ಕೊಪ್ಪಳದಲ್ಲಿ ಮೇ 9ರಿಂದ ಲಗ್ಗೆಯಿಡಲಿದ್ದಾನೆ ಹಣ್ಣುಗಳ ರಾಜ!
ಪ್ರಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆ ಮಾವು ಮೇಳವನ್ನು ಆಯೋಜಿಸಿದ್ದು, ವಿವಿಧ ತಳಿಯ ಮಾವಿನ ರುಚಿಯನ್ನು ಸವಿಯಲು ಆ ಭಾಗದ ಜನರಿಗೆ ಅವಕಾಶ ಮಾಡಿಕೊಟ್ಟಿರುವುದು ಈ ಬಾರಿಯ ವಿಶೇಷ.
ಕೊಪ್ಪಳ ಮೇ, 06: ತನ್ನ ವಿಶಿಷ್ಟ ರುಚಿಯಿಂದ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರನ್ನೂ ಸೆಳೆವ ಮಾವಿಗೆ ಹಣ್ಣಿನ ರಾಜ ಎಂಬ ಬಿರುದು ಉತ್ಪ್ರೇಕ್ಷೆಯೇನಲ್ಲ. ಈಗಾಗಲೇ ಮಾವಿನ ಋತು ಶುರುವಾಗಿ, ಮಾರುಕಟ್ಟೆಯ ತುಂಬ ಹಣ್ಣಿನ ರಾಜ ವಿಜೃಂಬಿಸುತ್ತಿದ್ದಾನೆ. ಪ್ರಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆ ಮಾವು ಮೇಳವನ್ನು ಆಯೋಜಿಸಿದ್ದು, ವಿವಿಧ ತಳಿಯ ಮಾವಿನ ರುಚಿಯನ್ನು ಸವಿಯಲು ಆ ಭಾಗದ ಜನರಿಗೆ ಅವಕಾಶ ಮಾಡಿಕೊಟ್ಟಿರುವುದು ಈ ಬಾರಿಯ ವಿಶೇಷ.[ಆಹಾ ಎಂಥಾ ಮಾವು, ಹಲಸು...ಬನ್ರೀ ಲಾಲ್ ಬಾಗ್ ಗೆ, ತಿನ್ರೀ ಮನಸಾರೆ]
ಕೊಪ್ಪಳದ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜನೆಗೊಂಡಿರುವ ಈ ಮೇಳ ಮೇ 09 ರಿಂದ 18 ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ. ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಹಕಾರವೂ ಇದೆ.[ಮೇ 5ರಿಂದ ಮಾವು-ಹಲಸು ಮೇಳ, ಲಾಲ್ ಬಾಗ್ ಗೆ ಬಂದು ಖುಷಿಯಿಂದ ತಿನ್ನಿ]
ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು, ಯೋಗ್ಯ ಬೆಲೆಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಮೇಳವನ್ನು ಕೊಪ್ಪಳ ನಗರದ ಎಲ್ಐಸಿ ಕಚೇರಿ ಎದುರುಗಡೆ ಇರುವ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.[ಡಿಜಿಟಲ್ ಸ್ಪರ್ಷದೊಂದಿಗೆ ಹಾಪ್ಕಾಮ್ಸ್ ಮಾವು-ಹಲಸು ಮೇಳ ಆರಂಭ]
ಮೇಳದ ಮೂಲ ಉದ್ದೇಶ
ರಾಸಾಯನಿಕ ರಹಿತ, ಉತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವುದು, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮತ್ತು ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ಬಗ್ಗೆ ಮಾಹಿತಿ ನೀಡುವುದು, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು, ರೈತರಿಗೆ ಉತ್ತೇಜನ, ಹೊಸ ತಳಿಗಳ ಪರಿಚಯ, ರಾಸಾಯನಿಕ ಬಳಕೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವುದು ಮುಂತಾದ ಪ್ರಮುಖ ಉದ್ದೇಶಗಳನ್ನು ಮೇಳ ಹೊಂದಿದೆ.
