Get Updates
Get notified of breaking news, exclusive insights, and must-see stories!

Raghav Chadha: ರಾಘವ್ ಚಡ್ಡಾ: ಉಲ್ಕಾ ರಾಜಕೀಯಕ್ಕೆ ಎಷ್ಟು ಕಿಮ್ಮತ್ತು: ರಾಜಾರಾಂ ತಲ್ಲೂರು ಬರಹ

Raghav Chadha: ರಾಘವ್ ಚಡ್ಡಾ: ಉಲ್ಕಾ ರಾಜಕೀಯಕ್ಕೆ ಎಷ್ಟು ಕಿಮ್ಮತ್ತು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಮಹಾನಗರಗಳಲ್ಲಿ, ರಾತ್ರೋರಾತ್ರಿ ಉದಯಿಸುವ ರಾಜಕೀಯ ಸಮೀಕರಣಗಳನ್ನಾಧರಿಸಿದ ಪಕ್ಷಗಳು, ನಾಯಕರು ಮತ್ತು ಅವರ ರಾಜಕಾರಣಗಳಿಗೆ ಎಷ್ಟು ಕಿಮ್ಮತ್ತು ಕೊಡಬೇಕು ಎಂಬುದನ್ನು ಭಾರತ ನಿರ್ಧರಿಸಿಕೊಳ್ಳದಿದ್ದರೆ, ಇಲ್ಲಿ ರಾಜಕೀಯ ಮತ್ತೆ ಸಾವಯವ ಹಳಿಗೆ ಮರಳುವುದಾಗಲೀ ಅಥವಾ ಪರ್ಯಾಯವೊಂದು ಸೃಷ್ಟಿಯಾಗುವುದಾಗಲೀ ಸಾಧ್ಯವೇ ಇಲ್ಲದ ಸ್ಥಿತಿ ಉಂಟಾಗಲಿದೆ; ಆ ಹಾದಿಯಲ್ಲಿ ದೇಶ ಒಂದು ಪುಟ್ಟ ದೂರ ಕ್ರಮಿಸಿಯೂ ಆಗಿದೆ ಎಂಬುದೇ ಈವತ್ತಿನ ಆತಂಕ ಆಗಬೇಕಿತ್ತೇ ಹೊರತು ರಾಘವ್ ಛಡ್ಡಾ ಯಾಕೆ ಹಿಂಬಡ್ತಿ ಪಡೆದರು ಎಂಬುದಲ್ಲ.

Raghav Chadha

ಈ ರಾತ್ರೋರಾತ್ರಿ ಉದುರುವ ರಾಜಕಾರಣಕ್ಕೆ ತಳಮಟ್ಟದ ಸಂಕಟಗಳು ಕಾಣಿಸುವುದಿಲ್ಲ ಮತ್ತು ಅಂತಹ ಸಂಕಟಗಳನ್ನು ನೀತ್ಯಾತ್ಮಕ ಬದಲಾವಣೆಗಳ ಮೂಲಕ ಬದಲಾಯಿಸುವ ಕಾಣ್ಕೆಗಳೂ ಅವರಲ್ಲಿ ಇರುವುದಿಲ್ಲ. ಈ ಎಲ್ಲ "ಪರ್ಯಾಯವೆಂದು ಬಿಂಬಿಸಿಕೊಂಡ" ತೊರೆಗಳೂ ಇಂದಲ್ಲ ನಾಳೆ ಸೇರುವುದು ಅದೇ ಹಳೆಯ ಚರಂಡಿಗಳಿಗೇ- ಕಾದು ನೋಡಿ ಬೇಕಿದ್ದರೆ. ರಾಘವ್ ಛಡ್ಡಾ ಸಂಸತ್ತಿನಲ್ಲಿ ಎತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಪ್ರಶ್ನೆಗಳೂ ತೀರಾ ಹೊರಪದರದ ಸಂಗತಿಗಳು ಮತ್ತು ತಾನು ಪ್ರತಿನಿಧಿಸುವ ಮಧ್ಯಮ ವರ್ಗಕ್ಕೆ, ತಕ್ಷಣಕ್ಕೆ ತಲುಪುವಂತಹವು. ಸ್ವಂತದ ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ತಂಡಕ್ಕೆ ವೃತ್ತಿಪರ ಸಂಬಳ ಸಿಕ್ಕಿದರೆ, ವೈರಲ್ ಆಗುವುದಕ್ಕೆ, ರಾಷ್ಟ್ರನಾಯಕ ಅನ್ನಿಸಿಕೊಳ್ಳುವುದಕ್ಕೆ ಈಗ ಹೆಚ್ಚು ಖರ್ಚಿಲ್ಲ.

ರಾಘವ್ ಛಡ್ಡಾ ಅವರನ್ನು "ಡೌನ್‌ಗ್ರೇಡ್" ಮಾಡಿದ್ದಕ್ಕೆ ಕಾರಣ ನೀಡುತ್ತಾ, ಅವರು ಆಡಳಿತ ಪಕ್ಷದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಆತಿಷಿ ಅವರು ಹೇಳಿದ ವೀಡಿಯೊ ಒಂದನ್ನು ಗಮನಿಸಿದೆ. ಇದೂ ಕೂಡ, ಅದೇ ಬೇರಿಲ್ಲದೆ ಬೆಳೆಯಬಲ್ಲ ರಾಜಕೀಯದ್ದೇ ಯೋಚನಾಲಹರಿ. ಕೇಜ್ರಿವಾಲ್ ಮಾದರಿಯಲ್ಲಿ ಈವತ್ತಿನ ಆಡಳಿತದ ಪಕ್ಷದ ಬಾನಗಡಿಗಳನ್ನು ರಾಜಕೀಯವಾಗಿ ಎದುರಿಸಲು ಸಾಧ್ಯ ಆಗುತ್ತದೆ ಎಂಬುದು ಕೂಡ ಅಷ್ಟೇ ಸಿನಿಕ ಕಲ್ಪನೆ ಮತ್ತು ಸಂತೆಯ ಹೊತ್ತಿಗೆ ಹೆಣೆದುತಂದ ಒಂದು ಮಾರು.

