ಆಕ್ಸಿಜನ್, ಬೆಲೆ ಇಳಿಕೆ, ಉದ್ಯೋಗ ಇಲ್ಲ ಓನ್ಲಿ ಹಿಂದೂ-ಮುಸ್ಲಿಂ ಬಡಿದಾಟ: ಡಿಕೆಶಿ ವ್ಯಂಗ್ಯ
ಬೆಂಗಳೂರು ಮಾರ್ಚ್ 24: 'ಕೋವಿಡ್ ಸೋಂಕಿತರಿಗೆ ಬಿಜೆಪಿಯಿಂದ ಆಕ್ಸಿಜನ್ ಒದಗಿಸಲಾಗಲಿಲ್ಲ, ಅವರಾದರೂ ಏನು ಮಾಡಿಯಾರು? ಹಣದುಬ್ಬರ ನಿಯಂತ್ರಿಸಲು ಬಿಜೆಪಿಯಿಂದ ಆಗಲಿಲ್ಲ, ಅವರಾದರೂ ಏನು ಮಾಡಿಯಾರು? ಬಿಜೆಪಿಯು ಉದ್ಯೋಗ ಸೃಷ್ಟಿ ಮಾಡಲಿಲ್ಲ, ರೈತರಿಗೂ ನೆರವಾಗಲಿಲ್ಲ. ಅವರಾದರೂ ಏನು ಮಾಡಿಯಾರು? ಅವರು ಮಾಡುವುದು ಒಂದೇ, ಹಿಂದೂ-ಮುಸಲ್ಮಾನರ ನಡುವೆ ಜಗಳ ಹುಟ್ಟುಹಾಕುವುದು' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 'ಕೂ' ನಲ್ಲಿ ದೂರಿದ್ದಾರೆ.
ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಗುದ್ದಾಟ ಮುಂದುವರೆದಿದೆ. ಹಿಜಾಬ್ ಕಿಚ್ಚು ಕೊಂಚ ತಣ್ಣಗಾಗಿದೆ ಎನ್ನುವಷ್ಟರಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಧರ್ಮ ಧರ್ಮಗಳ ನಡುವೆ ಬಿರುಕು ಮೂಡಿಸುತ್ತಿದೆ. ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಈ ಕಿಚ್ಚು ಸದ್ಯ ವ್ಯಾಪಾರಕ್ಕೂ ಅಂಟಿಕೊಂಡಿದೆ. ಕರಾವಳಿಯ ದೇವಸ್ಥಾನಗಳ ಜಾತ್ರೋತ್ಸವದ ವೇಳೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಹಾಕಿರುವ ವಿಚಾರ ರಾಜ್ಯದಾದ್ಯಂತ ದೊಡ್ಡ ಚರ್ಚೆಯನ್ನು ಉಂಟು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕರು ರಾಜ್ಯದಲ್ಲಿ ಶಾಂತಿ ಕದಡುವಂತ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
Koo Appಕೋವಿಡ್ ಸೋಂಕಿತರಿಗೆ ಬಿಜೆಪಿಯಿಂದ ಆಕ್ಸಿಜನ್ ಒದಗಿಸಲಾಗಲಿಲ್ಲ, ಅವರಾದರೂ ಏನು ಮಾಡಿಯಾರು? ಹಣದುಬ್ಬರ ನಿಯಂತ್ರಿಸಲು ಬಿಜೆಪಿಯಿಂದ ಆಗಲಿಲ್ಲ, ಅವರಾದರೂ ಏನು ಮಾಡಿಯಾರು? ಬಿಜೆಪಿಯು ಉದ್ಯೋಗ ಸೃಷ್ಟಿ ಮಾಡಲಿಲ್ಲ, ರೈತರಿಗೂ ನೆರವಾಗಲಿಲ್ಲ. ಅವರಾದರೂ ಏನು ಮಾಡಿಯಾರು? ಅವರು ಮಾಡುವುದು ಒಂದೇ, ಹಿಂದೂ-ಮುಸಲ್ಮಾನರ ನಡುವೆ ಜಗಳ ಹುಟ್ಟುಹಾಕುವುದು.- D K Shivakumar (@dkshivakumar_official) 24 Mar 2022
ಕೊರೊನಾ ಉತ್ತುಂಗದಲ್ಲಿದ್ದಾಗ ಕೋವಿಡ್ ಸೋಂಕಿತರು ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದರು. ಕ್ರಮೇಣ ಆಕ್ಸಿಜನ್ ವ್ಯವಸ್ಥೆ ಮಾಡಲಾಯಿತಾದರು ಆಕ್ಸಿಜನ್ ಕೊರತೆ ಕಮಲ ಪಾಳಯಕ್ಕೆ ಕಪ್ಪು ಚುಕ್ಕೆಯಾಗಿ ಉಳಿದಿದೆ. ಇನ್ನೂ ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಪೆಟ್ರೋಲ್-ಡಿಸೇಲ್, ಅಡುಗೆ ಅನಿಲ, ಆಹಾರ ಪದಾರ್ಥಗಳ ಬೆಲೆ ಗಗಕ್ಕೇರಿದೆ. ಸರ್ಕಾರ ಈವರೆಗೆ ಯಾವುದೇ ನೆರವು ನೀಡಿಲ್ಲ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನೂ ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದಕ್ಕೂ ಬಿಜೆಪಿ ಈವರೆಗೆ ಸೂಕ್ರ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ ಹಿಜಾಬ್ ವಿರುದ್ಧ ಕಾನೂನು ಮತ್ತು ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಮಾಡುವ ಮೂಲಕ ಹಿಂದೂ-ಮುಸಲ್ಮಾನರ ನಡುವೆ ಜಗಳ ಹುಟ್ಟುಹಾಕುವುದನ್ನು ಮಾಡುತ್ತಿದೆ ಎಂದು ಡಿಕೆ ಶಿವಕುಮಾರ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಕರಾವಳಿಯಲ್ಲಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಸದ್ಯ ಸಿಲಿಕಾನ್ ಸಿಟಿಯತ್ತ ವಾಲಿದೆ. ಬೆಂಗಳೂರಿನಲ್ಲಿಯೂ ಹಿಂದೂ ಸಂಘಟನೆಗಳು ಬಹಿಷ್ಕಾರ ಚಳವಳಿ ಶುರು ಮಾಡಿದ್ದಾರೆ. ಕೆಲ ಹಿಂದೂ ದೇಗುಲಗಳಿಗೆ ಸೇರಿದ ಅಂಗಡಿಗಳಿಂದ ಮುಸ್ಲಿಮರನ್ನು ಹೊರಹಾಕುವಂತ ಕೆಲಸಗಳು ಆಗಿರುವುದು ಕಂಡುಬಂದಿದೆ. ಉಪ್ಪಾರಪೇಟೆಯಲ್ಲಿ 8 ಮುಸ್ಲಿಮರ ಅಂಗಡಿಗಳನ್ನು ಹಿಂದೂ ಕಾರ್ಯಕರ್ತರು ಬಂದ್ ಮಾಡಿಸಿದ್ದಾರೆ. ಉಪ್ಪಾರಪೇಟೆಯ ಆಂಜನೇಯಸ್ವಾಮಿ ದೇಗುಲದ ಮುಂದಿರುವ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಮುಸ್ಲಿಮರ ಅಂಗಡಿಗಳನ್ನು ಕ್ಲೋಸ್ ಮಾಡಿಸಲಾಗಿದೆ. ಹೀಗಾಗಿ ಈ ಬಗ್ಗೆ ರಾಜಕೀಯ ಪಕ್ಷಗಳ ವಾಕ್ಸಮರ ಅಧಿಕಗೊಂಡಿದೆ.
ಹಿಜಾಬ್ ಬಳಿಕ ರಾಜ್ಯವ್ಯಾಪಿ ಹರಡುತ್ತಿರುವ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ
ರಾಜ್ಯದ ಕೆಲವೆಡೆ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿರುವ ವಿಚಾರಕ್ಕೆ ಸಂಬಂಧಿಸಿ ಬೀದಿಬದಿ ಮುಸ್ಲಿಂ (Muslim) ವ್ಯಾಪಾರಿಗಳಿಗೆ ತೊಂದರೆ ಆಗಬಾರದು ಅಂತ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಟ್ಟು 2.60 ಲಕ್ಷ ನೋಂದಾಯಿತ ಬೀದಿಬದಿ ವ್ಯಾಪಾರಿಗಳಿದ್ದಾರೆ. ಈ ಪೈಕಿ ಶೇಕಡಾ 20ಕ್ಕಿಂತ ಹೆಚ್ಚು ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಬೀದಿಬದಿಯ ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ನೀಡಬೇಡಿ ಅಂತ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Recommended Video
ಈ ಬೆಳವಣಿಗೆಯ ಬಗ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ ಮಾತಣಾಡಿದ ಅವರು ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಬರೆದಿದ್ದಾರೆ. ಅವರು ಬರೆದ ಗೀತೆಯನ್ನು ನಾವು ನಾಡಗೀತೆಯಾಗಿ ಅಳವಡಿಸಿಕೊಂಡಿದ್ದೇವೆ. ಇಂಥ ಸರ್ವ ಜನಾಂಗದ ತೋಟಕ್ಕೆ ಕೊಳ್ಳಿ ಇಡುವ ಕೆಲಸ ಆರಂಭವಾಗಿದೆ. ಇವರು ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಕೋಮು ಸಂಘರ್ಷ ಉಂಟು ಮಾಡಲು ಇದೆಲ್ಲ ಮಾಡುತ್ತಿದ್ದಾರೆ. ಕರಾವಳಿಯ ಸಂಘರ್ಷವನ್ನು ಇಡೀ ರಾಜ್ಯಕ್ಕೆ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರಾರಂಭದ ಹಂತ. ಬಹುಶ: ಇನ್ನೂ ಏಳು ಎಂಟು ತಿಂಗಳಲ್ಲಿ ಏನಾನು ಕಾದಿದಿಯೋ ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.