ರೈತರಿಗೆ ತಿಳಿವಳಿಕೆ
ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿ, ಮಾವು ಸೇವನೆಯಿಂದಾಗುವ ಪ್ರಯೋಜನಗಳನ್ನು ತಿಳಿ ಹೇಳುವುದು, ಮಾವಿನ ಹಣ್ಣನ್ನು ಸಂಸ್ಕರಿಸಿ ಮಾಡಬಹುದಾದ ಉತ್ಪನ್ನಗಳ ಕುರಿತು ಮಾಹಿತಿ, ವಿದೇಶಿ ವಿನಿಮಯದ ಕುರಿತು ಅರಿವು ಮೂಡಿಸುವುದು, ಮಾವು ಮಂಡಳಿಯ ಸೌಲಭ್ಯ ಮತ್ತು ಪ್ರಯೋಜನಗಳ ಕುರಿತು ರೈತರಲ್ಲಿ ಮಾಹಿತಿ ಮೂಡಿಸುವ ಗುರಿ ಮೇಳದ್ದು.
ರಾಸಾಯಿಕ ಬಳಕೆ ಶಿಕ್ಷಾರ್ಹ ಅಪರಾಧ
ಮಾವಿನ ಹಣ್ಣಿನ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ಸಾಮಾನ್ಯವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಎನ್ನುವ ಹಾನಿಕಾರಕ ರಾಸಾಯನಿಕ ಬಳಸಿ ಹಣ್ಣನ್ನು ಮಾಗಿಸುವುದು ಕಂಡು ಬಂದಿದೆ. ಇದರಿಂದಾಗಿ ಹಣ್ಣುಗಳು ಒಂದೇ ಸಮನಾಗಿ ಪಕ್ವವಾಗದೇ ನಷ್ಟ ಉಂಟಾಗುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್ ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕಾಗಿ ಇದರ ಬಳಕೆ ಒಂದು ಶಿಕ್ಷಾರ್ಹ ಅಪರಾಧವಾಗಿದೆ.
ಖಾಯಿಲೆ ಬಂದೀತು ಹುಷಾರು!
ಇದಲ್ಲದೇ ಕ್ಯಾಲ್ಸಿಯಂ ಕಾರ್ಬೈಡ್ ಒಂದು ಅಪಾಯಕಾರಿ ರಾಸಾಯನಿಕವಾಗಿದ್ದು, ಅರ್ಸೆನಿಕ್, ರಂಜಕದ ಹೈಡ್ರೈಡ್ ಎನ್ನುವ ವಿಷಕಾರಿ ಅಂಶಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅಶಕ್ತತೆ, ಬಾಯಾರಿಕೆ, ವಾಂತಿ ಯಂಥ ಸಣ್ಣ ಪುಟ್ಟ ರೋಗಗಳಷ್ಟೇ ಅಲ್ಲದೆ, ಇಂಥ ಹಣ್ಣುಗಳ ನಿರಂತರ ಸೇವನೆಯಿಂದ ಕ್ಯಾನ್ಸರ್ ನಂಥ ಮಾರಣಾಂತಿಕ ರೋಗಕ್ಕೂ ತುತ್ತಾಗಬೇಕಾಗಬಹುದು.
ತರಹೇವಾರಿ ಮಾವಿನ ಜಾತ್ರೆ!
ಕೊಪ್ಪಳದಲ್ಲಿ ಆಯೋಜಿಸಲಾಗಿರುವ ಮಾವು ಮೇಳದಲ್ಲಿ ಹೆಚ್ಚಾಗಿ ಬೇನಿಶಾ, ತೋತಾಪುರಿ, ರಸಪೂರಿ, ಕೇಸರ್, ಮಲ್ಲಿಕಾ, ಮಲ್ಗೋವಾ, ಆಪೂಸು, ಖಾದರ, ಪುನಾಸ್, ಆಮ್ಲೆಟ್, ಸುವರ್ಣರೇಖಾ, ಚಿನ್ನರಸ, ಪೆದ್ದರಸ, ಲಡ್ಡು ಮುಂತಾದ ತಳಿಯ ಹಣ್ಣುಗಳು ಲಭ್ಯವಾಗುವ ನಿರೀಕ್ಷೆ ಇದೆ. ಕೊಪ್ಪಳದಲ್ಲಿ ಆಯೋಜಿಸಲಾಗಿರುವ ಮಾವು ಮೇಳದಲ್ಲಿ ಭಾಗವಹಿಸುವ ರೈತರು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ತಲುಪಿಸುವ ಉದ್ದೇಶ ಹೊಂದಿದ ಈ ಮಾವು ಮೇಳ ಸರ್ವರಿಗೂ ಪ್ರಯೋಜನಕಾರಿಯಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು.