ಏನಿದು ಖಾಸಗಿತನದ ಹಕ್ಕು?: ತಿಳಿಯಬೇಕಾದ 6 ಸಂಗತಿ
ನವದೆಹಲಿ, ಆಗಸ್ಟ್ 24: 'ಖಾಸಗಿತನ ಮೂಲಭೂತ ಹಕ್ಕು' ಎಂದು ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪು ಇಡಿ ದೇಶದ ಜನರಲ್ಲೂ ಸಂಚಲನವನ್ನುಂಟು ಮಾಡಿದೆ. ಇದು ವ್ಯಕ್ತಿ ಸ್ವಾತಂತ್ರ್ಯದ ಪುನಃಸ್ಥಾಪನೆ ಎಂದು ಹಲವರು ಕೊಂಡಾಡಿದ್ದಾರೆ.
ಹಾಗಾದರೆ ಏನಿದು ಖಾಸಗಿತನದ ಹಕ್ಕು? ಇದೊಂದು ಸಾಂವಿಧಾನಿಕ ಪೀಠದಲ್ಲಿ ಬಗೆಹರಿಸಬೇಕಾದ ಜಟಿಲ ಸಮಸ್ಯೆಯಾಗಿದ್ದು ಹೇಗೆ? ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸುವುದರಿಂದ ಏನಾಗುತ್ತದೆ ಎಂಬಿತ್ಯಾದಿ ಮಾಹಿತಿಗೆ 'ಒನ್ ಇಂಡಿಯಾ' ನಿಮಗಾಗಿ ಉತ್ತರ ನೀಡಿದೆ.
ಸಾರ್ವತ್ರಿಕ ಗುರುತಿನ ಚೀಟಿ ಆಧಾರ್ ಅನ್ನು ಪ್ರತಿಯೊಬ್ಬ ಭಾರತೀಯನಿಗೂ ಕಡ್ಡಾಯವಾಗಿದೆ. ಆದರೆ ಆಧಾರ್ ಗಾಗಿ ಪ್ರತಿವ್ಯಕ್ತಿಯ ಬೆರಳಚ್ಚು ಮತ್ತು ಕಣ್ಣಿನ ಪಾಪೆ, ವೈಯಕ್ತಿಕ ಮಾಹಿತಿಗಳನ್ನು ಒತ್ತಾಯಪೂರ್ವಕವಾಗಿ ಕಸಿಯುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗುತ್ತಲೇ ಖಾಸಗಿತನದ ಹಕ್ಕಿನ ಕುರಿತೂ ಧ್ವನಿ ಎದ್ದಿದೆ.

ಖಾಸಗಿತನ ಎಂದರೆ...
ಖಾಸಗಿತನ ಎಂದರೆ ವ್ಯಕ್ತಿ ಮತ್ತೊಬ್ಬರಿಗೆ ಹಾನಿಯಾಗದಂತೆ, ತನಗಿಷ್ಟಬಂದಂತೆ ತಾನು ಬದುಕುವುದು. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಮತ್ತೊಬ್ಬರಿಗೆ ಹಾನಿಯಾಗುತ್ತಿಲ್ಲವಾದರೆ ವ್ಯಕ್ತಿ ಹೇಗೆ ಬೇಕೋ ಹಾಗೆ ಬದುಕಬಹುದು.

