ಮತದಾರರ ಮಾಹಿತಿ ಕಳವು ಪ್ರಕರಣ: ಎಲ್ಲರ ತನಿಖೆ ಆಗಲಿ ಎಂದ ಅಶ್ವತ್ಥನಾರಾಯಣ
ರಾಮನಗರ, ನವೆಂಬರ್ 23: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರ ಮೇಲೂ ತನಿಖೆ ಆಗಲಿ, ರಾಜ್ಯದಲ್ಲಿ ಈಗ ಕಾಂಗ್ರೆಸ್ ಅಸಹಾಯಕ ಸ್ಥಿತಿಯಲ್ಲಿದೆ. ಅಡ್ಡದಾರಿ ಹಿಡಿದು ಚುನಾವಣೆ ನಡೆಸಬೇಕಾದ ಪರಿಸ್ಥಿತಿ ಅವರಿಗಿದೆ ಎಂದು ಸಚಿವ ಅಶ್ವಥ್ ನಾರಾಯಣ ಕಿಡಿಕಾರಿದರು.
ಈ ಕುರಿತು ರಾಮನಗರದಲ್ಲಿ ಬುಧವಾರ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು, ಮತದಾರರ ಮಾಹಿತಿ ದುರ್ಬಳಕೆ ಆಗಿದ್ದರೆ ಕ್ರಮ ಆಗಲಿ. ಕಾಂಗ್ರೆಸ್ನವರು ಅಪರೂಪಕ್ಕೆ ಒಳ್ಳೆ ವಿಚಾರಗಳ ಬಗ್ಗೆ ಮಾತನಾಡ್ತಿದ್ದಾರೆ. ಪಾರದರ್ಶಕ ತನಿಖೆಗೆ ನಾನೂ ಕೂಡಾ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ. ಈಗ ಓಟರ್ ಐಡಿ ಬಗ್ಗೆ ಮಾತನಾಡಲು ಎದ್ದುನಿಂತಿರೋ ಮಹಾನ್ ನಾಯಕರು ಪ್ರಾಮಾಣಿಕವಾಗಿ ಒಳ್ಳೆಯ ರೀತಿ ಕೆಲಸ ಮಾಡಿದ್ದಾರಾ.? ಮಾಡಿದ್ದರೆ ಇಂತಹ ಸಮಸ್ಯೆಗಳು ಇರ್ತಿದ್ವಾ.? ಎಂದು ಪ್ರಶ್ನಿಸಿದ್ದಾರೆ.
ರಾಮನಗರ: ಜಿಲ್ಲಾ ಪಂಚಾಯತ್ ಆಡಳಿತ ವ್ಯವಸ್ಥೆಯನ್ನು ಪ್ರಶಂಸಿಸಿದ 16 ದೇಶದ ಪ್ರತಿನಿಧಿಗಳು
ಈಗ ಮಾತನಾಡುವ ಮಹಾನುಭಾವರು ಮಾಡಿರುವ ಕೆಟ್ಟ ಕೆಲಸ, ಕಾನೂನು ಬಾಹಿರ ಚಟುವಟಿಕೆ, ನಡೆದು ಬಂದ ಹಾದಿಯನ್ನ ಅವಲೋಕಿಸಲಿ. ಅದೆಲ್ಲವನ್ನ ತನಿಖೆ ಮಾಡಿದ್ರೆ ಸತ್ಯ ಹೊರಬರಲಿದೆ. ನಾನು ಪಾರದರ್ಶಕವಾಗಿ ಬದುಕಿದ್ದೇನೆ. ಎಲ್ಲಾ ತನಿಖೆಗೂ ನಾನು ಸಿದ್ದನಿದ್ದೇನೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಅಸಹಾಯ ಸ್ಥಿತಿಯಲ್ಲಿದೆ. ಅಡ್ಡದಾರಿ ಹಿಡಿದು ಚುನಾವಣೆ ನಡೆಸಬೇಕಾದ ಪರಿಸ್ಥಿತಿ ಅವರಿಗಿದೆ. ಸಂಪೂರ್ಣ ತನಿಖೆ ನಡೆಸಿದ್ರೆ ಕಾಂಗ್ರೆಸ್ ನವರು ಬಯಲಿಗೆ ಬರ್ತಾರೆ ಎಂದರು.
