ಉದ್ಧವ್ ಠಾಕ್ರೆ ವಿರುದ್ಧ ಪೋಸ್ಟ್: ಗೂಂಡಾಗಿರಿ ಮೆರೆದ ಕಾರ್ಯಕರ್ತರು
ಮುಂಬೈ, ಡಿಸೆಂಬರ್ 24: ಪಕ್ಷದ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ವ್ಯಕ್ತಿ ವಿರುದ್ಧ ಶಿವಸೇನಾ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ.
ಮುಂಬೈ ನ ವಡಾಲಾ ನಿವಾಸಿ ಹೀರಾಮಯ್ ತಿವಾರಿ ಎಂಬುವರು ಮಹಾರಾಷ್ಟ್ರ ನೂತನ ಸಿಎಂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
ಇದಕ್ಕೆ ಕೆರಳಿದ ಶಿವಸೇನಾ ಕಾರ್ಯಕರ್ತರು ತಿವಾರಿ ತಲೆ ಬೋಳಿಸಿದ್ದಾರೆ. ಅದನ್ನು ವಿಡಿಯೋ ಸಹ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೀರಾಮಯ್ ತಿವಾರಿ ಪೊಲೀಸ್ ದೂರು ದಾಖಲಿಸಿದ್ದು, '25-30 ಜನ ಶಿವಸೇನಾ ಕಾರ್ಯಕರ್ತರು ನನ್ನನ್ನು ಥಳಿಸಿ, ನನ್ನ ತಲೆ ಬೋಳಿಸಿ ಅವಮಾನ ಮಾಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಹೀರಾಮಯ್ ತಿವಾರಿ, 'ಜಾಮಿಯಾ ವಿವಿ ಬಳಿ ಗಲಾಟೆಯನ್ನು ಜಲಿಯನ್ ವಾಲಾಬಾಗ್ ಘಟನೆಗೆ ಸಿಎಂ ಉದ್ಧವ್ ಠಾಕ್ರೆ ಹೋಲಿಸಿದ್ದಕ್ಕೆ ವಿರುದ್ಧವಾಗಿ ನಾನು ಪೋಸ್ಟ್ ಹಾಕಿದ್ದೆ, ಇದಕ್ಕೆ ನನ್ನನ್ನು ಥಳಿಸಿದ್ದಾರೆ' ಎಂದು ಹೇಳಿದ್ದಾರೆ.

'ಪೊಲೀಸರು ಮೊದಲಿಗೆ ನಾನು ನೀಡಿದ ದೂರು ಬರೆದುಕೊಂಡರು, ನಂತರ ಬೇರೆ ಒಂದು ಪತ್ರವನ್ನು ಅವರೇ ಬರೆದುಕೊಂಡು ಅದಕ್ಕೆ ಸಹಿ ಹಾಕುವಂತೆ, ಥಳಿಸಿದವರೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ಕೇಳಿದರು' ಎಂದು ಸಹ ಅವರು ಆರೋಪಿಸಿದ್ದಾರೆ.
ಶಿವಸೇನಾ ಕಾರ್ಯಕರ್ತರು ಹೀರಾಮಯ್ ತಿವಾರಿ ವಿರುದ್ಧವೂ ದೂರು ದಾಖಲಿಸಿದ್ದು, ಉದ್ಧವ್ ಠಾಕ್ರೆ ವಿರುದ್ಧ ಅಶ್ಲೀಷ ಪೋಸ್ಟ್ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.












Click it and Unblock the Notifications