ರಾಮನಗರ: ಜಿಲ್ಲಾ ಪಂಚಾಯತ್ ಆಡಳಿತ ವ್ಯವಸ್ಥೆಯನ್ನು ಪ್ರಶಂಸಿಸಿದ 16 ದೇಶದ ಪ್ರತಿನಿಧಿಗಳು
ರಾಮನಗರ, ನವೆಂಬರ್ 16: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ಮೆಂಟ್ ಮತ್ತು ಪಂಚಾಯತ್ ರಾಜ್ ಸಂಸ್ಥೆವತಿಯಿಂದ 16 ರಾಷ್ಟ್ರಗಳ 22 ಮಂದಿ ಅಂತಾರಾಷ್ಟ್ರೀಯ ಪ್ರತಿನಿಧಿಗಳು ರಾಮನಗರ ಜಿಲ್ಲೆಗೆ ಭೇಟಿ ನೀಡಿದ್ದು, ಇಲ್ಲಿನ ಆಡಳಿತ , ವಿಶೇಷ ಚಟುವಟಿಕೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
ಭಾರತದ ಆಡಳಿತ ವ್ಯವಸ್ಥೆ ಹಾಗೂ ಜನಪ್ರಿಯ ಯೋಜನೆಗಳ ಅಧ್ಯಯನ ಮಾಡುವ ಮೂಲಕ ತಮ್ಮ ದೇಶದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಭಾರತ ಪ್ರವಾಸದಲ್ಲಿರುವ ಪ್ರತಿನಿಧಿಗಳು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಕಾರ್ಯವೈಖರಿಯ ಅಧ್ಯಯನ ನಡೆಸುತ್ತಿದ್ದಾರೆ. ಈ ಪ್ರವಾಸದ ಭಾಗವಾಗಿ ಈ ಪ್ರತಿನಿಧಿಗಳು ಮಂಗಳವಾರ ರಾಮನಗರಕ್ಕೆ ಭೇಟಿ ನೀಡಿದರು.
ಗ್ರಾಮೀಣಾ ಭಾರತದ ವೈವಿದ್ಯಮಯ ಕೌಶಲ್ಯಗಳ ಮತ್ತು ಶಿಸ್ತಿನ ಕುರಿತು ಅಧ್ಯಯನಕ್ಕಾಗಿ ರಾಮನಗರ ಜಿಲ್ಲಾ ಪಂಚಾಯಿತಿಗೆ ಪ್ರವಾಸ ಕೈಗೊಂಡಿದ್ದಾರೆ. ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿದ ಅಂತರಾಷ್ಟ್ರೀಯ ಪ್ರತಿನಿಧಿಗಳಿಗೆ ಗ್ರಾಮ ಪಂಚಾಯತಿ ಆಡಳಿತ ನಿರ್ವಹಣೆ, ಯೋಜನೆಗಳ ಅನುಷ್ಟಾನ, ತೆರಿಗೆ ಸಂಗ್ರಹ, ಇ-ಆಡಳಿತ, ಬಾಪೂಜಿ ಸೇವೆ ಕೇಂದ್ರ, ಪಂಚತಂತ್ರ 2.೦, ಇ-ಸ್ವತ್ತು, ಇ-ಬೆಳಕು, ಐಪಿಜಿಆರ್ಎಸ್, ನರೇಗಾ, ಇ ಗ್ರಾಮ ಸ್ವ-ರಾಜ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ಪಡೆದುಕೊಂಡರು.

ಗ್ರಾಮ ಪಂಚಾಯಿತಿ ಕಾರ್ಯವೈಖರಿಗೆ ಮೆಚ್ಚುಗೆ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಪಂಚಾಯತಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಕೇಳಿದ ವಿವಿಧ ದೇಶದ ಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ಯಾನುಮಂಗಲ ಗ್ರಾಮದಲ್ಲಿ ಸ್ಮಾರ್ಟ್ ಅಂಗನವಾಡಿಗೆ ಭೇಟಿ ನೀಡಿ ಸ್ಮಾರ್ಟ್ ಕ್ಲಾಸ್ ಬಗ್ಗೆ ಮಾಹಿತಿ ಪಡೆದರು. ನಂತರ ಜಿಲ್ಲಾ ಪಂಚಾಯಿತಿಗೆ ಭವನಕ್ಕೆ ಭೇಟಿ ನೀಡಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಅವರಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ವಿಶೇಷ ಚಟುವಟಿಕೆ ಮತ್ತು ಯೋಜನೆಯ ಕುರಿತು ಮಾಹಿತಿ ಪಡೆದರು.

