ಹರಿಹರ-ಬೆಂಗಳೂರು ಇಂಟರ್ ಸಿಟಿ ರೈಲು ರೆಡಿ!
ದಾವಣಗೆರೆ,ನ.2: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ರಾಜ್ಯಕ್ಕೆ ನಾಲ್ಕು ರೈಲುಗಳನ್ನು ಕೊಡುಗೆಯಾಗಿ ನೀಡಿದ ಬೆನ್ನಲ್ಲೇ ಬಹುನಿರೀಕ್ಷಿತ ಹರಿಹರ-ಬೆಂಗಳೂರು ಇಂಟರ್ ಸಿಟಿ ರೈಲು ಸಂಚಾರಕ್ಕೆ ಸಿದ್ಧವಾಗಿರುವ ಸಿಹಿ ಸುದ್ದಿ ಬಂದಿದೆ.
ಹರಿಹರ, ದಾವಣಗೆರೆ, ಕಡೂರು, ಬೀರೂರು, ಅರಸೀಕೆರೆ ಹಾಗೂ ತುಮಕೂರು ಭಾಗದ ಜನರ ಬಹುದಿನಗಳ ಬೇಡಿಕೆಗೆ ಭಾರತೀಯ ರೈಲ್ವೆ ಸ್ಪಂದಿಸಿದ್ದು, ಹರಿಹರ -ಬೆಂಗಳೂರು ಇಂಟರ್ ಸಿಟಿ ರೈಲಿಗೆ ಹಸಿರು ನಿಶಾನೆ ತೋರಿದೆ. ನ.7ರಂದು ಇಂಟರ್ ಸಿಟಿ ರೈಲು ಸಂಚಾರ ಆರಂಭಿಸಲಿದೆ.
ನ.7ರಂದು ಹರಿಹರ -ಬೆಂಗಳೂರು ನಡುವೆ ಇಂಟರ್ ಸಿಟಿ ರೈಲಿನ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಿ.ಎಂ ಸಿದ್ದೇಶ್ವರ ಹೇಳಿದ್ದಾರೆ.ವಾರದಲ್ಲಿ ಮೂರು ದಿನ ರೈಲು ಸಂಚರಿಸಲಿದ್ದು, ಹರಿಹರದಿಂದ ಬೆಳಗ್ಗೆ 5.30ಕ್ಕೆ ಸಂಚಾರ ಆರಂಭಿಸಲಿದೆ ಎಂದು ಸಿದ್ದೇಶ್ವರ್ ಅವರು ವಿವರಿಸಿದರು. [ನಾಲ್ಕು ನೂತನ ರೈಲುಗಳ ವೇಳಾಪಟ್ಟಿ]
ಉದ್ಘಾಟನಾ ದಿನ ಬೆಳಗ್ಗೆ 8.30ಕ್ಕೆ ಹರಿಹರ ರೈಲು ನಿಲ್ದಾಣ ಬಿಡಲಿರುವ ರೈಲು 9 ಗಂಟೆ ಸುಮಾರಿಗೆ ದಾವಣಗೆರೆ ತಲುಪಲಿದೆ. ರೈಲಿನ ವೇಳಾಪಟ್ಟಿ ಬಗ್ಗೆ ಇನ್ನೂ ವಿವರಗಳು ಲಭ್ಯವಾಗಿಲ್ಲ. [ತುಂಗಭದ್ರೆ ಉಸಿರುಗಟ್ಟಿಸುತ್ತಿರುವ ಗಟಾರದ ನೀರು]
ನ.7ರಂದು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಲಾಗುತ್ತದೆ., ಎಪಿಎಂಸಿ ಬಳಿ ರಸ್ತೆಗೆ ಪರ್ಯಾಯ ಸೇತುವೆ ನಿರ್ಮಾಣ, ಅಶೋಕ ರಸ್ತೆ ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ಚಾಲನೆ ನೀಡಲಿದ್ದಾರೆ ಎಂದು ಜಿಎಂ ಸಿದ್ದೇಶ್ವರ್ ಅವರು ಹೇಳಿದರು.