ಮಹಾ ಟ್ವಿಸ್ಟ್? ರಾವತ್ ಮನೆಯಲ್ಲಿ ಇಡಿಗೆ ಸಿಕ್ಕ ಹಣದ ಗಂಟಿನಲ್ಲಿ ಸಿಎಂ ಹೆಸರು?
ಮುಂಬೈ, ಜುಲೈ 31: ಶಿವಸೇನಾ ಸಂಸದ ಸಂಜಯ್ ರಾವುತ್ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಕೈಗೆ ಸಿಕ್ಕಿದ 11.5 ಲಕ್ಷ ರೂಪಾಯಿಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೆಸರು ಜೋಡಿತಗೊಂಡಿದೆ. ರಾವುತ್ ಮನೆಯಲ್ಲಿ ವಶಪಡಿಸಿಕೊಳ್ಳಲಾದ ಹಣದ ಪ್ಯಾಕೆಟ್ಗಳಲ್ಲಿ ಒಂದರ ಮೇಲೆ ಸಿಎಂ ಶಿಂಧೆ ಹೆಸರು ಬರೆದಿದೆ.
ಇದರೊಂದಿಗೆ ಪಾತ್ರ ಚಾಲ್ (Patra Chawl) ಅಕ್ರಮ ಹಗರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ. ಏಕನಾಥ್ ಶಿಂಧೆ ಹೆಸರು ಬರೆಯಲಾಗಿದ್ದ ಪ್ಯಾಕೆಟ್ನಲ್ಲಿ 10 ಲಕ್ಷ ರೂ ಹಣದ ಕಂತೆಗಳು ಇದ್ದವು ಎಂದು ಝೀನ್ಯೂಸ್ ವಾಹಿನಿ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದು ನಿಜವೇ ಆಗಿದ್ದರೆ ಪಾತ್ರಾ ಚಾಲ್ ಹಗರಣದಲ್ಲಿ ಶಿಂಧೆಯ ವಿಚಾರಣೆಯೂ ನಡೆಯುವ ಸಾಧ್ಯತೆ ಇರುತ್ತದೆ.
ಇಂದು ಭಾನುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂಬೈನ ಭಾಂಡುಪ್ನಲ್ಲಿರುವ ಸಂಜಯ್ ರಾವುತ್ ನಿವಾಸದ ಮೇಲೆ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿ ಒಂಬತ್ತು ಗಂಟೆ ಕಾಲ ಶೋಧ ನಡೆಸಿದ್ದರು. ಈ ವೇಳೆ 11.5 ಲಕ್ಷ ನಗದು ಹಣ ಸಿಕ್ಕಿರುವುದು ಗೊತ್ತಾಗಿದೆ. ರಾವುತ್ ಅವರನ್ನು ವಿಚಾರಣೆ ಮಾಡಿದ ಬಳಿಕ ಇಡಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡರೆನ್ನಲಾಗಿದೆ. ನಾಳೆ ಸೋಮವಾರ ರಾವುತ್ರನ್ನು ಬಂಧಿಸುವ ಸಾಧ್ಯತೆ ಇದೆ.

ಇದೇ ವೇಳೆ, ಇಡಿ ಕಸ್ಟಡಿಗೆ ಒಳಪಟ್ಟಿರುವ ಸಂಜಯ್ ರಾವುತ್ ಮಾಧ್ಯಮಗಳೊಂದಿಗೆ ಮಾತನಾಡಿ, ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
"ಸರಕಾರದಿಂದ ಸುಳ್ಳು ಆರೋಪಗಳನ್ನು ಮಾಡಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಶಿವಸೇನಾವನ್ನು ದುರ್ಬಲಗೊಳಿಸಲು ಇದೆಲ್ಲಾ ನಡೆಯುತ್ತಿದೆ. ಸಂಜಯ್ ರಾವುತ್ನನ್ನು ಬಗ್ಗಿಸಲು ಆಗುವುದಿಲ್ಲ. ನಾನು ಶಿವಸೇನಾವನ್ನೂ ತೊರೆಯುವುದಿಲ್ಲ" ಎಂದು ಅವರು ಗುಡುಗಿದರು.

