ಸಿದ್ದರಾಮಯ್ಯರು ಸಿಎಂ ಆದಾಗ ವಿಜೃಂಭಿಸುವ ದೇಶದ್ರೋಹಿಗಳು: ಶೋಭಾ ಕರಂದ್ಲಾಜೆ ಹೇಳಿದ್ದೇನು?
ಬೆಂಗಳೂರು,ಏಪ್ರಿಲ್ 24: ನೇಹಾ ಹಿರೇಮಠರ ಹತ್ಯಾ ಪ್ರಕರಣವು ಕೇವಲ ನಮ್ಮ ದೇಶದಲ್ಲಿ ಸುದ್ದಿಯಾಗಿಲ್ಲ. ಅದು ವಿದೇಶಗಳಲ್ಲೂ ಸುದ್ದಿಯಾಗಿದೆ ಎಂದು ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಮಂಗಳವಾರ ಸಂಜೆ ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಕಾಲೇಜಿನ ವಿದ್ಯಾರ್ಥಿನಿಯನ್ನು 13-14 ಬಾರಿ ಚುಚ್ಚಿ ಕೊಂದ ಘಟನೆ ಖಂಡನೀಯ. ಈ ಧೈರ್ಯ ಫಯಾಜ್ಗೆ ಹೇಗೆ ಬಂತು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಇದ್ದಾಗ ಸಮಾಜದ್ರೋಹಿಗಳು, ದೇಶದ್ರೋಹಿಗಳ ಕೈ ಮೇಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

2013ರಲ್ಲಿ ದೇಶದ್ರೋಹಿಗಳ ಸಂಘಟನೆ ಪಿಎಫ್ಐ, ಹಿಂದೂ ಯುವಕರನ್ನು ಕೊಲೆ ಮಾಡುತ್ತಿದ್ದರು; ಹಿಂದೂ ಯುವತಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದರು. ಇಂಥವರ ಕೇಸನ್ನು ಹಿಂಪಡೆಯಲಾಗಿತ್ತು. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಿದ್ದರೂ ಪ್ರಯೋಜನ ಆಗಲಿಲ್ಲ ಎಂದು ಹೇಳಿದರು.
ರುದ್ರೇಶ್, ಪ್ರವೀಣ್ ನೆಟ್ಟಾರ್ ಮತ್ತಿತರ ಹಿಂದೂಗಳ ನಿರಂತರ ಹತ್ಯೆ ಕುರಿತ ಮಾಹಿತಿ ಪಡೆದ ಕೇಂದ್ರ ಸರಕಾರವು ಪಿಎಫ್ಐ ನಿಷೇಧಿಸಿತ್ತು ಎಂದು ವಿವರಿಸಿದರು. ಆದರೆ, ಹೊರಕ್ಕೆ ಬಂದ ಪಿಎಫ್ಐ ಕಾರ್ಯಕರ್ತರು ಸಮಾಜದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು ಎಂದು ಆಕ್ಷೇಪಿಸಿದರು.
ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ರಾಮನವಮಿಯಂದೇ ಜೈಶ್ರೀರಾಂ ಎಂದು ಕೂಗಿದವರ ಮೇಲೆ ಹಲ್ಲೆ ನಡೆಯುತ್ತಿದೆ. ಅಲ್ಲಾ ಹೋ ಅಕ್ಬರ್ ಕೂಗಲು ಒತ್ತಾಯಿಸುತ್ತಾರೆ. ಕೊಡಗಿನಲ್ಲಿ ಪ್ರಚಾರ ಮುಗಿಸಿ ತೆರಳುವವರ ಮೇಲೆ ಅಲ್ಪಸಂಖ್ಯಾತನೊಬ್ಬ ಕಾರು ಹಾಯಿಸಿದ್ದಾನೆ. ಒಬ್ಬರು ಮೃತರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ನಿನ್ನೆ ಯಾದಗಿರಿಯಲ್ಲಿ ಪರಿಶಿಷ್ಟ ಜಾತಿಯ ಯುವಕನನ್ನು ಹೊಡೆದು ಕೊಂಡಿದ್ದಾರೆ. ಸರಕಾರವು ಸಮಾಜದ್ರೋಹಿಗಳಿಗೆ ಭಯ ಹುಟ್ಟಿಸುವಂತೆ ಶಿಕ್ಷೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಕು. ಸಿ. ಮಂಜುಳಾ ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಕ್ಯಾಂಡಲ್ ಹಚ್ಚಿದ ಮಹಿಳೆಯರು ನೇಹಾ ಹಿರೇಮಠರ ಹತ್ಯಾ ಘಟನೆಯನ್ನು ಖಂಡಿಸಿದರಲ್ಲದೆ, ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು. ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ಆಶಾ ರಾವ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಆನಂದ್ ಮತ್ತು ಭಾರಿ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications