ಇಬ್ಬರು ದಲಿತ ಬಾಲಕಿಯರ ಹತ್ಯೆ, ಮರಕ್ಕೆ ನೇತು ಹಾಕಿದ ಆರೋಪಿಗಳು
ಲಕ್ನೋ, ಸೆಪ್ಟೆಂಬರ್ 15: ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಹತ್ಯೆ ಮಾಡಲಾಗಿದೆ. ಶವಗಳನ್ನು ಲಖಿಂಪುರ ಖೇರಿ ಜಿಲ್ಲೆಯ ನಿಘಾಸನ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್ಪುರ್ ಮಜ್ರಾ ತಮೋಲಿ ಪೂರ್ವಾ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಬಾಲಕಿಯರ ಕುಟುಂಬಸ್ಥರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ಮೃತ ಸಹೋದರಿಯರ ಕುಟುಂಬವು ಮೂವರ ಮೇಲೆ ಅತ್ಯಾಚಾರ ಮತ್ತು ಕೊಲೆಯ ಆರೋಪವನ್ನು ಮಾಡಿದ್ದು, ಗ್ರಾಮದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ನಿಘಾಸನ್ ಕ್ರಾಸಿಂಗ್ನಲ್ಲಿ ಪ್ರತಿಭಟನೆ ನಡೆಸಿದೆ.
ಉತ್ತರ ಪ್ರದೇಶದಲ್ಲಿ 16 ವರ್ಷದ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ
ಲಖಿಂಪುರ ಖೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಂಜೀವ್ ಸುಮನ್, ಪೊಲೀಸ್ ಪಡೆಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಲಖನೌ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿ) ಲಕ್ಷ್ಮಿ ಸಿಂಗ್, ಎಎನ್ಐ ಜೊತೆ ಮಾತನಾಡಿ, ಲಖಿಂಪುರ ಖೇರಿಯ ಹಳ್ಳಿಯೊಂದರ ಹೊರಗಿನ ಹೊಲದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹಗಳು ಪತ್ತೆಯಾಗಿವೆ. ದೇಹಗಳ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಇತರ ವಿಷಯಗಳು ಖಚಿತವಾಗುತ್ತವೆ. ನಾವು ತನಿಖೆಯನ್ನು ತ್ವರಿತಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಸುಳ್ಳು ಜಾಹೀರಾತು ವ್ಯವಸ್ಥೆಯನ್ನು ಸುಧಾರಿಸಲ್ಲ
ಪ್ರತಿಭಟನಾನಿತರ ಜನರಿಗೆ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರು ರಸ್ತೆ ತಡೆಯನ್ನು ಕೈಬಿಟ್ಟು ಮರಣೋತ್ತರ ಪರೀಕ್ಷೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಈ ವಿಷಯದ ಬಗ್ಗೆ ಕಾಂಗ್ರೆಸ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದೆ. ಘಟನೆಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಲಖಿಂಪುರದಲ್ಲಿ (ಯುಪಿ) ಇಬ್ಬರು ಸಹೋದರಿಯರ ಹತ್ಯೆಯ ಘಟನೆ ಹೃದಯ ವಿದ್ರಾವಕವಾಗಿದೆ. ಆ ಹೆಣ್ಣು ಮಕ್ಕಳನ್ನು ಹಾಡಹಗಲೇ ಅಪಹರಿಸಲಾಗಿದೆ ಎಂದು ಸಂಬಂಧಿಕರು ಹೇಳುತ್ತಾರೆ. ಪ್ರತಿ ದಿನ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಸುಳ್ಳು ಜಾಹೀರಾತುಗಳನ್ನು ನೀಡುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವುದಿಲ್ಲ. ಅಷ್ಟಕ್ಕೂ, ಯುಪಿಯಲ್ಲಿ ಮಹಿಳೆಯರ ವಿರುದ್ಧ ಘೋರ ಅಪರಾಧಗಳು ಏಕೆ ಹೆಚ್ಚುತ್ತಿವೆ? ಎಂದು ಪ್ರಶ್ನಿಸಿದ್ದಾರೆ.
ಹೊಲಕ್ಕೆ ಕರೆದೊಯ್ದು ಅತ್ಯಾಚಾರ
ಇದೇ ಲಿಖಿಂಪುರಕೇರಿಯಲ್ಲಿ ಮೂರು ದಿನದ ಹಿಂದೆ (ಸೆಪ್ಟೆಂಬರ್ 11)ರಂದು ಒಬ್ಬ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿ ಅದೇ ಗ್ರಾಮದವನಾಗಿದ್ದು, ತನ್ನ ಮಗಳನ್ನು ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಅಪ್ರಾಪ್ತರ ತಂದೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಜಹಾನಾಬಾದ್) ಪ್ರಭಾಸ್ ಚಂದ್ರ ತಿಳಿಸಿದ್ದರು.
ಪೊಲೀಸರಿಗೆ ವಿಷಯ ತಿಳಿಸಿದರೆ ಕೊಲೆ ಬೆದರಿಕೆ
ಬೆಳಗ್ಗೆ ಬಾಲಕಿ ಕಾಣೆಯಾಗಿದ್ದಾಳೆಂದು ತಿಳಿದ ಆಕೆಯ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದು, ಆಕೆಯನ್ನು ಹೊಲದಲ್ಲಿ ಪತ್ತೆ ಹಚ್ಚಿದ್ದರು. ಪ್ರಜ್ಞೆ ಬಂದ ನಂತರ ಆಕೆ ತನ್ನ ಪೋಷಕರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಅತ್ಯಾಚಾರ ಮಾಡಿರುವುದನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎಂದು ಆಕೆಯ ತಂದೆ ಆರೋಪಿಸಿದ್ದರು.
ಉತ್ತರಪ್ರದೇಶದಲ್ಲೇ ಕೊಲೆ, ಅತ್ಯಾಚಾರ ಹೆಚ್ಚು
2021ರ ಭಾರತದ ಅಪರಾಧಗಳ ವರದಿಯ ಮಾಹಿತಿಯ ಪ್ರಕಾರ, 2020 ರಿಂದ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯದ ಅಪರಾಧಗಳಲ್ಲಿ ಶೇಕಡಾ 15.3 ರಷ್ಟು ಹೆಚ್ಚಳವಾಗಿದೆ. ಈ ವರದಿಯಾದ ಪ್ರಕರಣಗಳಲ್ಲಿ ಶೇಕಡಾ 7.4 ಪ್ರಕರಣಗಳು ಅತ್ಯಾಚಾರ ಪ್ರಕರಣಗಳಾಗಿವೆ. ಉತ್ತರ ಪ್ರದೇಶದಲ್ಲಿ 2020 ರಲ್ಲಿ 2,845 ಅತ್ಯಾಚಾರಗಳು ನಡೆದಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ಅದೇ ಅವಧಿಯಲ್ಲಿ, ಪರಿಶಿಷ್ಟ ಜಾತಿಗಳ ವಿರುದ್ಧ ನಡೆದ ಅಪರಾಧಗಳು 3,739 ರಷ್ಟಿದೆ. ದೇಶದಲ್ಲಿ ಅತಿ ಹೆಚ್ಚು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳಲ್ಲಿ ಉತ್ತರಪ್ರದೇಶದಲ್ಲಿ ಶೇಕಡಾ 8.4 ರಷ್ಟಿದೆ.