ಪ್ರತಿನಿಧಿಗಳು ವೀಕ್ಷಿಸಿದ ಕಾಮಗಾರಿಗಳು
ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆ ಹಾಗೂ ಶ್ಯಾನುಮಂಗಲ ಗ್ರಾಮದ ಸ್ಮಾರ್ಟ್ ಕ್ಲಾಸ್ ಅನ್ನು ವೀಕ್ಷಿಸಿದರು. ಹರಿಶ್ಚಂದ್ರ ಗ್ರಾಮ ಪಂಚಾಯತಿ ಸ್ವ ಸಹಾಯ ಸಂಘದ ಮಹಿಳೆಯರೇ ನಿರ್ಮಿಸಿರುವ ಸಂಜೀವಿನಿ ಕಟ್ಟಡ, ವಿಭೂತಿಕೆರೆ ಗ್ರಾಮ ಪಂಚಾಯತಿಯ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಗೊಂಡ ಜಾನಪದ ಲೋಕದ ಸರ್ಕಾರಿ ಕಟ್ಟೆ ಕಾಮಗಾರಿಯನ್ನು ವೀಕ್ಷಿಸಿದರು.

ಮಹಿಳೆಯರು ನಡೆಸುತ್ತಿರುವ ಉದ್ಯಮಗಳ ಪರಿಚಯ
ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿಯ ಸ್ವ ಸಹಾಯ ಸಂಘದ ಮಹಿಳೆಯರು ನಿರ್ಮಿಸುತ್ತಿರುವ ಗೊಂಬೆ ತಯಾರಿಕೆ ಘಟಕ, ಚನ್ನಪಟ್ಟಣ ತಾಲ್ಲೂಕಿನ ಕ್ರಾಫ್ಟ್ ಪಾರ್ಕ್ ಬೇಟಿ ನೀಡಿ ವಿಶ್ವವಿಖ್ಯಾತ ಅಟಿಕೆ ಬೊಂಬೆಗಳ ತಯಾರಿಕೆಯ ಪರಿಚಯ ಮಾಡಿಕೊಂಡರು. ಸ್ವ ಸಹಾಯ ಸಂಘದ ಮಹಿಳೆಯರೇ ತಯಾರಿಸುತ್ತಿರುವ ಆಯಿಲ್ ಎಕ್ಸ್ಟ್ರಾಕ್ಷನ್ ಯುನಿಟ್ ಹಾಗೂ ಚುಕ್ಕಿ ಮತ್ತು ನರ್ಸರಿಗೆ ಭೇಟಿ ನೀಡಿದರು.

ಜಿಲ್ಲೆಗೆ ಭೇಟಿ ನೀಡಿದ ರಾಷ್ಟ್ರ
ಅರ್ಜಂಟೀನಾ, ಕ್ಯೂಬಾ, ಕೀನ್ಯಾ, ಉಗಾಂಡ, ಮಾಲ್ಡೀವ್ಸ್, ಶ್ರೀಲಂಕಾ, ಮೊಜಾಂಬಿಕ್, ಸೌತ್ ಸೂಡಾನ್, ತಜಕಿಸ್ಥಾನ್, ಜಾಂಬಿಯಾ, ಮಲಾವಿ , ಗಾನಾ, ಇಥಿಯೋಪಿಯಾ, ಬಾಂಗ್ಲಾದೇಶ, ತಾಂಜೇನಿಯ ಮತ್ತು ನೈಜೇರಿಯಾ ದೇಶದ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿನಿಧಿಗಳು ಅಂತಾರಾಷ್ಟ್ರೀಯ ತಂಡದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications