ದೇಶವನ್ನೇ ಬೆಚ್ಚಿಬೀಳಿಸಿದ ನಿರ್ಭಯಾ ಅತ್ಯಾಚಾರಿಗಳಿಗೆ ಖಿನ್ನತೆ
ನವದೆಹಲಿ, ಡಿಸೆಂಬರ್ 14: ದೇಶದ ಜನರನ್ನು ಹಾಗೂ ನಿರ್ಭಯಾ ಕುಟುಂಬ ಸದಸ್ಯರನ್ನು ಶಾಕ್ಗೆ ದೂಡಿದ್ದ ದುರುಳ ಅತ್ಯಾಚಾರಿಗಳು ಈಗ ಖಿನ್ನತೆಗೆ ಒಳಗಾಗಿದ್ದಾರೆ.
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿರುವ ನಾಲ್ವರು ಅತ್ಯಾಚಾರಿಗಳು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಖಿನ್ನತೆಗೆ ಒಳಗಾಗಿದ್ದಾರೆ ಎಂದು ತಿಹಾರ್ ಜೈಲಿನ ಮೂಲಗಳು ತಿಳಿಸಿವೆ.
ಅತ್ಯಾಚಾರಿಗಳಾದ ಅಕ್ಷಯ್, ಮುಖೇಶ್, ಪವನ್ ಗುಪ್ತ, ವಿನಯ್ ಶರ್ಮಾ ಸರಿಯಾಗಿ ಆಹಾರ ಸೇವಿಸುತ್ತಿಲ್ಲ. ಹಾಗೂ ಮರಣದಂಡನೆಗೆ ಒಳಗಾಗುತ್ತೇವೆ ಎನ್ನುವ ಆತಂಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಅವರ ಭದ್ರತೆಗೆ ವಿಶೇಷ ಐವರು ಪೊಲೀಸರನ್ನು ನೇಮಿಸಲಾಗಿದೆ.ಈ ಅತ್ಯಾಚಾರಿಗಳ ಮೇಲೆ ಹಗಲಿರುಳು ಐವರು ಪೊಲೀಸರು ಕಣ್ಣಿಡುತ್ತಿದ್ದಾರೆ.
ಈ ಅತ್ಯಾಚಾರಿಗಳು ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಹಾಗೂ ಖುದ್ದಾಗಿ ತಮ್ಮ ಮೇಲೆ ಯಾವುದೇ ಸಮಸ್ಯೆಯನ್ನು ಮಾಡಿಕೊಳ್ಳದಂತೆ ಎಚ್ಚರವಹಿಸುತ್ತಿದ್ದಾರೆ.
2013ರಲ್ಲಿ ಪ್ರಕರಣದ ಇನ್ನೋರ್ವ ಅಪರಾಧಿ ರಾಮ್ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಉಳಿದ ನಾಲ್ವರು ಅತ್ಯಾಚಾರಿಗಳು ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ಎಚ್ಚರವಹಿಸಲಾಗುತ್ತಿದೆ.
ಸೋಮವಾರ ಗಲ್ಲುಶಿಕ್ಷೆ: ತಿಹಾರ್ ಜೈಲಿನ ಮೂಲಗಳ ಪ್ರಕಾರ ಸೋಮವಾರ ಅಂದರೆ ಡಿಸೆಂಬರ್ 16ರಂದು ನಾಲ್ವರು ಅತ್ಯಾಚಾರಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಗಲ್ಲು ಶಿಕ್ಷೆಯ ಛೇಂಬರ್ನ್ನು ಈಗಾಗಲೇ ನಿರ್ಮಿಸಲಾಗಿದೆ. ಹಾಗೆಯೇ ಗಲ್ಲುಶಿಕ್ಷೆಯನ್ನು ಜಾರಿ ಮಾಡುವ ಹ್ಯಾಂಗ್ ಮ್ಯಾನ್ನ್ನು ಕೂಡ ಕರೆಸಲು ಸಿದ್ಧತೆ ನಡೆಸಲಾಗಿದೆ.
ಉತ್ತರ ಪ್ರದೇಶದ ಡಿಜಿಪಿ ಕೂಡ ಈ ವಿಚಾರವನ್ನು ಖಾತ್ರಿಪಡಿಸಿದ್ದು, ಮೀರತ್ ಜೈಲಿನಿಂದ ಹ್ಯಾಂಗ್ಮ್ಯಾನ್ ಅನ್ನು ಕಳುಹಿಸಿಕೊಡುವಂತೆ ಮನವಿ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಿಹಾರ್ ಜೈಲಿನಿಂದ ಅಂತಿಮ ಕರೆ ಬರುತ್ತಿದ್ದಂತೆ ಹ್ಯಾಂಗ್ಮ್ಯಾನ್ ಮೀರತ್ನಿಂದ ಪ್ರಯಾಣ ಬೆಳೆಸಲಿದ್ದಾರೆ.
ಇದಲ್ಲದೆ ಅಪರಾಧಿಗಳನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಅಂತಿಮ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.











Click it and Unblock the Notifications