ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತೆ ಮಹಾರಾಷ್ಟ್ರ ಡಿಸಿಎಂ?
ಮುಂಬೈ, ಡಿ 25: ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರ ಸರಕಾರ ರಚನೆ ಸಂಬಂಧ ಬಿಜೆಪಿ ಮುಖಭಂಗ ಅನುಭವಿಸಿದ್ದು ಗೊತ್ತೇ ಇದೆ.
ದೇವೇಂದ್ರ ಫಡ್ನವೀಸ್ ಜೊತೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಎನ್ಸಿಪಿ ಮುಖಂಡ ಅಜಿತ್ ಪವಾರ್, ಮೂರೇ ದಿನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸಖ್ಯ ತೊರೆದಿದ್ದರು.
ಬದಲಾದ ರಾಜಕೀಯ ಚಿತ್ರಣದಲ್ಲಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ. ಇದೇ ತಿಂಗಳ ಮೂವತ್ತರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ.

ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಹುದ್ದೆ ಮತ್ತೆ ಅಜಿತ್ ಪವಾರ್ ಗೆ ಹೋಗಲಿದೆ. ಸಚಿವ ಸಂಪುಟ ವಿಸ್ತರಣೆಯ ಸಂಬಂಧ, ಸಿಎಂ ಠಾಕ್ರೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆ, ಚರ್ಚೆ ನಡೆಸಿದ್ದರು.
ಎನ್ಸಿಪಿ ಶಾಸಕರು ಅಜಿತ್ ಪವಾರ್ ಡಿಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ ಮತ್ತು ಒತ್ತಡವನ್ನೂ ಹೇರುತ್ತಿದ್ದಾರೆಂದು ವರದಿಯಾಗಿದೆ.
ತಮ್ಮ ಪಕ್ಷದ ಶಾಸಕರ ಮನವಿಯನ್ನು ಆಲಿಸಿರುವ ಶರದ್ ಪವಾರ್, ತಮ್ಮ ಸೋದರಳಿಯನನ್ನು ಡಿಸಿಎಂ ಹುದ್ದೆಯಲ್ಲಿ ಕೂರಿಸುವ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಉದ್ಧವ್ ಠಾಕ್ರೆ ಜೊತೆ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ಸಿನ ಇಬ್ಬರು ಶಾಸಕರು ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದರು.












Click it and Unblock the Notifications