ದೆಹಲಿ ಹಿಂಸಾಚಾರಕ್ಕೆ 11 ಬಲಿ, 70 ಮಂದಿಗೆ ಗುಂಡೇಟು
ನವದೆಹಲಿ, ಫೆಬ್ರವರಿ 25: ದೆಹಲಿಯಲ್ಲಿ ಸಿಎಎ-ಎನ್ಆರ್ಸಿ ಪರ-ವಿರೋಧಿಗಳ ಬೀದಿ ಕಾಳಗಕ್ಕೆ 11 ಮಂದಿ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, 70 ಕ್ಕೂ ಅಧಿಕ ಮಂದಿಗೆ ಗುಂಡೇಟಿನ ಗಾಯಗಳಾಗಿವೆ.
ದೆಹಲಿಯಲ್ಲಿ ಕೆಲವು ದಿನಗಳಿಂದಲೂ ಸಿಎಎ-ಎನ್ಆರ್ಸಿ ಪರ ಮತ್ತು ವಿರೋಧ ಪ್ರತಿಭಟನೆಗಳೆರಡೂ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರರು ಕಲ್ಲು ತೂರಾಟ, ಹಲ್ಲೆಗೆ ಇಳಿದಿದ್ದಾರೆ. ಹಿಂಸಾಚಾರದಿಂದ ಈವರೆಗೆ 11 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡ ಸುಮಾರು 70 ಕ್ಕೂ ಹೆಚ್ಚು ಮಂದಿಗೆ ಗುಂಡೇಟಿನಿಂದ ಗಾಯಗಳಾಗಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರು ಹಲವು ಸುತ್ತುಗಳು ಗುಂಡು ಹಾರಿಸಿದ್ದಾರೆ. ಗಾಯಗೊಂಡವರಲ್ಲಿ ಸುಮಾರು 50 ಕ್ಕೂ ಹೆಚ್ಚು ಮಂದಿ ಪೊಲೀಸರಾಗಿದ್ದಾರೆ. ಕೇಜ್ರಿವಾಲ್ ಅವರು ಇಂದು ಹಲವು ಮಂದಿ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ದೆಹಲಿಗೆ ಬಂದಿವೆ 67 ತಂಡಗಳು
70 ರಿಂದ 100 ಮಂದಿ ಭದ್ರತಾ ಸಿಬ್ಬಂದಿ ಹೊಂದಿರುವ 67 ತಂಡಗಳನ್ನು ದೆಹಲಿ ಪರಿಸ್ಥಿತಿಯನ್ನು ತಹಬದಿಗೆ ತರಲು ನಿಯೋಜಿಸಲಾಗಿದೆ. ದೆಹಲಿ ಪೊಲೀಸರ ಜೊತೆಗೆ ಸಿಆರ್ಪಿಎಫ್ ಯೋಧರೂ ಸಹ ದೆಹಲಿ ಪರಿಸ್ಥಿತಿಯನ್ನು ನಿಭಾಯಿಸಲು ಆಗಮಿಸಿದ್ದಾರೆ. ಈಶಾನ್ಯ ದೆಹಲಿಯ ಕಾರ್ವಾಲ್ ನಗರ, ಮೋಜ್ಪುರ್, ಭಜನಪುರ, ವಿಜಯಾ ಪಾರ್ಕ್ಗಳಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ ತೀವ್ರಗೊಂಡಿದೆ.
ದೇವಸ್ಥಾನ-ಮಸೀದಿಗಳಿಂದ ಶಾಂತಿ ಸಂದೇಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇಂದು ಸಭೆ ನಡೆಸಿದ್ದು, ದೆಹಲಿಯಲ್ಲಿ ಶಾಂತಿ ಸ್ಥಾಪನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ದೇವಸ್ಥಾನ, ಮಸೀದಿಗಳಿಂದ ಶಾಂತಿ ಸಂದೇಶಗಳನ್ನು ಪ್ರಕಟಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ದೆಹಲಿಯ ಹಲವು ಕಡೆ ನಿಷೇಧಾಜ್ಞೆ
ಈಶಾನ್ಯ ದೆಹಲಿಯ ಹಲವು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ದೆಹಲಿ ಪೊಲೀಸ್ ಮುಖ್ಯ ಕೇಂದ್ರ, ಜೆಎನ್ಯು ಸುತ್ತ-ಮುತ್ತಾ ಇನ್ನೂ ಹಲವು ಕಡೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜೆಎನ್ಯು ವಿದ್ಯಾರ್ಥಿಗಳ ಪ್ರತಿಭಟನಾ ರ್ಯಾಲಿಗೆ ಅವಕಾಶ ನಿರಾಕರಿಸಲಾಗಿದೆ.
ಪ್ರಚೋದನಕಾರಿ ಹೇಳಿಕೆ ಬೇಡ: ಅಮಿತ್ ಶಾ
ಯಾರೂ ಪ್ರಚೋದಾನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಗೃಹ ಸಚಿವ ಅಮಿತ್ ಶಾ ಇಂದು ಹೇಳಿದ್ದಾರೆ. ಜೊತೆಗೆ ದೆಹಲಿಯ ಗಡಿ ಹಂಚಿಕೊಂಡಿರುವ ಹರ್ಯಾಣಾ, ಉತ್ತರ ಪ್ರದೇಶಗಳ ಗಡಿ ಭಾಗಗಳ ಮೇಲೂ ಕಣ್ಣಿರಿಸಲಾಗಿದ್ದು, ದೆಹಲಿ ಪರಿಸ್ಥಿತಿಯ ಲಾಭವನ್ನು ಪಡೆಯುವ ಪ್ರಯತ್ನವನ್ನು ವಿಫಲಗೊಳಿಸುವಂತೆ ಸೂಚಿಸಲಾಗಿದೆ.