ಹಿಂದೂ ಕಾರ್ಯಕರ್ತರ ಸಾವಿನ ಸರಣಿ
2016ನೇ ಇಸವಿ ಕರ್ನಾಟಕದ ವಿವಿಧೆಡೆ ಬಿಜೆಪಿ-ಆರ್ ಎಸ್ ಎಸ್ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಕೆಲವರು ಕೊಲೆಯಾಗಿದ್ದರೆ, ಕೆಲವರ ಸಾವು ಅನುಮಾನಾಸ್ಪದವಾಗಿದೆ. ಒಟ್ಟಿನಲ್ಲಿ ವರ್ಷವಿಡೀ ಚರ್ಚೆಯಲ್ಲಿದ್ದ ವಿಷಯ ಇದು.
ಈ ವರ್ಷ ಅತಿ ಹೆಚ್ಚು ಚರ್ಚೆಯಾಗಿದ್ದು ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರ ಸಾವಿನ ವಿಚಾರ. ಈ ಬಗ್ಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ ಅವರೇ ಹೇಳಿಕೆ ನೀಡಿ, ಕೆಲವು ಪ್ರಕರಣಗಳಲ್ಲಿ ಹತ್ಯೆಯಾಗಿರುವುದು ಹೌದು. ಆದರೆ ಇನ್ನೂ ಕೆಲವು ಸನ್ನಿವೇಶದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಯಾಗಿದೆ ಎಂದು ತಿಳಿಸಿದರು.
ಆದರೆ, ಪದೇ ಪದೇ ಶೀರ್ಷಿಕೆಯಾದದ್ದು ಮಾತ್ರ ಬಿಜೆಪಿ-ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆ ವಿಚಾರ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ರುದ್ರೇಶ್ ಕೊಲೆ ಪ್ರಕರಣ ಎಲ್ಲೆಲ್ಲೋ ಸುತ್ತಾಡಿ, ಬಂದ್ ಆಗಿ, ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯ ಮಾಡಿದರು. ಇದೀಗ ಆ ಹತ್ಯೆಯ ತನಿಖೆಗೆ ಮುಂದಾಗಿದೆ ರಾಷ್ಟ್ರೀಯ ತನಿಖಾ ದಳ.[ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ: ಪ್ರತಾಪ್ ಸಿಂಹ]
ತನಿಖೆ ದಡ ಮುಟ್ಟುತ್ತೋ ತಾರ್ಕಿಕ ಅಂತ್ಯ ಕಾಣುತ್ತೋ ಗೊತ್ತಿಲ್ಲ. ಆದರೆ ರುದ್ರೇಶ್ ಹತ್ಯೆ ಹಿಂದೆ ಕೆಲಸ ಮಾಡಿದ ಮೆದುಳುಗಳು ಕೋಮು ವಿಷವನ್ನು ಮೆತ್ತಿಕೊಂಡಿದ್ದವೋ ಏನೋ ಇನ್ನೂ ತನಿಖೆಯಿಂದ ಪೂರ್ಣವಾಗಿ ಬಯಲಾಗಬೇಕಿದೆ. ಅಂದಹಾಗೆ, ಈ ವರ್ಷ ಹತ್ಯೆಯಾದ ಅಥವಾ ಅನುಮಾನಾಸ್ಪದ ಸಾವಿಗೀಡಾದ ಬಿಜೆಪಿ-ಆರ್ ಎಸ್ ಎಸ್ ಕಾರ್ಯಕರ್ತರ ಮಾಹಿತಿ ಇಲ್ಲಿದೆ.[ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ]
ಮೈಸೂರಿನ ರಾಜು
ಕ್ಯಾತಮಾರನಹಳ್ಳಿ ವಾಸಿ, ವಿಶ್ವ ಹಿಂದೂ ಪರಿಷತ್-ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ಮೈಸೂರಿನ ಎಂ.ಜಿ.ರಸ್ತೆಯ ವಿನಾಯಕ ಟೀ ಸ್ಟಾಲ್ ಬಳಿ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲ್ಲಲಾಗಿತ್ತು.
ಧಾರವಾಡದ ಯೋಗೇಶ್ ಗೌಡ
ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡ ಜೂನ್ 15, 2016ರಲ್ಲಿ ಹತ್ಯೆಯಾಗಿದ್ದರು. ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಸದಸ್ಯರಾಗಿದ್ದ ಯೋಗೇಶ್ ಗೌಡ, ಸಪ್ತಾಪುರ ಪ್ರದೇಶದಲ್ಲಿರುವ ಉದಯ್ ಜಿಮ್ ನಲ್ಲಿ ಕೊಲೆಯಾಗಿದ್ದರು.