ಆಧಾರ್ ವಿವಾದವೇಕೆ?
ಆಧಾರ್ ಕಾರ್ಡ್ ಮಾಡಿಸುವಾಗ ಪ್ರತಿವ್ಯಕ್ತಿಯೂ ತನ್ನ ಬೆರಳಚ್ಚು ಮತ್ತು ಕಣ್ಣಿನ ರೆಟಿನಾ ಸ್ಕ್ಯಾನ್ ಮಾಡಿಸಬೇಕು, ಮಾತ್ರವಲ್ಲ ವೈಯಕ್ತಿಕ ವಿವರಗಳನ್ನು ನೀಡಬೇಕು. ಆದರೆ ಇದರಿಂದ ವೈಯಕ್ತಿಕ ಮಾಹಿತಿಗಳು ಬೇರೆಡೆಗೆ ಸೋರಿಕೆಯಾಗುವ ಸಂಭವ ಹೆಚ್ಚು. ಬೇರೆ ಯಾವ ಮುಂದುವರಿದ ದೇಶಗಳಲ್ಲೂ ಬಯೋಮೆಟ್ರಿಕ್ ಮಾಹಿತಿಯನ್ನು ಒತ್ತಾಯ ಪೂರ್ವಕವಾಗಿ ಕಲೆಹಾಕುವುದಿಲ್ಲ. ಆದ್ದರಿಂದ ಆಧಾರ್ ಗಾಗಿ ಖಾಸಗಿತನವನ್ನು ಕಸಿಯುತ್ತಿರುವುದು ಸರಿಯೇ ಎಂಬ ಕುರಿತು ಪ್ರಶ್ನೆ ಎದ್ದಿತ್ತು.

ಮೂಲಭೂತ ಹಕ್ಕು ಎಂದು ಘೋಷಿಸಿದರೆ...
ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು ಮುಂತಾದ ಮೂಲಭೂತ ಹಕ್ಕುಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಆ ಹಕ್ಕುಗಳಿಗೆ ಗಾಸಿಯಾಗುವಂಥ ಕಾನೂನು ಜಾರಿಗೆ ಬಂದರೆ ಆ ಕಾನೂನನ್ನೇ ರದ್ದು ಮಾಡಲಾಗುತ್ತದೆ. ಆದ್ದರಿಂದ ಖಾಸಗಿತನದ ಹಕ್ಕೂ ಮೂಲಭೂತ ಹಕ್ಕು ಎಂದು ಸಂವಿಧಾನದ 21 ನೇ ವಿಧಿಯಲ್ಲಿ ಹೇಳಲಾಗಿದ್ದು, ಅದನ್ನೇ ಇಂದು ಸುಪ್ರೀಂ ಕೋರ್ಟ್ ಪುನರುಚ್ಛರಿಸಿದೆ.

ಅರ್ಜಿದಾರರು ಯಾರು?
2012 ರ ನವೆಂಬರ್ ನಲ್ಲಿ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಎನ್ನುವವರು ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಗೆ ಅರ್ಜಿ ಸಲ್ಲಿಸಿದ್ದರು. ನಂತರ ಅವರೊಂದಿಗೆ ಹಲವರು ಸೇರಿಕೊಂಡರು.

ವಿಚಾರಣೆ ನಡೆಸಿದ 9 ಜನರ ಪೀಠ
ಈ ಕುರಿತು ವಿಚಾರಣೆ ನಡೆಸಿದ ಜೆ.ಎಸ್.ಖೆಹರ್ ನೇತ್ರತ್ವದ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಮೂರು ವಾರಗಳಲ್ಲಿ 6 ದಿನ ಸುದೀರ್ಘ ವಿಚಾರಣೆ ನಡೆಸಿ ತೀರ್ಪನ್ನು ಆಗಸ್ಟ್ 24 ಕ್ಕೆ ಕಾಯ್ದಿರಿಸಿತ್ತು.

ಆಧಾರ್ ಕತೆಯೇನು?
ಖಾಸಗಿತನ ಎಂಬುದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ಆಧಾರ್ ಯೋಜನೆ ಏನಾಗುತ್ತದೆ ಎಂಬುದು ಇನ್ನೂ ಬಗೆಹರಿಯದ ವಿಷಯ. ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ಕುರಿತು ವಿಚಾರಣೆ ನಡೆಸಲು ಮತ್ತೊಂದು ನ್ಯಾಯಪೀಠವನ್ನು ಈಗಾಗಲೇ ನೇಮಿಸಲಾಗಿದ್ದು, ಕಳೆದ ಐದು ವರ್ಷಗಳಿಂದಲೂ ಈ ವಿಷಯ ತೀರ್ಮಾನವಾಗದೆ ಉಳಿದಿದೆ.












Click it and Unblock the Notifications