ಇನ್ನೂ ಕಾಂಗ್ರೆಸ್ ನಾಯಕರು ಇದ್ದಕ್ಕಿದ್ದಂತೆ ಈ ರೀತಿಯ ವಿಚಾರ ಉದ್ಭವ ಮಾಡ್ತಾರೆ. ಷಡ್ಯಂತ್ರ, ಕುತಂತ್ರಗಳನ್ನ ಮಾಡ್ತಿದ್ದಾರೆ. ಕಾಂಗ್ರೆಸ್ ನ ಎಲ್ಲಾ ಆಟಗಳನ್ನು ಜನ ನೋಡ್ತಿದ್ದಾರೆ. ಅಶ್ವಥ್ ನಾರಾಯಣ್ ಮೇಲೆ ಮಾಡ್ತಿರುವ ಆರೋಪಗಳನ್ನು ನೋಡ್ತಿದ್ದಾರೆ, ಅವರೇ ಉತ್ತರ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.
ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವತ್ ನಾರಾಯಣ ಏಕಾಂಗಿಯಾಗಿದ್ದಾರಾ ಎಂಬ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ನಾನು ಏಕಾಂಗಿಯಾಗಿರುವ ಪ್ರಶ್ನೆಯೇ ಇಲ್ಲ. ನನ್ನ ಶಕ್ತಿ ಮೇಲೆ ಭರವಸೆ ಇದೆ, ಎಲ್ಲವನ್ನೂ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಮತದಾರರ ಮಾಹಿತಿ ಕಳವು ಹಗರಣ ಏನು?
2018 ರಲ್ಲಿ ಚಿಲುಮೆ ಸಂಸ್ಥೆಯು SVEEP ಗಾಗಿ ಉಚಿತ ಸ್ವಯಂಪ್ರೇರಿತ ಸೇವೆಯನ್ನು ನೀಡುತ್ತದೆ ಎಂದು ಚುನಾವಣಾ ಆಯೋಗ ಮತ್ತು BBMP ಯನ್ನು ಸಂಪರ್ಕಿಸಿದೆ. ಚಿಲುಮೆ ಅವರ ಮನವಿ ಆಧರಿಸಿ, ಈ ವರ್ಷದ ಜನವರಿ 29 ರಂದು, ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ERO) ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಬಿಬಿಎಂಪಿಗೆ ಸಹಾಯ ಮಾಡಲು ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆಗೆ ಅನುಮತಿ ನೀಡಿದ್ದಾರೆ. ಅಲ್ಲದೇ ಸಮೀಕ್ಷೆಯನ್ನ ಉಚಿತವಾಗಿ ನಡೆಸುವುದಾಗಿ ಎನ್ ಜಿ ಒ ಹೇಳಿಕೊಂಡಿದೆ. ಆದರೆ ನಂತರದ ದಿನಗಳಲ್ಲಿ, ನಿಯೋಜಿತ ಕ್ಷೇತ್ರ ಕಾರ್ಯಕರ್ತರು ಜಾತಿ, ವಯಸ್ಸು, ಲಿಂಗ, ಉದ್ಯೋಗ, ಶಿಕ್ಷಣ ವಿವರಗಳು, ಆಧಾರ್ ಸಂಖ್ಯೆಗಳು, ಫೋನ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳನ್ನು ಒಳಗೊಂಡಂತೆ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದು, ಸಂಸ್ಥೆಯು ಅಕ್ರಮವಾಗಿ ಸಂಗ್ರಹಿಸಿದ ಈ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ಗೂ ಮೊದಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಇನ್ನೂ ಮತದಾರರ ಪರಿಷ್ಕರಣೆಯಲ್ಲಿ ನಡೆದಿರುವ ಅಕ್ರಮ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಜಟಾಪಟಿ ಮತ್ತಷ್ಟು ತೀವ್ರಗೊಂಡಿದ್ದು, ಕಾಂಗ್ರೆಸ್ ನಾಯಕರು ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಆಗಿರುವ ಘಟಾನವಳಿಗಳನ್ನ ಉಲ್ಲೇಖಿಸಿ ಬಿಜೆಪಿ ಮಂಗಳವಾರ ರಾತ್ರಿ ಫ್ಯಾಕ್ಸ್ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.