Breaking:ಅಗ್ನಿಪಥ್- ಉತ್ತರ ಭಾರತದಲ್ಲಿ ಸಿಲುಕಿದ್ದ 164 ಕರ್ನಾಟಕ ಪ್ರವಾಸಿಗರ ರಕ್ಷಣೆ
ಬೆಂಗಳೂರು, ಜೂನ್ 22: ಉತ್ತರ ಭಾರತದ ಕಾಶಿ ಸೇರಿದಂತೆ ವಿವಿಧ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಕರ್ನಾಟಕದ ನೂರಾರು ಯಾತ್ರಿಗಳು ತೆರಳಿದ್ದರು. ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 164ಕ್ಕೂ ಅಧಿಕ ಪ್ರವಾಸಿಗರನ್ನು ಸುರಕ್ಷಿತವಾಗಿ ಕರುನಾಡಿಗೆ ವಾಪಸ್ ಕರೆತರಲಾಗಿದೆ. ಕರುನಾಡಿಗೆ ವಾಪಸ್ಸಾದ ಯಾತ್ರಿಕರ ಕಣ್ಣಲ್ಲಿ ಕೃತಜ್ಞತಾ ಭಾವ ಕಂಡು ಬಂದಿದೆ.
ಉತ್ತರ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಕಾಶಿ, ವಾರಾಣಾಸಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರ್ನಾಟಕದಿಂದ ನೂರಾರು ಜನ ತೆರಳಿದ್ದರು. ಉತ್ತರ ಭಾರತದ ಹಲವು ಭಾಗಗಳಲ್ಲಿ ಅಗ್ನಿಪಥ್ ಯೋಜನೆಯನ್ನು ವಿರೋಧಿ ತೀವ್ರವಾದ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳು ಹಿಂಸಾ ಸ್ವರೂಪವನ್ನು ಪಡೆದು ರಸ್ತೆಗಳು ಬಂದ್ ಆಗಿದ್ದವು.
ಅಗ್ನಿ ಪಥ್ ವಿರೋಧಿ ನಡೆಯುತ್ತಿರುವ ತೀವ್ರ ಸ್ವರೂಪದ ಹಿಂಸಾಚಾರಕ್ಕೆ ಪ್ರವಾಸಿಗರು ತತ್ತರಿಸಿ ಹೋಗಿದ್ದರು. ಉತ್ತರ ಭಾರತದ ಆತಂಕಕ್ಕೆ ಈಡಾಗಿದ್ದ ಪ್ರವಾಸಿಗರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಉತ್ತರ ಭಾರತದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಎಲ್ಲ 164 ಪ್ರವಾಸಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸು ಬರಲು ಶ್ರಮಿಸಿದ್ದಾರೆ.
ಪ್ರವಾಸಕ್ಕೆ ತೆರಳಿದ್ದ 164 ಪ್ರವಾಸಿಗರ ರಕ್ಷಣೆ:
ವಯೋವೃದ್ಧರು ಸೇರಿದಂತೆ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ 164ಕ್ಕೂ ಅಧಿಕ ಪ್ರವಾಸಿಗರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರದಲ್ಲಿರುವ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರ ಕಚೇರಿಗೆ ಆಗಮಿಸಿ ಸುರಕ್ಷಿತವಾಗಿ ವಾಪಸ್ಸಾಗಲು ನೆರವಾಗಿದ್ದಕ್ಕೆ ದನ್ಯವಾದವನ್ನು ಹೇಳಿದ್ದಾರೆ.
ಈ ವೇಳೆ ಸಚಿವ ಗೋಪಾಲಯ್ಯ ಎಲ್ಲ ಪ್ರಯಾಣಿಕರನ್ನು ಬರಮಾಡಿಕೊಂಡು ಅವರ ಆರೋಗ್ಯ ವಿಚಾರಿಸಿ, ಉಪಹಾರದ ವ್ಯವಸ್ಥೆ ಕಲ್ಪಿಸಿಕೊಟ್ಟರು. ನಂತರ ಎಲ್ಲರಿಗೂ ಅವರ ಜಿಲ್ಲೆಗಳಿಗೆ ತೆರಳಲು ಬಸ್ಗಳ ವ್ಯವಸ್ಥೆ ಕಲ್ಪಿಸಿದರು. ಊರಿಗೆ ಹೊರಟು ನಿಂತ ಪ್ರವಾಸಿಗರು ಸಚಿವ ಕೆ.ಗೋಪಾಲಯ್ಯ ಅವರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿ ತಮ್ಮ ಈ ಉಪಕಾರವನ್ನು ಎಂದೂ ಮರೆಯುವುದಿಲ್ಲ ಸ್ಮರಿಸಿದರು.