ರಾಜೀವ್ ಗಾಂಧಿ ಪುಣ್ಯ ತಿಥಿ: ಕುಮಾರಸ್ವಾಮಿ ಪ್ರಮಾಣ ವಚನ ಮುಂದೂಡಿಕೆ
ಬೆಂಗಳೂರು, ಮೇ 19: ಸೋಮವಾರ (ಮೇ 21)ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಆಗಿರುವ ಕಾರಣ ಕುಮಾರಸ್ವಾಮಿ ಅವರ ಪ್ರಮಾಣ ವಚನ ಮುಂದೂಡಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮವನ್ನು ಬುಧವಾರಕ್ಕೆ ಮುಂದೂಡಲಾಗಿದೆ, ಸಮಯ ಇನ್ನೂ ನಿರ್ಧರಿಸಿಲ್ಲ ಎಂದರು.

ಈಗಾಗಲೇ ಕಂಠೀರವ ಕ್ರೀಡಾಂಗಣವನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆಂದು ಕಾಯ್ದಿರಸಲಾಗಿದೆ. ಕಾರ್ಯಕ್ರಮಕ್ಕೆ ಕರೆಯಬೇಕಿರುವ ಅತಿಥಿಗಳ ಪಟ್ಟಿಯನ್ನೂ ಎರಡೂ ಪಕ್ಷಗಳ ನಾಯಕರು ಅಂತಿಮಗೊಳಿಸಿದ್ದಾರೆ.
ಅಶೋಕ ಹೋಟೆಲ್ನಲ್ಲಿ ಎರಡೂ ಪಕ್ಷದ ಶಾಸಕರು, ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಸಭೆಯಲ್ಲಿ ಶಿಸ್ತು ಸಮಿತಿ ಹಾಗೂ ಸಮನ್ವಯ ಸಮಿತಿಯ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆಶಿ, ಪರಮೇಶ್ವರ್, ಸಿಂಧ್ಯ, ಗುಲಾಂ ನಬಿ ಆಜಾದ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಸಚಿವ ಸಂಪುಟದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಬುಧವಾರದಂದು ಎಷ್ಟು ಜನ ಸಚಿವ ಸಂಪುಟ ಸೇರಬೇಕು ಹಾಗೂ ಯಾರ್ಯಾರು ಸೇರಬೇಕು ಎಂಬ ಬಗ್ಗೆಯೂ ನಿರ್ಣಯ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಭಾನುವಾರದಂದು ಹೊರಬೀಳಲಿದೆ.
ಸೋಮವಾರದಂದು ಕುಮಾರಸ್ವಾಮಿ ಅವರು ದೆಹಲಿಗೆ ತೆರಳಲಿದ್ದು, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.












Click it and Unblock the Notifications