ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ
ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಮತ್ತು ನಯನತಾರ-ವಿಘ್ನೇಶ್ ಶಿವನ್ ದಂಪತಿ ನಡುವಿನ ಮನಸ್ತಾಪದ ಬಗ್ಗೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ತಮ್ಮ ಮುಂಬರುವ ಚಿತ್ರ 'ಲವ್ ಇನ್ಶೂರೆನ್ಸ್ ಕೊಂಪನಿ' ಪ್ರಚಾರದ ವೇಳೆ ಮಾತನಾಡಿರುವ ವಿಘ್ನೇಶ್ ಶಿವನ್, ಧನುಷ್ ಜೊತೆ ಸ್ನೇಹ ಕಳೆದುಕೊಂಡಿರುವುದು ನನ್ನ ಜೀವನದ ಅತಿ ದೊಡ್ಡ ನಷ್ಟ ಎಂದು ಬೇಸರ ಹಂಚಿಕೊಂಡಿದ್ದಾರೆ.
ತಪ್ಪು ನನ್ನದೇ ಇರಬಹುದು
ನನ್ನ ತಂದೆ ನಿಧನರಾದ ದಿನವೇ (ಜುಲೈ 28) ಧನುಷ್ ಅವರ ಹುಟ್ಟುಹಬ್ಬವೂ ಬರುತ್ತದೆ. ಆದ್ದರಿಂದ ನಾನು ಅವರನ್ನು ಯಾವಾಗಲೂ ಒಬ್ಬ ತಂದೆಯ ಸಮಾನವಾಗಿ ನೋಡುತ್ತಿದ್ದೆ ಎಂದು ವಿಘ್ನೇಶ್ ಹೇಳಿದ್ದಾರೆ. ನಮ್ಮ ನಡುವಿನ ಈ ಅಂತರಕ್ಕೆ ಎಲ್ಲೋ ಒಂದು ಕಡೆ ನಾನೇ ಮಾಡಿದ ತಪ್ಪು ಕಾರಣವಿರಬಹುದು. ಆ ಸುಂದರವಾದ ಸಂಬಂಧವನ್ನು ಕಳೆದುಕೊಂಡಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಿನ ನನ್ನ ಬದುಕಿನಲ್ಲಿ ಧನುಷ್ ಸರ್ ಅವರಿಗೆ ಅತ್ಯಂತ ವಿಶೇಷವಾದ ಸ್ಥಾನವಿದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

'ವಿಐಪಿ' ಚಿತ್ರದ ಸಮಯದಲ್ಲಿ ತಾವು ಧನುಷ್ ಜೊತೆ ಕಳೆದ ಎರಡು ವರ್ಷಗಳ ಕಾಲದ ಒಡನಾಟವನ್ನು ಅವರು ನೆನಪಿಸಿಕೊಂಡಿದ್ದಾರೆ. ನಾನು ಧನುಷ್ ಸರ್ ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಸತತ ಎರಡು ವರ್ಷಗಳ ಕಾಲ ಕಳೆದಿದ್ದೆ. ಆ ಸಮಯದಲ್ಲಿ ಅವರ ಮೇಲೆ ನನಗಿದ್ದ ಗೌರವ ಎಷ್ಟಿತ್ತೆಂದರೆ, ಧನುಷ್ ಅವರು ಊಟ ಮಾಡಿ ಮುಗಿಸಿದ ನಂತರವೇ ನಾನು ಊಟಕ್ಕೆ ಕುಳಿತುಕೊಳ್ಳುತ್ತಿದ್ದೆ ಎಂದು ತಮ್ಮ ಒಡನಾಟವನ್ನು ನೆನೆದಿದ್ದಾರೆ.
ಕೆಲವೊಮ್ಮೆ ಇಬ್ಬರು ವ್ಯಕ್ತಿಗಳ ನಡುವೆ ಅನಿರೀಕ್ಷಿತ ಘಟನೆಗಳು ನಡೆದಾಗ, ಆ ಸಂದರ್ಭದ ಗಂಭೀರತೆ ನಮಗೇ ಸರಿಯಾಗಿ ಅರ್ಥವಾಗುವುದಿಲ್ಲ. ನಮ್ಮ ನಡುವೆ ನಡೆದ ಘಟನೆಗಳ ಬಗ್ಗೆ ಈಗ ನನಗೆ ನಾಚಿಕೆಯಾಗುತ್ತಿದೆ ಮತ್ತು ಆ ಸಂಬಂಧವನ್ನು ಕಳೆದುಕೊಂಡಿದ್ದು ನನ್ನ ಅತಿದೊಡ್ಡ ನಷ್ಟ ಎಂದು ವಿಘ್ನೇಶ್ ಹೇಳಿದ್ದಾರೆ.

ಏನಿದು ವಿವಾದ?
ಕಳೆದ ವರ್ಷ ನಟಿ ನಯನತಾರ ಅವರ ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲಿ, ಧನುಷ್ ನಿರ್ಮಾಣದ 'ನಾನುಂ ರೌಡಿ ದಾನ್' ಚಿತ್ರದ 3 ಸೆಕೆಂಡ್ನ ಬಿಟಿಎಸ್ ವಿಡಿಯೋ ಬಳಸಿದ್ದಕ್ಕೆ ಧನುಷ್ ಅವರು 10 ಕೋಟಿ ರೂ.ಗಳ ಹಕ್ಕುಸ್ವಾಮ್ಯ (Copyright) ನೋಟಿಸ್ ನೀಡಿದ್ದರು. ಇದು ನಯನತಾರಾ ಮತ್ತು ಧನುಷ್ ನಡುವೆ ದೊಡ್ಡ ಬಹಿರಂಗ ಪತ್ರ ಸಮರಕ್ಕೆ ಕಾರಣವಾಗಿತ್ತು. ಈಗ ವಿಘ್ನೇಶ್ ಶಿವನ್ ಅವರ ಈ ಹೇಳಿಕೆಯು ಧನುಶ್ ಹಾಗೂ ನಯನತಾರ ಇಬ್ಬರ ನಡುವಿನ ಮನಸ್ತಾಪ ಶಮನವಾಗಬಹುದೇ ಎಂಬ ಕುತೂಹಲ ಮೂಡಿಸಿದೆ. ವಿಘ್ನೇಶ್ ಶಿವನ್ ನಿರ್ದೇಶನದ, ಪ್ರದೀಪ್ ರಂಗನಾಥನ್ ನಟನೆಯ 'ಲವ್ ಇನ್ಶೂರೆನ್ಸ್ ಕೊಂಪನಿ' ಚಿತ್ರವು ಇದೇ ಏಪ್ರಿಲ್ 10ರಂದು ತೆರೆಕಾಣಲಿದೆ.












Click it and Unblock the Notifications