ಮಡಿಕೇರಿಯ ಪ್ರವೀಣ್ ಪೂಜಾರಿ
ಮಡಿಕೇರಿಯ ಗುಡ್ಡೆಹೊಸೂರು ಸಮೀಪದ ಅತ್ತೂರು ಗ್ರಾಮದ, ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದ ಪ್ರವೀಣ್ ಪೂಜಾರಿ 2016ರ ಅಗಸ್ಟ್ ನಲ್ಲಿ ಕೊಲೆಯಾದರು. ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಪ್ರವೀಣ್ ಪೂಜಾರಿ ಅವರ ಹತ್ಯೆಯಾಗಿತ್ತು.
ಉಡುಪಿಯ ಪ್ರವೀಣ ಪೂಜಾರಿ
ಬಿಜೆಪಿ ಕಾರ್ಯಕರ್ತರಾಗಿದ್ದ ಪ್ರವೀಣ ಪುಜಾರಿ ದನ ಸಾಗಿಸುವಾಗ ಉಡುಪಿಯ ಸಂತೆ ಕಟ್ಟೆ ಬಳಿ ಬಜರಂಗ ದಳ ಹಾಗೂ ವಿಎಚ್ ಪಿ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಈ ಘಟನೆ ಆಗಸ್ಟ್ 2016ರಲ್ಲಿ ನಡೆದಿತ್ತು.
ಕಾರ್ತಿಕ್
ಕೊಣಾಜೆ ಪಜೀರಿನ ಸುದರ್ಶನ ನಗರ ನಿವಾಸಿ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಉಮೇಶ್ ಪೂಜಾರಿ ಅವರ ಪುತ್ರರಾದ ಕಾರ್ತಿಕ್ ರಾಜ್ (27) ಅಸೈಗೊಳಿ ಬಳಿ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಕಾರ್ತಿಕ್ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕೊಣಾಜೆ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ಘಟನೆಯನ್ನು ಮೊದಲಿಗೆ ಹಿಟ್ ಆಂಡ್ ರನ್ ಎಂದು ಪೊಲೀಸರು ಹೇಳಿದ್ದರು.
ಮಾಗಳಿ ರವಿ
ಪಿರಿಯಾಪಟ್ಟಣದ ಯುವ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಾಗಳಿ ರವಿ ನವೆಂಬರ್ 4ರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಪಿರಿಯಾಪಟ್ಟಣದಿಂದ ತಮ್ಮ ಸ್ವಗ್ರಾಮ ಮಾಗಳಿಗೆ ರವಿ ತೆರಳುತ್ತಿದ್ದಾಗ ಮಧ್ಯರಾತ್ರಿ ವೇಳೆ ಈ ಘಟನೆ ಸಂಭವಿಸಿತ್ತು.
ರುದ್ರೇಶ್
ಹೊಸ ಗಣವೇಷ ತೊಟ್ಟು ಪಥ ಸಂಚಲನ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತ 35 ವರ್ಷ ವಯಸ್ಸಿನ ರುದ್ರೇಶ್ ಅವರನ್ನು ಅಕ್ಟೋಬರ್ 16ರಂದು ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಚ್ಚಿ ಕೊಂದಿದ್ದರು.
ಚಿಕ್ಕತಿಮ್ಮೇಗೌಡ
ಬೆಂಗಳೂರಿನಲ್ಲಿ ಕಾಮಾಕ್ಷಿ ಪಾಳ್ಯ ಸಮೀಪದ ಲಕ್ಷ್ಮಣ ನಗರ ಬಳಿ ನವೆಂಬರ್ ನಲ್ಲಿ ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಅವರನ್ನು ನವೆಂಬರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.
ಸುನಿಲ್ ಡೋಂಗ್ರೆ
ಬೀದರ್ ನ ಔರಾದ್ ತಾಲೂಕಿನ ಸೋನಲ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಸುನಿಲ್ ಡೋಂಗ್ರೆ ಅವರನ್ನು ನವೆಂಬರ್ ನಲ್ಲಿ ಇರಿದು ಕೊಲೆ ಮಾಡಲಾಗಿತ್ತು.