ಈ ದೇಶದ ಬೇರು ಮಟ್ಟದ ಅರಿವೇ ಇಲ್ಲದ, ಮಿಡ್ಲ್‌ಕ್ಲಾಸ್ ರಾಜಕೀಯವು ರಾತ್ರೋರಾತ್ರಿ ಹುಟ್ಟಸಿ ಧರೆಗಿಳಿಸುವ ರಾಜಕೀಯ ಉಲ್ಕೆಗಳು ಯಾವುವೂ ದೀರ್ಘಕಾಲ ಬಾಳ್ವಿಕೆ ಬರುವಂತಹವಲ್ಲ. ಅವು ಮತ್ತು ಅವುಗಳ ಯೋಚನೆ-ಚಿಂತನೆಗಳು ತೀರಾ ಹೊರಪದರದ, ಕೆರೆಸಿದರೆ ಉದುರಿಹೋಗಬಲ್ಲಷ್ಟೇ ದಪ್ಪದವು. ಇದು ದೇಶದ ಇಂದಿನ ಆಡಳಿತ ಪಕ್ಷ ಬಿಟ್ಟು ಬೇರೆಲ್ಲ ರಾಜಕೀಯ ಪಕ್ಷಗಳಿಗೂ ಸತ್ಯ.

ಬೇರುಗಳು ಗಟ್ಟಿ ಇಲ್ಲದ ರಾಜಕೀಯ

ದೇಶವನ್ನಾಳುತ್ತಿರುವ ಪಕ್ಷ ಕೂಡ ರಾತ್ರೋರಾತ್ರಿ ನಾಯಕರನ್ನು ಮುಂಚೂಣಿಗೆ ತಂದಿದೆ; ಯಶಸ್ಸು ಕಂಡಿದೆ. ಏಕೆಂದರೆ ಅವರ ಬೇರುಗಳು ಇಂದು ಗಟ್ಟಿಯಾಗಿವೆ. ತೀರಾ ಸಡಿಲು, ದುರ್ಬಲ ವ್ಯಕ್ತಿತ್ವಗಳೂ ಅಲ್ಲಿ ರಾಷ್ಟ್ರನಾಯಕರಾಗಿ ಪೋಸ್ ಕೊಡುವುದು ಸಾಧ್ಯ ಆಗುತ್ತಿದೆ. ಗಿಡ ಬೆಳೆದ ಬಳಿಕ ಬೇರು ಬೆಳಸುವ ಸಸ್ಯಶಾಸ್ತ್ರ ಪರಿಣತಿ/ಪೇಟೆಂಟ್ ಅವರ ಬಳಿ ಈಗ ಇದೆ.

ಅದಕ್ಕಾಗಿ ಅವರು 30-40 ವರ್ಷ ಕಾದಿದ್ದಾರೆ. ಅದನ್ನು ಬೇರೆಪಕ್ಷಗಳು ಅನುಕರಿಸುವುದು ಇವತ್ತಿನ ಸ್ಥಿತಿಯಲ್ಲಿ ಸಾಧ್ಯ ಇಲ್ಲ. ಬೇರುಮಟ್ಟದಲ್ಲಿ ರಾಜಕೀಯ ಅನುಭವಗಳನ್ನು ಪಡೆಯುವ ಅವಕಾಶಗಳನ್ನು ಮಾಡಿಕೊಡುತ್ತಾ, ದೀರ್ಘಕಾಲಿಕ ರೇಸ್‌ಗೆ ಸಿದ್ಧರಾಗಬಲ್ಲ ರಾಜಕೀಯ ನಾಯಕತ್ವಗಳನ್ನು ತಯಾರಿ ಮಾಡುವುದಕ್ಕೆ ಮುಂದಡಿ ಇಡದ ಯಾವುದೇ ಪಕ್ಷ ಸದ್ಯಕ್ಕೆ ಮೇಲೆ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಈ ಒಂದು ಬಾರಿ ಅವರೆದುರು ಗೆದ್ದ ಬಳಿಕ, ಮುಂದಿನಬಾರಿ ಎಲ್ಲ ಸರಿಪಡಿಸಿಕೊಳ್ಳೋಣ ಎಂಬ ತೇಪೆ ಹೊಡೆದೂ ಹೊಡೆದೂ, 15 ವರ್ಷಗಳಲ್ಲಿ ಬಟ್ಟೆ ಚಿಂದಿಯೇಳತೊಡಗಿದೆ. ದಾವಣಗೆರೆಯಿಂದ ದಿಲ್ಲಿಯವರೆಗೂ ಇದೇ ಕಥೆ. "ಬೇರಿಲ್ಲದೇ ಇದ್ದರೂ ಗಿಡ ಬೆಳೆದೇ ತೀರುತ್ತದೆಂಬ ಭರವಸೆ" ಇವರಿಗೆಲ್ಲ ಯಾವ ಅಷ್ಟಮಂಗಲ ಪ್ರಶ್ನಚಿಂತನದಲ್ಲಿ ಸಿಕ್ಕಿತೋ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+