವಿನ್ಯಾಸ, ಯುವಪ್ರತಿಭೆಗಳ ಆಯ್ಕೆಗೆ ಬೇಕಾದ ಹಿನ್ನೆಲೆ ಸಾಧನ, ತಂತ್ರಾಂಶಗಳನ್ನು ಕುಂಬ್ಳೆ ಒಡೆತನದ ಸಂಸ್ಥೆ ಒದಗಿಸುತ್ತದೆ.
ಸೌಹಾರ್ದ ಭೇಟಿ: ಆಂಧ್ರಪ್ರದೇಶ ಸಿಎಂ ಜಗನ್ ಹಾಗೂ ಅನಿಲ್ ಕುಂಬ್ಳೆ ಭೇಟಿ ಸೌಹಾರ್ದಯುತವಾಗಿತ್ತು, ಆಂಧ್ರದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಇಬ್ಬರು ಚರ್ಚೆ ಮಾಡಿದರು ಎಂದು ತಿಳಿದು ಬಂದಿದೆ.
ಆಂಧ್ರದಲ್ಲಿ ಕ್ರೀಡಾ ವಿವಿ ಜೊತೆಗೆ ಕ್ರೀಡಾ ಉತ್ಪನ್ನ, ಸಾಧನಗಳನ್ನು ಉತ್ಪಾದಿಸುವ ಕಾರ್ಖಾನೆ ಸ್ಥಾಪನೆ ಬಗ್ಗೆ ಅನಿಲ್ ಕುಂಬ್ಳೆ ಸಲಹೆ ನೀಡಿದರು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
''ಭಾರತದಲ್ಲಿ ಸದ್ಯ ಕ್ರೀಡಾ ಉತ್ಪನ್ನ, ಉಪಕರಣಗಳನ್ನು ಪಡೆಯಲು ಜಲಂಧರ್, ಮೀರತ್ ಕಡೆಗೆ ಮುಖ ಮಾಡಬೇಕಿದೆ, ಆಂಧ್ರದಲ್ಲಿ ಅಂಥದ್ದೊಂದು ಕಾರ್ಖಾನೆ ಸ್ಥಾಪಿಸಿದರೆ ಈ ಭಾಗದ ಎಲ್ಲಾ ಕ್ರೀಡಾ ಕ್ಷೇತ್ರದವರಿಗೆ ಉಪಯೋಗವಾಗಲಿದೆ'' ಎಂದು ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ. ಜೊತೆಗೆ ಕ್ರೀಡಾ ವಿವಿ ಸ್ಥಾಪನೆ ಬಗ್ಗೆ ಅಗತ್ಯ ಸಲಹೆ, ಸೂಚನೆ, ಉಪಯುಕ್ತ ಮಾಹಿತಿ ಹಂಚಿಕೊಳ್ಳಲು ಸದಾ ಸಿದ್ಧ ಎಂದು ಜಗನ್ಗೆ ಭರವಸೆ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.