ಬೆಂಗಳೂರಿಗೆ ಬರ್ತಿದ್ದಾರೆ 'ಸಿಂಗಂ' ಅಣ್ಣಾಮಲೈ: 5 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Recommended Video

ಬೆಂಗಳೂರು, ಅಕ್ಟೋಬರ್ 16: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಉಡುಪಿ, ಚಿಕ್ಕಮಗಳೂರುಗಳಲ್ಲಿ ತಮ್ಮ ಖಡಕ್ ನೀತಿಗಳಿಂದ 'ಸಿಂಗಂ' ಎಂಬ ಖ್ಯಾತಿ ಪಡೆದಿರುವ ಅಣ್ಣಾಮಲೈ ಅವರು ರಾಜಧಾನಿ ಬೆಂಗಳೂರಿಗೆ ಕಾಲಿಡುತ್ತಿದ್ದಾರೆ.
ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಉಪ ಆಯುಕ್ತರನ್ನಾಗಿ ನೇಮಿಸಲಾಗಿದೆ. ಚಿಕ್ಕಮಗಳೂರಿನ ಅವರ ಸ್ಥಾನಕ್ಕೆ ಎಸ್ಐಟಿ ಎಸ್ಪಿ ಹರೀಶ್ ಪಾಂಡೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಹರಿಶೇಖರನ್, ಕೆಎಸ್ಆರ್ಪಿ ಒಂದನೇ ಬೆಟಾಲಿಯನ್ನ ಕಮಾಂಡೆಂಟ್ ಅಜಯ್ ಹಿಲೋರಿ ಮತ್ತು ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೊಲೀಸ್ ಇಲಾಖೆಯಲ್ಲಿ ಹಲವು ಬಾರಿ ವರ್ಗಾವಣೆಗಳನ್ನು ಮಾಡಲಾಗಿದೆ. ಆದರೆ, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಗೃಹಸಚಿವ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸಮನ್ವಯ ಸಮಿತಿಯ ಮುಂದೆ ಬೇಸರ ತೋಡಿಕೊಂಡಿದ್ದರು.
ಗೃಹ ಸಚಿವರ ಗಮನಕ್ಕೆ ತಾರದೆಯೇ ಅವರ ಖಾತೆಗೆ ಸಂಬಂಧಿಸಿದ ಬದಲಾವಣೆಗಳನ್ನು ಮಾಡುವುದು ಸರಿಯಲ್ಲ ಎಂದು ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು ಎನ್ನಲಾಗಿದೆ.
ತಮ್ಮ ಇಲಾಖೆಯಲ್ಲಿನ ಹಸ್ತಕ್ಷೇಪದಿಂದ ಕೋಪಗೊಂಡಿದ್ದ ಪರಮೇಶ್ವರ್, ಅದೇ ಕಾರಣಕ್ಕೆ ಹಠಾತ್ತಾಗಿ ರಾತ್ರಿ ವೇಳೆ ವರ್ಗಾವಣೆ ಆದೇಶ ಹೊರಡಿಸಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications