ಸಾಗರ್ ಚಂಡಮಾರುತ ಸೃಷ್ಠಿಸಿದ ಅವಾಂತರಕ್ಕೆ ನಲುಗಿತು ದಕ್ಷಿಣ ಕನ್ನಡ

ಮಂಗಳೂರು, ಮೇ 21 : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸಾಗರ್ ಚಂಡಮಾರುತದ ಪರಿಣಾಮ ದಕ್ಷಿಣಕನ್ನಡ ಜಿಲ್ಲೆಯ ಅಲ್ಲಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ಭಾನುವಾರ ಮುಂಜಾನೆ ಮೂರು ಗಂಟೆ ಸುಮಾರಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದಾಗಿ ಜಿಲ್ಲೆಯ ಎರಡು ದೈವಸ್ಥಾನಗಳ ಧ್ವಜಸ್ತಂಭ (ಕೊಡಿಮರ) ತುಂಡಾಗಿದ್ದು, ನೂರಾರು ಮರಗಳು ಉರುಳಿ ಬಿದ್ದಿವೆ.

ಮಂಗಳೂರು ತಾಲೂಕಿನ ಬಜಪೆ, ಸುರತ್ಕಲ್, ಮೂಡಬಿದಿರೆ ಹಾಗೂ ಸುಳ್ಯ ತಾಲೂಕಿನಲ್ಲೂ ಬಿರುಗಾಳಿಯಿಂದ ಹಾನಿ ಸಂಭವಿಸಿದ್ದು, ಗಾಳಿಯ ಜೊತೆಗೆ ಸಿಡಿಲಿನ ಅಬ್ಬರವೂ ಜೋರಾಗಿತ್ತು. ಚಂಡಮಾರುತದ ಸೃಷ್ಟಿಸಿದ ಅವಾಂತರದಿಂದ ಎಲ್ಲೆಲ್ಲಿ ಏನಾಯ್ತು ನೋಡೋಣ ಬನ್ನಿ...

 ಚಾಲಕ ಅಪಾಯದಿಂದ ಪಾರು

ಚಾಲಕ ಅಪಾಯದಿಂದ ಪಾರು

ಸುರತ್ಕಲ್ ಮಲ್ಲಮಾರ್ ಬೀಚ್‌ ಬಳಿ ಗಾಳಿಗೆ ಮರ ಬಿದ್ದು ಗಿರಿಜಾ ಪೂಜಾರ್ತಿ ಹಾಗೂ ಕಾವೇರಿ ಅವರ ಸಮೀಪ ಮರ ಬಿದ್ದಿದ್ದು ಮನೆಗಳಿಗೆ ಹಾನಿಯಾಗಿದೆ. ಬಿರುಗಾಳಿಗೆ ಮರ ಎರಡು ಮನೆಗಳ ನಡುವೆ ಬಿದ್ದಿದ್ದರಿಂದ ಭಾರಿ ಹಾನಿ ತಪ್ಪಿದೆ.

ಅಲ್ಲದೆ ಇದೇ ಪರಿಸರದಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು, ವಿದ್ಯುತ್ ವ್ಯತ್ಯಯವಾಗಿತ್ತು, ಮೆಸ್ಕಾಂ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಮುರಿದ ಕಂಬಗಳನ್ನು ತೆರವುಗೊಳಿಸಿದರು.

ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಜೋಕಟ್ಟೆ ರಸ್ತೆಯಲ್ಲಿ ಮರ ಉರುಳಿ ಬಸ್‌ ಸಹಿತ ವಿವಿಧ ವಾಹನಗಳ ಓಡಾಟಕ್ಕೆ ತಡೆ ಉಂಟಾಯಿತು. ಕೈಗಾರಿಕಾ ವಲಯದ ಜೆ.ಆರ್‌. ಸ್ಟೋರ್‌ ಬಳಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನ ಏರ್‌ಪೋರ್ಟ್‌ ರಸ್ತೆಯ ಮೇಲೆ ಮರ ಬಿದ್ದಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಳಗ್ಗೆ 3.45ರಿಂದ 6 ಗಂಟೆವರೆಗೆ ಈ ಹೆದ್ದಾರಿಯಲ್ಲಿ ಸಂಚರಿಸುವ ವಿಮಾನ ನಿಲ್ದಾಣ ಪ್ರಯಾಣಿಕ ರಿಗೆ ತೊಂದರೆಯಾಯಿತು. ಮರ ಉರುಳಿದಾಗ ಮೂರು ವಿದ್ಯುತ್‌ ಕಂಬಗಳು ತುಂಡಾಗಿವೆ.

 ಧರೆಗೆ ಉರುಳಿದ 150 ವಿದ್ಯುತ್‌ ಕಂಬಗಳು

ಧರೆಗೆ ಉರುಳಿದ 150 ವಿದ್ಯುತ್‌ ಕಂಬಗಳು

ಸುಳ್ಯ ತಾಲೂಕಿನಾದ್ಯಂತ ತಡರಾತ್ರಿ ರಭಸವಾಗಿ ಗಾಳಿ ಬೀಸಿದ್ದು, ನೂರಾರು ಮರಗಳು ಉರುಳಿ ಬಿದ್ದಿವೆ. ಸುಳ್ಯ ತಾಲೂಕಿನಲ್ಲಿ ಸುಮಾರು 150 ವಿದ್ಯುತ್‌ ಕಂಬಗಳು ತುಂಡಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ.

ಗ್ರಾಮಾಂತರ ಪ್ರದೇಶದಲ್ಲಿ ಇಂದು ವಿದ್ಯುತ್‌ ಸರಬರಾಜು ಪುನರಾರಂಭಗೊಳ್ಳಬಹುದು. ಗಾಳಿಯಿಂದ ಹಲವು ಅಡಿಕೆ ಮರ, ಇತರ ಮರಗಳು ಬಿದ್ದಿವೆ. ಸಮುದಾಯ ಆಸ್ಪತ್ರೆಯ ಮೇಲಿನ ಶೀಟ್‌ ಹಾರಿ ಹೋಗಿವೆ.

 ನೆಲಕ್ಕುರುಳಿದ ದೈವಸ್ಥಾನದ ಕಲಶಗಳು

ನೆಲಕ್ಕುರುಳಿದ ದೈವಸ್ಥಾನದ ಕಲಶಗಳು

ಸಾಗರ್ ಚಂಡ ಮಾರುತ ಪರಿಣಾಮ ಬೀಸುತ್ತಿರುವ ಬಿರುಗಾಳಿಗೆ ಜಿಲ್ಲೆಯಲ್ಲಿ ಎರಡು ದೈವಸ್ಥಾನಗಳ ದ್ವಜಸ್ತಂಭ ಧರೆಗೆ ಉರುಳಿದೆ. ಮೂಲ್ಕಿ ಸಮೀಪದ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಧ್ವಜಸ್ತಂಭ ಮುರಿದು ದೈವಸ್ಥಾನದ ಮೇಲೆ ಬಿದ್ದಿದೆ.

ದೈವಸ್ಥಾನದ ಮೇಲಿನ ಕಲಶಗಳು ನೆಲಕ್ಕುರುಳಿದ್ದು, ತಾಮ್ರದ ಹೊದಿಕೆಗಳು ಮೇಲೆದ್ದಿವೆ. ಸುಮಾರು 40 ವರ್ಷಗಳ ಹಿಂದೆ ಈ ಧ್ವಜಸ್ತಂಭವನ್ನು ಕಾರ್ಕಳದಿಂದ ತಂದು ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ಈ ನಡುವೆ ಶನಿವಾರ ಬೀಸಿದ ಬಿರುಗಾಳಿಗೆ ಧ್ವಜಸ್ತಂಭ ನೆಲಕ್ಕುರುಳಿದೆ. ಜೆಸಿಬಿ ಮೂಲಕ ಧ್ವಜಸ್ತಂಭವನ್ನು ಮೇಲಕ್ಕೆತ್ತಲಾಗಿದ್ದು, ದೈವಸ್ಥಾನದ ಛಾವಣಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಧ್ವಜಸ್ತಂಭಕ್ಕೂ ಗಾಳಿ, ಮಳೆಯಿಂದ ಹಾನಿಯಾಗಿದೆ.

ಸುಮಾರು 35 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಧ್ವಜಸ್ತಂಭಕ್ಕೆ 15 ವರ್ಷಗಳ ಹಿಂದೆ ತಾಮ್ರ ಹೊದೆಸಲಾಗಿತ್ತು. ಭಾರೀ ಗಾಳಿ ಮತ್ತು ಮಳೆಗೆ ಧ್ವಜಸ್ತಂಭ ಬುಡದಲ್ಲಿಯೇ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿ ವಾಲಿ ನಿಂತಿದೆ.

ಮೇಲ್ಭಾಗದಲ್ಲಿ ತಗಡು ಶೀಟಿನ ಛಾವಣಿ ಇದ್ದುದರಿಂದ ಧ್ವಜಸ್ತಂಭವು ನೆಲಕ್ಕುರುಳಿಲ್ಲ. ಇಲ್ಲವಾದಲ್ಲಿ ದೈವಸ್ಥಾನದ ಗೋಪುರದ ಮೇಲೆ ಬಿದ್ದು ಹಾನಿಯಾಗುವ ಸಂಭವವಿತ್ತು. ಸುಮಾರು 3.5 ಲಕ್ಷ ರೂ. ನಷ್ಟ ಸಂಭವಿಸಿದೆ.

 ಮೀನುಗಾರಿಕೆ ನಿಷೇಧ

ಮೀನುಗಾರಿಕೆ ನಿಷೇಧ

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ 'ಸಾಗರ್‌' ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿದ್ದು, ಮುಂದಿನ 48 ತಾಸುಗಳ ಕಾಲ ಮೀನುಗಾರರು ಸಮುದ್ರಕ್ಕಿಳಿಯದಂತೆ ಮತ್ತು ಮೀನುಗಾರಿಕೆಗೆ ತೆರಳಿದ ಎಲ್ಲ ಮೀನುಗಾರಿಕೆ ದೋಣಿಗಳು ತಕ್ಷಣ ದಡ ಸೇರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ನಡುವೆ ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಕಾಲ ಮುಂಗಾರು ಪೂರ್ವ ಮಳೆ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+