ಏನಿದು ಪಾತ್ರ ಚಾಲ್ ಪ್ರಕರಣ?
ಇದು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಗರಣವಾಗಿದೆ. ಇದರ ಮೂಲ ಹೆಚ್ಡಿಐಎಲ್. ಪಿಎಂಸಿ ಕೋ ಆಪರೇಟಿವ್ ಬ್ಯಾಂಕ್ನಿಂದ ಹೆಚ್ಡಿಐಎಲ್ 6700 ಕೋಟಿ ರೂ ಸಾಲ ಪಡೆದು ಹೆಚ್ಡಿಐಎಲ್ ವಂಚನೆ ಎಸಗಿತ್ತು. ಇದರಿಂದ ಪಿಎಂಸಿ ಬ್ಯಾಂಕ್ ಮುಚ್ಚುವ ಹಂತಕ್ಕೆ ಹೋಗಿತ್ತು. ಹೆಚ್ಡಿಐಎಲ್ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.
ಆದರೆ, ಈಗ ಸಂಜಯ್ ರಾವುತ್ ತಳುಕುಹಾಕಿಕೊಂಡಿರುವ ಹಗರಣದಲ್ಲಿ ಮೂಲ ಪಾತ್ರ ಇರುವುದು ಗುರು ಆಶಿಶ್ ಕನ್ಸ್ಟ್ರಕ್ಷನ್ ಎಂಬ ಕಂಪನಿಯದ್ದು. ಇದು ಹೆಚ್ಡಿಐಎಲ್ನ ಸೋದರ ಸಂಸ್ಥೆಯೂ ಹೌದು. ಪಾತ್ರ ಚಾಲ್ ಸೊಸೈಟಿ, ಜಿಎಸಿ ಮತ್ತು ಮಹಾರಾಷ್ಟ್ರ ಗೃಹ ನಿರ್ಮಾಣ ಪ್ರಾಧಿಕಾರ (ಎಂಎಚ್ಎಡಿಎ) ಸಂಸ್ಥೆಗಳ ಮಧ್ಯೆ ಒಪ್ಪಂದ ನಡೆಯುತ್ತದೆ. ಅದರಂತೆ ಜಿಎಸಿ ಪಾತ್ರ ಚಾಲ್ ಸೊಸೈಟಿಯ 672 ಬಾಡಿಗೆದಾರರಿಗೆ ಮತ್ತು ಎಂಎಚ್ಎಡಿಎಗೆ ಫ್ಲಾಟ್ಗಳನ್ನು ನಿರ್ಮಿಸಿಕೊಡಬೇಕಾಗುತ್ತದೆ
ಆದರೆ ಜಿಎಸಿ ವಂಚನೆ ಎಸಗುತ್ತದೆ. 9 ಡೆವಲಪರ್ಗಳಿಗೆ ಫ್ಲೋರ್ ಸ್ಪೇಸ್ ಇಂಡೆಕ್ಸ್ ಅನ್ನು 901.79 ಕೋಟಿ ರೂಪಾಯಿಗೆ ಮಾರಾಟ ಮಾಡಿ ಎಂಎಚ್ಎಡಿಎಯನ್ನು ವಂಚಿಸುತ್ತದೆ. ಹಾಗೆಯೇ 672 ಬಾಡಿಗೆದಾರರಿಗೆ ಯಾವುದೇ ಫ್ಲಾಟ್ಗಳನ್ನೂ ಕಟ್ಟಿಕೊಡುವುದಿಲ್ಲ.
ಇದರ ಜೊತೆಗೆ ಜಿಎಸಿ ಇನ್ನೂ ಮುಂದುವರಿದು ಮೀಡೋಸ್ ಎಂಬ ಮತ್ತೊಂದು ಪ್ರಾಜೆಕ್ಟ್ ಆರಂಭಿಸುತ್ತದೆ. ಇಲ್ಲಿ ಫ್ಲಾಟ್ ಆಕಾಂಕ್ಷಿಗಳಿಂದ ಬುಕಿಂಗ್ ಹಣವೆಂದು 138 ಕೋಟಿ ರೂ ಪಡೆದು ಅಲ್ಲಿಯೂ ವಂಚನೆ ಎಸಗುತ್ತದೆ.

ಸಂಜಯ್ ರಾವುತ್ ಪಾತ್ರ?
ಜಿಎಸಿಯ ಮಾಜಿ ನಿರ್ದೇಶಕ ಪ್ರವೀಣ್ ರಾವುತ್ ಎಂಬುವವರಿಗೆ ಹೆಚ್ಡಿಐಎಲ್ ಸಂಸ್ಥೆಯಿಂದ 100 ಕೋಟಿ ರೂ ರವಾನೆಯಾಗುತ್ತದೆ. ಅವರು ಆ ಹಣವನ್ನು ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಹಂಚಿಕೆ ಮಾಡುತ್ತಾರೆ. ಇದೇ ಹಣದ ಒಂದು ಪಾಲು ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್ಗೂ ಸಿಕ್ಕಿರುತ್ತದೆ.
ಪ್ರವೀಣ್ ರಾವುತ್ ಪತ್ನಿ ಮಾಧುರಿ ರಾವುತ್ ಅವರು 83 ಲಕ್ಷ ರೂ ಹಣವನ್ನು ವರ್ಷಾ ರಾವುತ್ಗೆ ಸಾಲದ ರೂಪದಲ್ಲಿ ಕೊಟ್ಟಿರುತ್ತಾರೆ. ವರ್ಷಾ ಈ ಹಣವನ್ನು ಬಳಸಿ ದಾದರ್ನಲ್ಲಿ ಒಂದು ಫ್ಲಾಟ್ ಖರೀದಿಸಿರುತ್ತಾರೆ. ಇದು ಆಗಿದ್ದು 2010ರಲ್ಲಿ.

ವರ್ಷಾ ರಾವುತ್ ಜೊತೆಗೆ ಸ್ವಪ್ನಾ ಪಾಟ್ಕರ್ ಎಂಬುವರ ಹೆಸರಿನಲ್ಲೂ 8 ಕಡೆ ನಿವೇಶನ ಖರೀದಿ ಆಗಿರುತ್ತದೆ. ಸಂಜಯ್ ರಾವುತ್ ಆಪ್ತ ಸುಜೀತ್ ಅವರ ಪತ್ನಿ ಈ ಸ್ವಪ್ನಾ ಪಾಟ್ಕರ್.
ಇದೀಗ ಜಾರಿ ನಿರ್ದೇಶನಾಲಯವು ಪ್ರವೀಣ್ ರಾವುತ್ ಅವರನ್ನು ಬಂಧಿಸಿದೆ. ದಾದರ್ನಲ್ಲಿರುವ ವರ್ಷಾ ರಾವುತ್ರ ಫ್ಲ್ಯಾಟ್ ಹಾಗು ಖಿಮ್ ಬೀಚ್ನಲ್ಲಿರುವ ೮ ನಿವೇಶನಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications